ಕನ್ನಡಪ್ರಭ ವಾರ್ತೆ ಮೂಲ್ಕಿ
ಸೂರ್ಯೋದಯದಲ್ಲಿ ಭಜನಾ ಜ್ಯೋತಿ ಬೆಳಗಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ಬಳಿಕ ಸೂರ್ಯಾಸ್ತದವರೆಗೆ 14 ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಭಜನಾ ಮಂದಿರದ ಕುಣಿತ ಭಜನಾ ತಂಡದ ಮಕ್ಕಳಿಂದ ಕುಣಿತ ಭಜನೆ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಂದಿರದ ಸಭಾಗೃಹ ನಿರ್ಮಾಣದ ದಾನಿ ಬೋಳ ರಘುರಾಮ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸೂರ್ಯಾಸ್ತದಲ್ಲಿ ಮಂಗಳೋತ್ಸವ ನಡೆಯಿತು. ಬಳಿಕ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಕುಣಿತ ಭಜನೆ ಶಿಕ್ಷಕ ಶಿವರಾಮ್ ಶೆಟ್ಟಿ ದಂಪತಿ, ಯಕ್ಷ ಗುರು ರಕ್ಷಿತ್ ಶೆಟ್ಟಿ ಪಡ್ರೆ ಮತ್ತು ಶಿಷ್ಯರು, ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ನವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಕುಶಲ ಶೇಖರ್, ಕೆಮ್ರಾಲ್ ಪಂಚಾಯತ್ ಸದಸ್ಯ ಸುರೇಶ್ ದೇವಾಡಿಗ, ಸಂತೋಷ್ ಪೂಜಾರಿ ಉಲ್ಯ ಇವರನ್ನು ಸನ್ಮಾನಿಸಲಾಯಿತು.