ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ರಾಂಪುರ ಪಿಎಸ್ಐ ಬಾಹುಬಲಿ, ಆಹಾರ ಇಲಾಖೆ ಶಿರಸ್ತೇದಾರ್ ಗೀತಾಂಜನೇಯ ಈ ವೇಳೆ ಹಾಜರಿದ್ದರು. ನಿರ್ಜನ ಪ್ರದೇಶದಲ್ಲಿ ಮುಳ್ಳಿನ ಪೊದೆಯ ನಡುವೆ, ಯಾರಿಗೂ ತಿಳಿಯದಂತೆ ತಾಡಪಾಲ್ ಹೊದಿಸಿ ಅಕ್ಕಿ ಸಂಗ್ರಹಿಸಿಡಲಾಗಿತ್ತು. ದಾಳಿ ವೇಳೆ 523 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಕೋನಾಪುರ ರಾಮು ಎಂಬುವರು ಈ ಅಕ್ಕಿಯನ್ನು ದಾಸ್ತಾನು ಮಾಡಿದ್ದರು ಎನ್ನಲಾಗಿದ್ದು, ಈ ಸಂಬಂಧ ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಮು ಸಹಿತ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಇದು ಅನ್ನಭಾಗ್ಯಕ್ಕೆ ಸೇರಿದ ಅಕ್ಕಿಯಾಗಿದ್ದು, ಶೀಘ್ರವೇ ಈ ಅಕ್ಕಿಯನ್ನು ಬೇರೆ ಕಡೆ ಸಾಗಿಸಲು ಯತ್ನ ನಡೆದಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಅ.16ರಂದು ಮೊಳಕಾಲ್ಮೂರಿನ ಚೌಡಿಪುರ ಗ್ರಾಮದ ಸರ್ಕಾರಿ ಸಮುದಾಯ ಭವನದಲ್ಲಿ ಅನ್ನಭಾಗ್ಯಕ್ಕೆ ಸೇರಿದ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ನೂರಾರು ಅಕ್ಕಿ ಚೀಲಗಳು ದಾಳಿ ವೇಳೆ ಪತ್ತೆಯಾಗಿದ್ದವು.