ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಭಾಗದ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ(ವಿಟಿಪಿಸಿ) ಬೆಂಗಳೂರು, ರಫ್ತು ಸೌಲಭ್ಯ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಯೆಯ್ಯಾಡಿ ಇವರ ಸಹಯೋಗದಲ್ಲಿ ಆರು ದಿನಗಳ ಭಾರತ ಸರ್ಕಾರದ RAMP ಯೋಜನೆಯಡಿ 6 ನೇ ರಫ್ತು ಹಾಗೂ ವಿಟಿಪಿಸಿ ಬೆಂಗಳೂರು ವತಿಯಿಂದ 129 ನೇ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಯೆಯ್ಯಾಡಿಯಲ್ಲಿ ಸೋಮವಾರ ಆರಂಭಗೊಂಡಿತು.ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ವಿಶಾಲ್ ಸಾಲ್ಯಾನ್ ಉದ್ಘಾಟಿಸಿದರು. ಕೆನರಾ ಕೈಗಾರಿಕಾ ಸಂಘ, ಬೈಕಂಪಾಡಿ, ಇದರ ಅಧ್ಯಕ್ಷ ಅರುಣ್ ಪಡಿಯಾರ್ ಮುಖ್ಯ ಅತಿಥಿಗಳಾಗಿದ್ದರು. ಸಿಪಿಸಿ ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ಬಾಬು ನಾಗೇಶ ಅಧ್ಯಕ್ಷತೆ ವಹಿಸಿದ್ದರು.
ರಫ್ತು ಸೌಲಭ್ಯ ಕೇಂದ್ರ ಮಂಗಳೂರು ವಿಭಾಗದ ಉಪ ನಿರ್ದೇಶಕ ಮಂಜುನಾಥ್ ಹೆಗಡೆ ನಿರೂಪಿಸಿದರು.6 ದಿನಗಳ ತರಬೇತಿ, ರಫ್ತುದಾರರು, ಆಸಕ್ತರಿಗೆ ಉಪಯುಕ್ತ
ರಫ್ತು ವ್ಯವಹಾರ ಪ್ರಾರಂಭಿಸಲಿಚ್ಛಿಸುವವರು, ಹಾಲಿ ರಫ್ತುದಾರರು, ವ್ಯಾಪಾರ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ನಿರತರಾದವರು, ರಫ್ತು ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಉದ್ದಿಮೆದಾರರು ಹಾಗೂ ರಫ್ತು ವ್ಯವಹಾರ ಕುರಿತು ಬೋಧನೆಯಲ್ಲಿ ನಿರತವಾಗಿರುವ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಫ್ತು ವ್ಯವಹಾರದಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ.6 ದಿನಗಳ ಈ ತರಬೇತಿ ಕಾರ್ಯಕ್ರಮ ಅಂತಾರಾಷ್ಟ್ರೀಯ ವ್ಯವಹಾರದ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ತರಬೇತಿಯಲ್ಲಿ ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹಾಗೂ ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ. ರಫ್ತುಗೆ ಸಂಬಂಧಿಸಿದ ನಿಯಮಾವಳಿಗಳು, ಅಂತಾರಾಷ್ಟ್ರೀಯ ರಫ್ತು ವ್ಯಾಪಾರ, ರಫ್ತು ಮಾರುಕಟ್ಟೆ, ರಫ್ತಿಗೆ ಸಂಬಂಧಿತ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಡಿ.ಜಿ.ಎಫ್.ಟಿ., ಕಸ್ಟಮ್ಸ್, ಆರ್.ಬಿ.ಐ. ಹಾಗೂ ರಫ್ತು ಉತ್ತೇಜನ ಕೌನ್ಸಿಲ್ಗಳಾದ ಅಪೇಡಾ, ಫಿಯೋ ಇತ್ಯಾದಿ, ರಫ್ತು ಪ್ಯಾಕೇಜಿಂಗ್, ಹಣಕಾಸು, ವಿದೇಶಿ ವಿನಿಮಯ, ಇ.ಸಿ.ಜಿ.ಸಿ., ಇ-ವಾಣಿಜ್ಯ ವೇದಿಕೆ ಹಾಗೂ ಜಿ.ಎಸ್.ಟಿ. ನಿಯಮಗಳ ಕುರಿತಾಗಿಯೂ ವಿಷಯ ಮಂಡನೆ ಮಾಡಲಾಗುವುದು. ಮಂಗಳೂರು ವಿಭಾಗದ ರಫ್ತು ಸಾಧ್ಯತಾ ಉತ್ಪನ್ನಗಳ ಕುರಿತು ಮಾಹಿತಿಯನ್ನು ಹಾಗೂ ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ / ಸೇವೆ ಸಲ್ಲಿಸುತ್ತಿರುವ ಪರಿಣಿತಿದಾರರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಳ್ಳಲಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ವಿಶಾಲ್ ಸಾಲ್ಯಾನ್ ತಿಳಿಸಿದರು.