ಕೋರಮಂಗಲ, ಬೊಮ್ಮನಹಳ್ಳಿಯಲ್ಲಿ 60 ಮಿ.ಮೀ.ಗೂ ಹೆಚ್ಚು ಸುರಿದ ಮಳೆ

KannadaprabhaNewsNetwork |  
Published : Sep 16, 2026, 04:00 AM ISTUpdated : Sep 16, 2026, 05:24 AM IST
rain

ಸಾರಾಂಶ

ಹಲವು ದಿನಗಳಿಂದ ಬೇಸಿಗೆಯಂತಹ ಬಿಸಿಲಿನ ತಾಪದಿಂದ ಬಿಸಿಯಾಗಿದ್ದ ಉದ್ಯಾನ ನಗರಿಗೆ ಮಂಗಳವಾರ ಸಂಜೆ ಸುರಿದ ಭರ್ಜರಿ ಮಳೆ ತಂಪೆರೆದಿದೆ.ಬಹುತೇಕ ಒಂದುವರೆ ತಿಂಗಳ ಬಳಿಕ ನಗರದಲ್ಲಿ ಉತ್ತಮ ಮಳೆಯಾಗಿದೆ.

ಬೆಂಗಳೂರು : ಹಲವು ದಿನಗಳಿಂದ ಬೇಸಿಗೆಯಂತಹ ಬಿಸಿಲಿನ ತಾಪದಿಂದ ಬಿಸಿಯಾಗಿದ್ದ ಉದ್ಯಾನ ನಗರಿಗೆ ಮಂಗಳವಾರ ಸಂಜೆ ಸುರಿದ ಭರ್ಜರಿ ಮಳೆ ತಂಪೆರೆದಿದೆ.

ಬಹುತೇಕ ಒಂದುವರೆ ತಿಂಗಳ ಬಳಿಕ ನಗರದಲ್ಲಿ ಉತ್ತಮ ಮಳೆಯಾಗಿದೆ. ಸಂಜೆ ಮಳೆಯಿಂದ ನಗರದ ತಗ್ಗು ಪ್ರದೇಶಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು, ರಸ್ತೆಗಳು, ಜಂಕ್ಷನ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗೊಂಡು ಟ್ರಾಫಿಕ್‌ ಜಾಮ್‌ ಉಂಟಾಗಿ ಸವಾರರು ಪರದಾಡಿದರು. ಕೆಲವೆಡೆ ಮರಗಳು, ಕೊಂಬೆಗಳು ಧರೆಗೆ ಉರುಳಿದ್ದು, ಅವುಗಳನ್ನು ತೆರವುಗೊಳಿಸಿ ವಾಹನ ಹಾಗೂ ಜನ ಸಂಚಾರಕ್ಕೆ ಪಾಲಿಕೆ ಸಿಬ್ಬಂದಿ ಅನುವು ಮಾಡಿಕೊಟ್ಟರು. ಸುಲ್ತಾನ್ ಪಾಳ್ಯದಲ್ಲಿನ ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ.

ಮರ, ರೆಂಬೆ ಕೊಂಬೆ ಧರೆಗೆ:

ಕೋರಮಂಗಲ ಗರುಡಾ ಮಾಲ್, ಶೇಷಾದ್ರಿಪುರ, ಹಾಸ್ಮೆಟ್ ಆಸ್ಪತ್ರೆ ಬಳಿ ಮರಗಳು ಹಾಗೂ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ತಕ್ಷಣ ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸಲಾಗಿದೆ. ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಜಿಬಿಎ ಮೂಲಗಳು ತಿಳಿಸಿವೆ.

ರಸ್ತೆಗಳು ಜಲಾವೃತ:

ಓಕಳಿಪುರ ಜಂಕ್ಷನ್, ಶಿವಾನಂದ ವೃತ್ತ ರೈಲ್ವೆ ಅಂಡರ್‌ಪಾಸ್, ರಿಚ್ಮಂಡ್ ಸರ್ಕಲ್, ಎಚ್‌ಎಎಲ್ ಏರ್ಪೋರ್ಟ್ ರಸ್ತೆ, ಹೆಬ್ಬಾಳ ಜಂಕ್ಷನ್ ಡೌನ್‌ರ್‍ಯಾಂಪ್, ಜೆ.ಸಿ. ನಗರ ದೂರದರ್ಶನ ಕೇಂದ್ರ ವೃತ್ತ, ಎಸ್‌ಜೆಪಿ ರಸ್ತೆ, ವೀರಣ್ಯಪಾಳ್ಯ, ಜಯಮಹಲ್ ರೈಲ್ವೆ ಅಂಡರ್‌ಪಾಸ್, ಬ್ರಿಯಾಂಡ್ ಜಂಕ್ಷನ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ರೂಪೇನ ಅಗ್ರಹಾರ, ಶ್ರೀನಿವಾಗಿಲು, ಲ್ಯಾವೆಲ್ಲೆ ರಸ್ತೆ, ತುಮಕೂರು ರಸ್ತೆ ಪೀಣ್ಯ ಫ್ಲೈಓವರ್, ಮಡಿವಾಳ ಅಯ್ಯಪ್ಪ ಸ್ವಾಮಿ ಕೆಳ ಸೇತುವೆ, ಬಿಜಿಎಸ್ ಫ್ಲೈಓವರ್, ಬಿಜಿಎಸ್ ಫ್ಲೈಓವರ್ ಚಾಮರಾಜಪೇಟೆ ಕಡೆಯ ಡೌನ್‌ರ್‍ಯಾಂಪ್, ಪ್ಯಾಲೆಸ್ ಗುಟ್ಟಹಳ್ಳಿ, ಕೋರಮಂಗಲ ರಿಂಗ್ ರಸ್ತೆ, ಗರುಡಾ ಮಾಲ್ ಜಂಕ್ಷನ್ ಸೇರಿದಂತೆ ನಗರದ ಅನೇಕ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ಅಶೋಕ ನಗರ ಪೋತಪ್ಪ ಗಾರ್ಡನ್, ಪ್ಯಾಲೆಸ್ ಗುಟ್ಟಹಳ್ಳಿ, ಎಚ್‌ಎಎಲ್ ಏರ್ಪೋಟ್ ರಸ್ತೆಗಳಲ್ಲಿನ ಡ್ರೈನ್‌ಗಳಲ್ಲಿ ಕಸ ತುಂಬಿಕೊಂಡಿದ್ದ ಕಾರಣ ನೀರು ಹರಿದು ಹೋಗದೆ ರಸ್ತೆಗಳು ಜಲಾವೃತವಾಗಿದ್ದರು. ಸಂಚಾರ ಪೊಲೀಸರು ಕಟ್ಟಿಗೆಯಿಂದ ಕಸ ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹರಸಾಹಸ ಪಟ್ಟರು. ಸಿಲ್ಕ್‌ಬೋರ್ಡ್ ಮೆಟ್ರೋ ನಿಲ್ದಾಣ ಕೆಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಸಾಧ್ವಿ ಎಂಬುವರು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆಟೋ ಚಕ್ರ ಮುಳುಗುವಷ್ಟು ನೀರು ನಿಂತಿರುವುದು ಕಂಡು ಬಂತು.

ನಗರದ ಕೆಲವೆಡೆ ಸರಾಸರಿ 50 ಮಿ.ಮೀ ಮಳೆ

ನಗರದ ಕೋರಮಂಗಲ ಹಾಗೂ ಬೊಮ್ಮನಹಳ್ಳಿಯಲ್ಲಿ ಭಾರಿ ಮಳೆಯಾಗಿದ್ದು, ಈ ಎರಡು ಪ್ರದೇಶಗಳಲ್ಲಿ ಗರಿಷ್ಠ 60 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಾರಪ್ಪನಪಾಳ್ಯ 58 ಮಿ.ಮೀ, ನಾಗಪುರ 54.5 ಮಿ.ಮೀ, ಕೂಡ್ಲು 52 ಮಿ.ಮೀ, ಸಂಪಂಗಿರಾಮನಗರ 45.5 ಮಿ.ಮೀ, ನ್ಯೂ ಬಿ.ಎಲ್.ಆರ್ ರಸ್ತೆ 47 ಮಿ.ಮೀ, ಆರ್.ಟಿ ನಗರ 46.8 ಮಿ.ಮೀ, ಜಯನಗರ 35.4 ಮಿ.ಮೀ, ಹೆಚ್.ಎಸ್.ಆರ್ ಲೇಔಟ್ 31.6 ಮಿ.ಮೀ ಹಾಗೂ ಎಂ.ಜಿ ರಸ್ತೆಯಲ್ಲಿ 29 ಮಿ.ಮೀ ಮಳೆಯಾಗದೆ. ನಗರದ ಕೇಂದ್ರ ಭಾಗ, ದಕ್ಷಿಣ, ಪೂರ್ವ, ಉತ್ತರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಮುನ್ಸೂಚನೆ

ಸೆ.18ರವರೆಗೆ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕನ್ನಡ ನಾಡಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ
ಉ.ಪಾಲಿಕೆ ವ್ಯಾಪ್ತಿ ರಾತ್ರಿ ಆಯುಕ್ತ ದಿಢೀರ್‌ ಭೇಟಿ