ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೂಕನಕೆರೆ ಗ್ರಾಪಂ, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 1887ನೇ ಮದ್ಯವರ್ಜನ ಶಿಬಿರದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 67 ಜನರು ಭಾಗವಹಿಸಿ ವ್ಯಸನ ಮುಕ್ತಗೊಂಡು ಹೊಸ ಬದುಕಿನ ಕಡೆ ಮುನ್ನಡೆದರು.
ಶಿಬಿರಾರ್ಥಿಗಳಿಗೆ ಸಂಸ್ಥೆಯಿಂದ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ನಿತ್ಯ ಶಿಬಿರಾರ್ಥಿಗಳಿಗೆ ಭಜನೆ, ಆರೋಗ್ಯ ತಪಾಸಣೆ, ಮನರಂಜನೆ ಕಾರ್ಯಕ್ರಮ, ವಿವಿಧ ಕ್ಷೇತ್ರದ ಪರಿಣಿತರಿಂದ ಕುಡಿತ ಚಟ ಬಿಡಿಸಲು, ಮನಸ್ಸು ಪರಿವರ್ತನೆಗಾಗಿ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಚಟಮುಕ್ತರಾದವರು ಧರ್ಮಸ್ಥಳ ಸಂಸ್ಥೆ ಕಾರ್ಯಕ್ಕೆ ಕೃತಜ್ಞತೆ ಅರ್ಪಿಸಿದರು.ಶಿಬಿರಾರ್ಥಿಗಳು ಮತ್ತು ಸಂಬಂಧಿಕರು ಹಾಗೂ ಬೂಕನಕೆರೆ ಗ್ರಾಮಸ್ಥರ ಜೊತೆಗೂಡಿ ಮದ್ಯಪಾನಕ್ಕೆ ಧಿಕ್ಕಾರ, ಯುವಕರೆ ಕುಡಿತದ ಚಟಕ್ಕೆ ಒಳಗಾಗಬೇಡಿ, ಕುಡಿತ ಬಿಡಿ, ಬದುಕು ಕಟ್ಟಿ ಎಂದು ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಮದ್ಯ ರಾಕ್ಷಸನ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಮದ್ಯ ರಾಕ್ಷಸನ ದಹನ ನಡೆಸಿ ಸಂಭ್ರಮಿಸಿದರು.