ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಆವಲಗುರ್ಕಿ ಬಳಿಯ ಈಶ ಫೌಂಡೇಶನ್ ನ ಸದ್ಗುರು ಸನ್ನಿಧಿ, ಆದಿಯೋಗಿ ಸಮ್ಮುಖದಲ್ಲಿ ಭಾರತೀಯ ಸೇನೆಯ 5 ಸಾವಿರ ರಕ್ಷಣಾ ಸಿಬ್ಬಂದಿ, ಸ್ಥಳೀಯ ವಿವಿಧ ಸಂಘ- ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿ ಆರು ಸಾವಿರಕ್ಕೂ ಅಧಿಕ ಮಂದಿ ಒಟ್ಟುಗೂಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಐಕ್ಯತೆಯ ಪ್ರದರ್ಶನದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ತಾಲೂಕುಗಳ ಸುಮಾರು 1 ಸಾವಿರ ಸ್ಥಳೀಯ ಸಮುದಾಯದ ಜನರೊಂದಿಗೆ 45 ನಿಮಿಷಗಳ ಯೋಗ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಯೋಗಾಭ್ಯಾಸ ನಂತರ ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್ ಮಾತನಾಡಿ, ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಸಾರ್ವಜನಿಕರು ಮತ್ತು ವಿಶೇಷವಾಗಿ ಎನ್ಸಿಸಿ ಕೆಡೆಟ್ ಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು, ಇದು ನಮ್ಮಲ್ಲಿನ ಶಿಸ್ತನ್ನು ಬೆಳೆಸುತ್ತದೆ, ಅಲ್ಲದೆ ಐಕ್ಯತೆ ಮತ್ತು ಶಕ್ತಿಯನ್ನು ವೃದ್ಧಿಸುತ್ತದೆ. ಸತತವಾಗಿ ಎರಡನೇ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಸುದೈವ, ಇದಕ್ಕಾಗಿ ಸದ್ಗುರು ಸನ್ನಿಧಿಗೆ ಧನ್ಯವಾದ ಅರ್ಪಿಸುವೆ ಎಂದರು ಹೇಳಿದರು.ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ದಿನೇಶ್ ಕುಮಾರ್ ಯಾದವ್ ಮಾತನಾಡಿ, ಬಿಎಸ್ಎಫ್ ತನ್ನ ಎಲ್ಲಾ ಸದಸ್ಯರಿಗೆ ದೊಡ್ಡ ಪ್ರಮಾಣದಲ್ಲಿ ಯೋಗವನ್ನು ನೀಡಲು ಈಶ ಫೌಂಡೇಶನ್ ಸಹಕಾರಿಯಾಗಿದೆ, ಸದ್ಗುರುಗಳ ಮಾರ್ಗದರ್ಶನದಲ್ಲಿ ಈಶ ಹಲವಾರು ಸಾಮಾಜಿಕ, ಪರಿಸರ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಸ್ವಯಂ ಸೆರೆವಾಸದಿಂದ ಮುಕ್ತಿ- ಜೈಲುಗಳಲ್ಲಿ ಯೋಗ:ವಾರಾಂತ್ಯದಲ್ಲಿ ಜೈಲುಗಳಲ್ಲಿರುವ ಖೈದಿಗಳಿಗೆ ಈಶ ಫೌಂಡೇಶನ್ ಉಚಿತ ಯೋಗ ತರಗತಿಗಳನ್ನು ಸಹ ನೀಡುತ್ತಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಜೂನ್ ತಿಂಗಳಿನಲ್ಲಿ ಕರ್ನಾಟಕದಾದ್ಯಂತ 50 ಜೈಲುಗಳಲ್ಲಿ ಸೇಷನ್ ಗಳನ್ನು ನಡೆಸಲು ನೂರಾರು ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು.
ಖೈದಿಗಳಿಗೆ ಯೋಗಾಸನಗಳು , ತಂತ್ರಜ್ಞಾನ ಪರಿಚಯಿಸಲು ಮತ್ತು ಅವರ ದೈಹಿಕ, ಮಾನಸಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಅನುವು ಮಾಡಿಕೊಡಲು ಈ ಸೇಷನ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಶಿಸ್ತುಬದ್ಧ ಯೋಗಾಭ್ಯಾಸದಿಂದ ಖೈದಿಗಳು ಆಂತರಿಕ ಸ್ವಾತಂತ್ರ್ಯ ಮತ್ತು ಸಂತೋಷ ಅನುಭವಿಸಲು ಸಾಧ್ಯವಾಗುತ್ತದೆ ಎಂಬುದನ್ನು ತೋರಿಸಿಕೊಡುವುದು ಇದರ ಉದ್ದೇಶವಾಗಿತ್ತು.ರಾಜ್ಯಾದ್ಯಂತ ಭಾಗವಹಿಸಿದ 1 ಲಕ್ಷಕ್ಕೂ ಹೆಚ್ಚು ಜನ:
ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮುನ್ನ 1 ಸಾವಿರಕ್ಕೂ ಹೆಚ್ಚು ಈಶ ಸ್ವಯಂ ಸೇವಕರು ರಾಜ್ಯಾದ್ಯಂತ ಜೂನ್ ತಿಂಗಳುದ್ದಕ್ಕೂ ಉಚಿತ ಯೋಗ ಸೇಷನ್ ಗಳನ್ನು ನೀಡಲು ತರಬೇತಿ ಪಡೆದಿದ್ದರು. ಜೂ. 21 ರಂದು ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಿನವಿಡೀ ಯೋಗ ಸೆಷನ್ ಗಳನ್ನು ನಡೆಸಲಾಯಿತು. 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.ಈ ಯೋಗ ಕಾರ್ಯಕ್ರಮದಲ್ಲಿ ಎಸ್ಟಿಸಿ ಬಿಎಸ್ಎಫ್, ಮುಖ್ಯ ಪ್ರಶಿಕ್ಷಕ ಕರ್ನಲ್ ವಿನಯ್, ಡೆಪ್ಯೂಟಿ ಕಮಾಂಡೆಂಟ್ ಸತೀಶ್ ಕುಮಾರ್ ಮಿಶ್ರ, ಮತ್ತಿತರರು ಭಾಗವಹಿಸಿದ್ದರು.