ಕನ್ನಡಪ್ರಭ ವಾರ್ತೆ ಕೋಲಾರರಾಜಕಾರಣದಲ್ಲಿ ತಮ್ಮನ್ನು ಸೋಲಿಸಿದವರ ಗೆಲುವಿಗೆ ವೈರತ್ವ ಮರೆತು ಬದ್ದತೆಯಿಂದ ಶ್ರಮಿಸುವ ಹೃದಯ ವೈಶಾಲ್ಯತೆ ಹೊಂದಿದ್ದ ವಿ.ವೆಂಕಟಮುನಿಯಪ್ಪ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸಲು ನೀಡಿದ ಕೊಡುಗೆ ಅಪಾರ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಶ್ಲಾಘಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ನೇತೃತ್ವದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ ಅಭಿಮಾನಿ ಬಳಗ ನಡೆಸಿದ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೋಲಿನ ಕಹಿ ಮಾಸುವ ಮುನ್ನವೇ ಜನರ ಜತೆಗೆ ಬೆರೆಯುತ್ತಿದ್ದ ಅವರ ನಡೆ ನಮಗೆಲ್ಲಾ ಆದರ್ಶವಾಗಿದೆ. ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧಿಸಿ ಸೋತರೂ ನಂತರದ ರಾಜಕೀಯ ಧ್ರುವೀಕರಣದಲ್ಲಿ ಕಹಿಯ ನಡುವೆಯೂ ನನ್ನ ಗೆಲುವಿಗೆ ಅವರು ಹಾಕಿದ ಶ್ರಮ, ನಂತರ ಬೆಂಗಳೂರಿನಲ್ಲೂ ಅವರು ನನಗೆ ನೀಡಿದ ಬೆಂಬಲ ಸ್ಮರಣೀಯ ಎಂದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ವೆಂಕಟಮುನಿಯಪ್ಪ ಹೆಸರಿನಲ್ಲಿ ಕೃಷಿ ವಿವಿಯಿಂದ ರೈತಪ್ರಶಸ್ತಿ ನೀಡುವ ಆಲೋಚನೆ ಸರ್ಕಾರ ಮಾಡಲಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ದಿ.ವೆಂಕಟಮುನಿಯಪ್ಪರ ಪತ್ನಿಯರಾದ ಶಾರದಮ್ಮ, ಸರಸಮ್ಮರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್.ಅನಿಲ್ಕುಮಾರ್, ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ಕುಮಾರ್, ಸುಗಟೂರು ಎಸ್ಎಫ್ಸಿಎಸ್ ಅಧ್ಯಕ್ಷ ಭಾಸ್ಕರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕೂಡಾ ಅಧ್ಯಕ್ಷ ಮಹಮದ್ ಹನೀಫ್, ಮುಖಂಡರಾದ ವಕ್ಕಲೇರಿ ರಾಮು, ಎನ್.ಜಿ.ಬ್ಯಾಟಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ ಮತ್ತಿತರರು ಇದ್ದರು.