ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಿಎಸ್‌ವಿ ಶಾಲೆ ಕಟ್ಟಡದ ಆಸ್ತಿ ಪುರಸಭೆ ಸುಪರ್ದಿಗೆ ನೀಡಲು 7 ತಿಂಗಳ ಗಡುವು

KannadaprabhaNewsNetwork | Published : May 11, 2025 11:49 PM

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಶಾಸಕರು, ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮಕ್ಷಮದಲ್ಲಿ ಬಿಎಸ್‌ವಿ ಶಾಲೆ ಕಟ್ಟಡವಿರುವ ಪುರಸಭೆ ಮಾಲೀಕತ್ವದ ಸ್ಥಳವನ್ನು ಪುರಸಭೆ ಸುಪರ್ದಿಗೆ ಪಡೆಯುವ ಕುರಿತು ಶಾಲೆಯ ಆಡಳಿತ ಮಂಡಳಿಯೊಂದಿಗಿನ ಸಭೆ ಸೋಮವಾರ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಶಾಸಕರು, ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮಕ್ಷಮದಲ್ಲಿ ಬಿಎಸ್‌ವಿ ಶಾಲೆ ಕಟ್ಟಡವಿರುವ ಪುರಸಭೆ ಮಾಲೀಕತ್ವದ ಸ್ಥಳವನ್ನು ಪುರಸಭೆ ಸುಪರ್ದಿಗೆ ಪಡೆಯುವ ಕುರಿತು ಶಾಲೆಯ ಆಡಳಿತ ಮಂಡಳಿಯೊಂದಿಗಿನ ಸಭೆ ಸೋಮವಾರ ಜರುಗಿತು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಕಂಪ್ಲಿ ಎಜುಕೇಷನ್ ಟ್ರಸ್ಟ್ ಪುರಸಭೆ ಆಸ್ತಿಯ ಜಾಗದಲ್ಲಿ ಬಿಎಸ್‌ವಿಯನ್ನು ನಿರ್ಮಿಸಿಕೊಂಡು ಹಲವು ದಶಕಗಳಿಂದ ಶಾಲೆ ನಡೆಸಿಕೊಂಡು ಬರುತ್ತಿದೆ. ಈ ಹಿಂದೆ ಹಲವು ಬಾರಿ ಸ್ಥಳ ಪುರಸಭೆ ಸುಪರ್ದಿಗೆ ಮರಳಿಸುವಂತೆ ಗಡುವು ಸಹ ನೀಡಲಾಗಿತ್ತು. ಇದೀಗ ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹7 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೂತನ ಕಟ್ಟಡ ನಿರ್ಮಿಸಲು ಇನ್ನಷ್ಟು ಸ್ಥಳದ ಅವಶ್ಯಕತೆ ಇದೆ. ಹೀಗಾಗಿ ಪುರಸಭೆ ಆಸ್ತಿಯಾದ ಬಿಎಸ್‌ವಿ ಶಾಲೆಯ ಸ್ಥಳವನ್ನು ಬಿಟ್ಟುಕೊಡಬೇಕು. ಅಲ್ಲದೇ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಲೆ ಖರೀದಿಸಿರುವ ಸ್ಥಳದಲ್ಲಿ ಶಾಲಾ ಕಟ್ಟಡ ನಿರ್ಮಿಸಿಕೊಳ್ಳುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಕಂಪ್ಲಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಕಲ್ಗುಡಿ ವಿಶ್ವನಾಥ್ ಮಾತನಾಡಿ, ಬಿಎಸ್ ವಿ ಶಾಲೆಯಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗಲೇ ಸ್ಥಳ ಕಾಲಿ ಮಾಡಿ ಎಂದರೆ ನಮ್ಮ ಶಾಲೆಗೆ ಪರ್ಯಾಯ ಕಟ್ಟಡದ ವ್ಯವಸ್ಥೆ ಇಲ್ಲ. ಹೀಗಾಗಿ ತಾವು ಒಂದು ವರ್ಷ ಕಾಲಾವಕಾಶ ನೀಡಿದರೆ, ನಮ್ಮ ಎಜುಕೇಷನ್ ಟ್ರಸ್ಟ್ ನಿಂದ ನೂತನ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಅಲ್ಲಿಗೆ ಸ್ಥಳಾಂತರಿಸುವ ಮೂಲಕ ಸ್ಥಳವನ್ನು ಪುರಸಭೆಯ ಸುಪರ್ದಿಗೆ ನೀಡುವುದಾಗಿ ಮನವಿ ಮಾಡಿಕೊಂಡರು.

ಒಂದು ವರ್ಷಗಳ ಕಾಲಾವಕಾಶ ನೀಡಿದ್ದಲ್ಲಿ ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಅನುದಾನ ಕೈತಪ್ಪುವ ಸಾಧ್ಯತೆ ಇದೆ. ಇದರ ಬದಲು 7 ತಿಂಗಳು ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಶಾಲೆಯ ನೂತನ ಕಟ್ಟಡ ನಿರ್ಮಿಸಿಕೊಂಡು ಪುರಸಭೆ ಸ್ಥಳವನ್ನು ಪುರಸಭೆ ಸುಪರ್ದಿಗೆ ಒಪ್ಪಿಸಲು ಶಾಲಾ ಆಡಳಿತ ಮಂಡಳಿ ಮುಂದಾಗಬೇಕು. ಅಲ್ಲದೇ ಈ ಕುರಿತು ಧಾರವಾಡ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಅರ್ಜಿ ಹಿಂಪಡೆಯಬೇಕು. ಇದು ನಮ್ಮ ಕೊನೆಯ ತೀರ್ಮಾನವೆಂದು ಶಾಸಕರು, ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು. ಸಭೆಯಲ್ಲಿ ತೀರ್ಮಾನಿಸಿದಂತೆ 7 ತಿಂಗಳ ಒಳಗಾಗಿ ಪುರಸಭೆಯ ಆಸ್ತಿಯನ್ನು ಪುರಸಭೆ ಸುಪರ್ದಿಗೆಗೆ ಒಪ್ಪಿಸಲು ಕಂಪ್ಲಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಕಲ್ಗುಡಿ ವಿಶ್ವನಾಥ್ ಕರಾರು ಪತ್ರಕ್ಕೆ ಸಹಿ ಹಾಕಿ ಒಪ್ಪಿಗೆ ನೀಡಿದರು.

ಈ ಸಂದರ್ಭ ಶಾಸಕ ಜೆ.ಎನ್. ಗಣೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಮುಖ್ಯಾಧಿಕಾರಿ ಕೆ.ದುರುಗಣ್ಣ, ಸದಸ್ಯರಾದ ಎಸ್.ಎಂ. ನಾಗರಾಜ್, ವಿ.ಎಲ್. ಬಾಬು, ಟಿ.ವಿ. ಸುದರ್ಶನ್ ರೆಡ್ಡಿ, ಎನ್. ರಾಮಾಂಜಿನೆಯಲು, ಆಂಜನೇಯ, ವೀರಾಂಜಿನೇಯಲು, ಪಿ.ಮೌಲ, ಲಡ್ಡು ಹೊನ್ನುರ್ ವಲಿ, ವಿ.ಶಾಂತಲಾ, ಗುಡುದಮ್ಮ, ಹೇಮಾವತಿ, ನಾಗಮ್ಮ, ನಾಮ ನಿರ್ದೇಶನ ಸದಸ್ಯರಾದ ಮೌನೇಶ್, ವಿರೂಪಾಕ್ಷಿ, ಕೃಷ್ಣ, ಮುಖಂಡರಾದ ಅರವಿ ಬಸವನಗೌಡ, ಸೇರಿದಂತೆ ಕಂಪ್ಲಿ ಎಜುಕೇಷನ್ ಟ್ರಸ್ಟ್ ನ ಪದಾಧಿಕಾರಿಗಳಿದ್ದರು.