ಕನ್ನಡಪ್ರಭ ವಾರ್ತೆ ಆಲಮಟ್ಟಿ
ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 42,500 ಕ್ಯುಸೆಕ್ ಮತ್ತು ಗೇಟ್ಗಳ ಮೂಲಕ 25,000 ಕ್ಯುಸೆಕ್ ಸೇರಿ ಒಟ್ಟು 67,500 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಗುರುವಾರ 42,500 ಕ್ಯುಸೆಕ್ ಇದ್ದ ಹೊರಹರಿವು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಹೆಚ್ಚಿಸಲಾಯಿತು. ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 518.60 ಮೀಟರ್ ಎತ್ತರದಲ್ಲಿ ಒಟ್ಟು 106.32 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 73,162 ಕ್ಯುಸೆಕ್ ಇತ್ತು.
ಮಹಾರಾಷ್ಟ್ರದಲ್ಲಿ ಮಳೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕೊಯ್ನಾ 77 ಮಿ.ಮೀ, ನವಜಾ 66 ಮಿಮೀ, ಮಹಾಬಳೇಶ್ವರ 78 ಮಿಮೀ, ರಾಧಾನಗರಿ 24 ಮಿಮೀ, ಧೂದಗಂಗಾ 48 ಮಿಮೀ ಮಳೆಯಾಗಿದೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ.ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್ನಿಂದ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಇನ್ನಷ್ಪು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಹೊರಹರಿವಿನ ಪ್ರಮಾಣ ಅಗತ್ಯವಿದ್ದರೆ ಮತ್ತಷ್ಟು ಪರಿಷ್ಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಸಿದ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಡಂಗೂರ ಸಾರುವುದು ಮತ್ತು ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.