ಮದ್ಯ ತ್ಯಜಿಸಿದ 65 ಮಂದಿ ನವ ಜೀವನಾರಂಭ

KannadaprabhaNewsNetwork |  
Published : Oct 23, 2023, 12:15 AM IST
7.ಮದ್ಯ ವರ್ಜನೆ ಮಾಡಿದವರು  | Kannada Prabha

ಸಾರಾಂಶ

ರಾಮನಗರ: ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 1,746ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಮುಕ್ತಾಯ ಸಮಾರಂಭ ತಾಲೂಕಿನ ಜಾಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ನಡೆಯಿತು.

ರಾಮನಗರ: ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 1,746ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಮುಕ್ತಾಯ ಸಮಾರಂಭ ತಾಲೂಕಿನ ಜಾಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ನಡೆಯಿತು. ಕಳೆದ ಒಂದು ವಾರದಿಂದ ಮದ್ಯ ವರ್ಜನ ಶಿಬಿರದಲ್ಲಿ 65 ಮದ್ಯ ವ್ಯಸನಿಗಳು ಮದ್ಯ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ತ್ಯಜಿಸಿದ ಕುಟುಂಬಸ್ಥರು ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 8 ದಿನಗಳ ಕಾಲ ನಡೆದ ಶಿಬಿರದಲ್ಲಿ ಮದ್ಯ ಬಿಟ್ಟ ಪುರುಷರು ಮದುಮಗನಂತೆ ಕಂಗೊಳಿಸುತ್ತಿದ್ದರು. ಅವರೊಂದಿಗೆ ಬಂದಿದ್ದ ಕುಟುಂಬಸ್ಥರು ನಮ್ಮವರು ಕುಡಿತ ಬಿಟ್ಟರೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಂಡಂದಿರು ಹೆಂಡತಿಗೆ ಮಲ್ಲಿಗೆ ಮುಡಿಸಿ ಅರಿಶಿನ ಕುಂಕುಮ ಹಚ್ಚಿದರೆ, ಹೆಂಡತಿಯರು ಗಂಡನ ಆಶೀರ್ವಾದ ಪಡೆದರು. ತಾಯಿ-ಮಗ ಹಾಗೂ ಅಣ್ಣ-ತಂಗಿ ಇದ್ದರೆ, ಕುಡಿತ ಬಿಟ್ಟವರು ತಾಯಿ ಹಾಗೂ ಅಕ್ಕ, ತಂಗಿಯ ಆಶೀರ್ವಾದ ಪಡೆದಿದ್ದು ಹಾಗೂ ಕೊನೆಯಲ್ಲಿ ಸಭೆಯಲ್ಲಿ ಸೇರಿದವರೆಲ್ಲ ಅಕ್ಷತೆ ಹಾಕಿ ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು. ಕಳೆದ ಆರೇಳು ವರ್ಷಗಳಿಂದ ಕುಡಿತದ ಚಟಕ್ಕೆ ಒಳಗಾಗಿ ಬದುಕು ಹಾಳುಮಾಡಿಕೊಂಡಿದ್ದೆ. ಆದರೆ, ಈಗ ಉತ್ತಮ ಜೀವನ ನಡೆಸುವ ಭರವಸೆ ಬಂದಿದೆ. ಇಷ್ಟು ವರ್ಷ ಮದ್ಯ ಸೇವಿಸಿ ಕಳೆದುಕೊಂಡಿದ್ದ ಗೌರವವನ್ನು ಮತ್ತೆ ಸಂಪಾದಿಸುತ್ತೇನೆ. ಆ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸಿ ತೋರಿಸುತ್ತೇನೆ ಎಂದು ಶಿಬಿರದಿಂದ ಕುಡಿತದ ಚಟ ಬಿಟ್ಟವರು ತಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಾಮನಗರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ವತಿಯಿಂದ 1746ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮದ್ಯ ಸೇವನೆ ಎಂಬುದು ಸಾಮಾಜಿಕ ಪಿಡುಗಾಗಿದ್ದು, ದಿನೆ ದಿನೇ ಹೆಚ್ಚಾಗುತ್ತಿದೆ. ಇದರಿಂದ ಆರೋಗ್ಯ ಕೆಡುವುದರ ಜೊತೆಗೆ ಕುಟುಂಬವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಮದ್ಯವ್ಯಸನಿಗಳು ಮದ್ಯ ತ್ಯಜಿಸಿ ನವ ಜೀವನಕ್ಕೆ ಕಾಲಿಡಬೇಕು ಎಂದರು. ಹೆಣ್ಣು ಮಕ್ಕಳು ಧೀರ್ಘ ಸುಮಂಗಲಿಯರಾಗಿ ಸಾವು ಕಾಣಲು ಬಯಸುತ್ತಾರೆ. ಇದು ಸಾಧ್ಯವಾಗ ಬೇಕಾದರೆ ಪುರುಷರು ಮದ್ಯಪಾನ ಸೇರಿದಂತೆ ಎಲ್ಲ ಬಗೆಯ ದುಶ್ಚಟಗಳಿಂದ ದೂರ ಉಳಿದು ಆರೋಗ್ಯವಂತರಾಗಿ ಜೀವನ ನಡೆಸಬೇಕು. ಮನುಷ್ಯ ಮನಸ್ಸು ಮಾಡಿದರೆ ಯಾವುದು ದೊಡ್ಡದಲ್ಲ. ಏನು ಸಾಧನೆ ಬೇಕಾದರು ಮಾಡಬಹುದು ಎಂದು ಹೇಳಿದರು. ಶ್ರೀ ಧರ್ಮಸ್ಥಳ ಸಂಸ್ಥೆ ಧಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅದರಲ್ಲೂ ಮಹಿಳೆಯರನ್ನು ಆರ್ಥಿಕ ವಾಗಿ ಸಬಲರನ್ನಾಗಿ ಮಾಡಲು ಅನೇಕ ರೀತಿ ಸಹಕಾರ ನೀಡುತ್ತಿದೆ. ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳು ಮಾದರಿಯಾಗಿದೆ ಎಂದು ಬಾಲಕೃಷ್ಣ ಬಣ್ಣಿಸಿದರು. ವಕೀಲ ಸುಬ್ಬಶಾಸ್ತ್ರಿ ಮಾತನಾಡಿ, ಪಾಶ್ಚಾತ್ಯ ದೇಶಗಳಲ್ಲಿ ಜನರು ಮದ್ಯ ಸೇವನೆಗೆ ಅಲ್ಲಿನ ವಾತಾವರಣ ಕಾರಣ. ಆದರೆ, ಭಾರದಲ್ಲಿ ಮಳೆ, ಚಳಿ, ಬಿಸಿಲು ಎಲ್ಲವೂ ಬರುವುದರಿಂದ ಮದ್ಯಪಾನ ಮಾಡುವ ಅವಶ್ಯಕತೆ ಇಲ್ಲ. ಸಂಸಾರ ಬಹಳ ದಿನ ಉಳಿಯಬೇಕಾದರೆ ಮದ್ಯಪಾನ ತ್ಯಜಿಸಬೇಕು. ನಿಮ್ಮೂರಿನಲ್ಲಿರುವ ಪಾನಪ್ರಿಯರು ಮದ್ಯ ತ್ಯಜಿಸುವಂತೆ ಮನ ಪರಿವರ್ತನೆ ಮಾಡಬೇಕು ಎಂದು ಹೇಳಿದರು. ಯೋಜನಾಧಿಕಾರಿ ಎ.ಮುರಳೀಧರ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎನ್.ಮಂಜು, ನಿವೃತ್ತ ತಹಸೀಲ್ದಾರ್ ಶಿವಣ್ಢ, ತಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ, ಜಗದೀಶ್‌ , ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಗಂಗಾಧರ್, ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. 22ಕೆಆರ್ ಎಂಎಂಎನ್‌ 5,6,7.ಜೆಪಿಜಿ 5.ರಾಮನಗರ ತಾಲೂಕಿನ ಜಾಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ನಡೆದ 1,746ನೇ ಮದ್ಯವರ್ಜನ ಶಿಬಿರದಲ್ಲಿ ಶಾಸಕ ಬಾಲಕೃಷ್ಣ ಮಾತನಾಡಿದರು. 6.ಶಿಬಿರದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಸಕ ಬಾಲಕೃಷ್ಣ ಬಹುಮಾನ ವಿತರಿಸಿದರು. 7.ಮದ್ಯ ವರ್ಜನೆ ಮಾಡಿದವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ