ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕನ್ನಡ ಶಾಸ್ತ್ರೀಯ ಭಾಷೆ ಆಗಿದ್ದು, ಬಹುದೊಡ್ಡ ಇತಿಹಾಸ ಪರಂಪರೆ ಹೊಂದಿದೆ ಎಂದು ಮಹಾರಾಷ್ಟ್ರದ ಗಣ್ಯರಾದ ಅಜಿಂಕ್ಯ ಅತುಲ ಸಾವೆ ಹಾಗೂ ಬಸವರಾಜ ಮಂಗರುಳೆ ಹೇಳಿದರು.ಮಹಾರಾಷ್ಟ್ರದ ಔರಂಗಾಬಾದ್ದ ಛತ್ರಪತಿ ಸಂಭಾಜಿನಗರದ ಕರ್ನಾಟಕ ಸಂಘದ ಆಶ್ರಯದಲ್ಲಿ ಗೋವಿಂದಭಾಯಿ ಶ್ರಾಫ್ ಲಲಿತಕಲಾ ಅಕಾಡೆಮಿ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ಧ 69ನೇ ಕರ್ನಾಟಕ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾವೆಲ್ಲ ಕೆಲವರು ಮಹಾರಾಷ್ಟ್ರದಲ್ಲೆ ಹುಟ್ಟಿ ಬೆಳೆದಿದ್ದೇವೆ. ಕರ್ನಾಟಕದಿಂದಲೂ ಬಂದಿದ್ದೇವೆ. ನಮ್ಮ ಮನೆ ಮನಗಳಲ್ಲಿ ತಾಯಿಗೆ ಇರುವಷ್ಟೆ ಮಹತ್ವ ಕನ್ನಡ ಭಾಷೆಗೆ ಇದೆ. ಕನ್ನಡ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಧ್ಯೇಯ ಆಗಬೇಕು ಎಂದು ತಿಳಿಸಿದರು.ಸ್ಪಷ್ಟ ಕನ್ನಡದಲ್ಲಿ ಭಾಷಣ ಮಾಡಿದ ಇಬ್ಬರನ್ನು ಸಂಘದಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಲಬುರಗಿಯ ಶರಣಮ್ಮ ಇನಾಮದಾರ (ಜಾನಪದ ಸಾಹಿತ್ಯ), ಚಿಂಚೋಳಿಯ ಶಾಮರಾವ್ ಕುಲಕರ್ಣಿ (ದಾಸ ಸಾಹಿತ್ಯ) ಇವರುಗಳ ಕನ್ನಡ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಸುಭಾಷ್ ಜಿ.ಅಮಾಣೆ, ಸಹಕಾರ್ಯದರ್ಶಿ ವಿಮಲಾ ಹಬ್ಬು ಅವರು ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಹ್ಲಾದ ಕುಲಕರ್ಣಿ ಸ್ವಾಗತ ಗೀತೆ ಹಾಗೂ ಕನ್ನಡದ ಅನೇಕ ಗೀತೆಗಳನ್ನು ಹಾಡಿ, ಜನಮನ ರಂಜಿಸಿದರು. ಶಿವಾ ಉಗಲತ್, ರತನ ನಗರಕರ, ಶಶಿಕಾಂತ ಮರ್ಪಲ್ಲಿಕರ್, ಸಂಧ್ಯಾ ಅಡಸುಳೆ, ಡಾ.ಶಶಿಕಲಾ ಬುಯಿತೇ, ಸವಿತಾ ಸ್ವಾಮಿ, ಗೌರಿ ದೇಸಾಯಿ, ಜ್ಯೋತಿ ಕುರ್ಮುಡೆ, ವೇದಾ ಆಯ್ಲಿ, ಮಹಿ ಕುರುಮೂಡೆ ಸೇರಿದಂತೆ ಅನೇಕ ಕಲಾವಿದರು ಕನ್ನಡದ ಗೀತೆ ಹಾಡಿ ನೃತ್ಯದಲ್ಲಿ ಪಾಲ್ಗೊಂಡು ಮನರಂಜಿಸಿದರು. ತನುಜಾ ಅಡಗಾವಕರ ನಿರೂಪಿಸಿದರು.ಪ್ರಶಾಂತ ಕುಲಕರ್ಣಿ, ಶ್ರೀದೇವ ಆಯ್ಲಿ, ಬನಶಂಕರಿ ಹಿರೇಮಠ ಸೇರಿದಂತೆ ಕರ್ನಾಟಕ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.