ಬಿ. ರಾಮಪ್ರಸಾದ್ ಗಾಂಧಿ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು, ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಬಹುದು. ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರವೇ ಸಹಾಯಧನ ನೀಡುತ್ತದೆ. ಈ ಯೋಜನೆಯಡಿ ಶ್ರೀಗಂಧ, ತೇಗ, ಹೆಬ್ಬೇವು, ಮಹಾಗನಿ ಮೊದಲಾದ ಗಿಡಗಳನ್ನು ಪಡೆದು ಬೆಳೆಸಬಹುದು.
ಹರಪನಹಳ್ಳಿ ಪ್ರಾದೇಶಿಕ ವಲಯದಲ್ಲಿ ಒಟ್ಟು 24,560 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿ ಚಿರತೆ, ಕರಡಿ, ನವಿಲು, ತೋಳಗಳ ಸಂಖ್ಯೆ ಹೆಚ್ಚಾಗಿದೆ. ಪರಿಸರ ದಿನಾಚರಣೆ ಮುಖಾಂತರ ಸಾರ್ವಜನಿಕರಲ್ಲಿ ಅರಣ್ಯದ ಮಹತ್ವ ಅರಿವು ಮೂಡಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.ಬರದ ನಾಡನ್ನು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೂ ಜನರಲ್ಲಿ ಇನ್ನೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಬರಬೇಕಿದೆ. ನೆಟ್ಟ ಸಸಿಗಳನ್ನು ಪೋಷಣೆ ಮಾಡುವ ಹೊಣೆಗಾರಿಕೆ ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ. ಎಲ್ಲವನ್ನೂ ಸರ್ಕಾರವೇ ಆಡಳಿತ ವರ್ಗವೇ ಮಾಡಲು ಸಾಧ್ಯವಿಲ್ಲ.
53 ಸಾವಿರ ಸಸಿ ನೆಡುತೋಪು: ತಾಲೂಕಿನ ರಸ್ತೆ ಬದಿ ಮತ್ತು ಕಾಡಿನ ಪ್ಲಾಂಟೇಶನ್ನಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಪೋಷಣೆ ಮಾಡಲು ಯೋಜಿಸಲಾಗಿದೆ. ಮಹಾಘನಿ, ಹಿಪ್ಪುನೇರಳೆ, ಕಾಡು ಬದಾಮಿ, ಹೊಂಗೆ, ಬೇವು, ಅರಳಿ, ಬಸರಿ, ತಾರೆ, ನೆಲ್ಲಿ, ಬಿದಿರು, ಹಾಲಾ, ಹಾಲೇ, ಉದಯ, ನೇರಳೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯಿಂದ ಸಸಿ ಪಡೆಯಲು ರೈತರು ಮೊದಲು ಹರಪನಹಳ್ಳಿ ಪ್ರಾದೇಶಿಕ ಅರಣ್ಯ ವಲಯಕ್ಕೆ ತೆರಳಿ ಪಹಣಿ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ದಾಖಲಾತಿ ಕೊಟ್ಟು ನೋಂದಣಿ ಮಾಡಿಸಿ ಆನಂತರ ಸಸಿಗಳನ್ನು ಪಡೆಯಬೇಕು ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಲ್ಲಪ್ಪ ತಿಳಿಸಿದ್ದಾರೆ.ಕಳೆದ ವಾರದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಸಸಿಗಳ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ವಿತರಣೆಗಾಗಿ ಬೆಳೆಸಿರುವ ಸಸಿಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ವಿತರಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲಾನ್ ಹೇಳುತ್ತಾರೆ.