9 ತಿಂಗಳಲ್ಲಿ ಅರಣ್ಯ ಇಲಾಖೆಯಲ್ಲಿ 711 ಹುದ್ದೆಗಳು ಖಾಲಿ

KannadaprabhaNewsNetwork |  
Published : May 26, 2024, 01:35 AM ISTUpdated : May 26, 2024, 08:32 AM IST
ಅರಣ್ಯ | Kannada Prabha

ಸಾರಾಂಶ

ಅರಣ್ಯ ಪ್ರದೇಶವನ್ನು ಕಾಯಲು  ಕಳೆದೊಂದು ವರ್ಷದಲ್ಲಿಯೇ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಅನುಮೋದಿತ ಹುದ್ದೆಗಳ ಪೈಕಿ 711 ಹುದ್ದೆಗಳು ಖಾಲಿಯಾಗಿವೆ.

ಗಿರೀಶ್‌ ಗರಗ

  ಬೆಂಗಳೂರು : ರಾಜ್ಯದ ಭೂಪ್ರದೇಶದ ಶೇ.25ರಷ್ಟಿರುವ ಅರಣ್ಯ ಪ್ರದೇಶವನ್ನು ಕಾಯಲು ಮತ್ತು ಅಲ್ಲಿನ ವನ್ಯಜೀವಿಗಳ ಸಂರಕ್ಷಣೆಗಾಗಿ ಸಮರ್ಪಕ ಸಿಬ್ಬಂದಿಯಿಲ್ಲ ಎಂಬ ಕೂಗು ಹಲವು ವರ್ಷಗಳಿಂದ ಇದೆ. 

ಅದರ ನಡುವೆಯೇ ಕಳೆದೊಂದು ವರ್ಷದಲ್ಲಿಯೇ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಅನುಮೋದಿತ ಹುದ್ದೆಗಳ ಪೈಕಿ 711 ಹುದ್ದೆಗಳು ಖಾಲಿಯಾಗಿವೆ.ಭೌಗೋಳಿಕವಾಗಿ ಕರ್ನಾಟಕವು 1.91 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಭೂಪ್ರದೇಶ ಹೊಂದಿದೆ. ಅದರಲ್ಲಿ 40678 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶವಿದೆ. 

ಅದರಲ್ಲಿ ಸದ್ಯ 2 ಲಕ್ಷ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಪ್ರತಿವರ್ಷ ರಾಜ್ಯದಲ್ಲಿ 100ಕ್ಕೂ ಹೆಚ್ಚಿನ ಕಳ್ಳಬೇಟೆ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಅರಣ್ಯ ಇಲಾಖೆ ಸಿಬ್ಬಂದಿಗೆ ದೊರೆತ ಮಾಹಿತಿಯನ್ನಾಧರಿಸಿ ಪತ್ತೆಯಾಗುವ ಪ್ರಕರಣಗಳಾದರೆ, ಸಿಬ್ಬಂದಿ ಕೊರತೆ ಕಾರಣದಿಂದಾಗಿ ಇನ್ನೂ ಹಲವು ಕಳ್ಳಬೇಟೆ ಪ್ರಕರಣಗಳು ತಿಳಿಯದೇ ಇರುವಂತಾಗಿದೆ. 

ಅದರ ಬೆನ್ನಲ್ಲೇ ಕಳೆದೊಂದು ವರ್ಷದಿಂದ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಅದರಿಂದಾಗಿ ಅರಣ್ಯ ಸಂರಕ್ಷಣೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಮತ್ತಷ್ಟು ತೊಡಕಾಗುವಂತಾಗಿದೆ.711 ಮಂಜೂರು ಹುದ್ದೆಗಳು ಖಾಲಿ:

ಅರಣ್ಯ ಇಲಾಖೆಯ ವಾರ್ಷಿಕ ವರದಿ ಪ್ರಕಾರ 2022-23ನೇ ಸಾಲಿನವರೆಗೆ 14,843 ಹುದ್ದೆಗಳು ಮಂಜೂರಾಗಿದ್ದರೆ 8435 ಹುದ್ದೆಗಳು ಭರ್ತಿಯಾಗಿದ್ದವು. ಉಳಿದ 6,410 ಹುದ್ದೆಗಳು ಮಾತ್ರ ಖಾಲಿಯಾಗಿದ್ದವು. ಅದೇ 2023-24ನೇ ಸಾಲಿನ (ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ) ಮಧ್ಯಂತರ ವರದಿ ಪ್ರಕಾರ 7,724 ಹುದ್ದೆಗಳಿಗೆ ಮಾತ್ರ ಅಧಿಕಾರಿ, ಸಿಬ್ಬಂದಿ ನೇಮಕವಾಗಿದ್ದು, 7,119 ಹುದ್ದೆಗಳು ಖಾಲಿಯಾಗಿವೆ.

 ಅದರ ಪ್ರಕಾರ ಕೇವಲ 9 ತಿಂಗಳಲ್ಲಿ 711 ಹುದ್ದೆಗಳು ಖಾಲಿಯಾಗಿ ಸಿಬ್ಬಂದಿ ಕೊರತೆ ಮತ್ತಷ್ಟು ಹೆಚ್ಚುವಂತಾಗಿದೆ.ಡಿಆರ್‌ಎಫ್‌ಒ ಹುದ್ದೆಗಳೇ ಹೆಚ್ಚು ಖಾಲಿ:ಹೀಗೆ ಖಾಲಿಯಾದ ಹುದ್ದೆಗಳ ಪೈಕಿ ‘ಸಿ’ ವರ್ಗದ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿಯಾಗಿವೆ. ಅದರಲ್ಲೂ ಉಪ ವಲಯ ಅರಣ್ಯಾಧಿಕಾರಿ ಕಂ ಸರ್ವೇಯರ್‌ ಹುದ್ದೆಗಳು ಹೆಚ್ಚಾಗಿ ಖಾಲಿಯಾಗಿವೆ. 

ಇಲಾಖೆಗೆ 3,008 ಹುದ್ದೆಗಳು ಮಂಜೂರಾಗಿದ್ದರೆ ಅದರಲ್ಲಿ ಪ್ರಸ್ತುತ 1,919 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 1,089 ಹುದ್ದೆಗಳಿಗೆ ಅಧಿಕಾರಿಗಳೇ ಇಲ್ಲದಂತಾಗಿದೆ. ಅದೇ 2022-23ನೇ ಸಾಲಿನಲ್ಲಿ 2,529 ಭರ್ತಿಯಾಗಿ ಕೇವಲ 479 ಹುದ್ದೆಗಳು ಖಾಲಿಯಿದ್ದವು.ದಿನಗೂಲಿ ನೌಕರರ ಸಂಖ್ಯೆಯಲ್ಲೂ ಭಾರೀ ಇಳಿಕೆ:ಮಂಜೂರಾದ ಹುದ್ದೆಗಳ ಜತೆಗೆ ಗುತ್ತಿಗೆ ಆಧಾರದಲ್ಲಿ ದಿನಗೂಲಿಗಾಗಿ ನೇಮಕ ಮಾಡಿಕೊಂಡಿರುವ ದಿನಗೂಲಿ ನೌಕರರ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ಅರಣ್ಯ ಇಲಾಖೆಯಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ದಿನಗೂಲಿ ರೂಪದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅದರಂತೆ 2022-23ನೇ ಸಾಲಿನಲ್ಲಿ ಸಿ ದರ್ಜೆಯ ಹುದ್ದೆಗೆ 368, ಡಿ ದರ್ಜೆಯ ಹುದ್ದೆಗಳಿಗೆ 2,471 ಸೇರಿ ಒಟ್ಟು 2,839 ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅದೇ 2023-24ರ ಡಿಸೆಂಬರ್‌ ಅಂತ್ಯದವರೆಗೆ ಸಿ ದರ್ಜೆಯ ಹುದ್ದೆಗೆ 339, ಡಿ ದರ್ಜೆಯ ಹುದ್ದೆಗಳಿಗೆ 1859 ಸೇರಿ ಒಟ್ಟು 2,198 ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

 ಅದರಂತೆ ಕೇವಲ 9 ತಿಂಗಳಲ್ಲಿ ದಿನಗೂಲಿ ನೌಕರರ ಸಂಖ್ಯೆ ಬರೋಬ್ಬರಿ 641 ಮಂದಿ ಕಡಿಮೆಯಾಗಿದ್ದಾರೆ.ಅದರಲ್ಲಿ ಅರಣ್ಯ ವೀಕ್ಷಕರು (ಫಾರೆಸ್ಟ್‌ ವಾಚರ್‌)ಗಳು ಸೇರಿದಂತೆ ಇನ್ನಿತರ ಕಾರ್ಯ ಮಾಡುವ ಡಿ ದರ್ಜೆಯ ಹುದ್ದೆಯ ದಿನಗೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿಯಾಗಿದ್ದಾರೆ. ಒಟ್ಟಾರೆ ಖಾಲಿಯಾಗಿರುವ ದಿನಗೂಲಿ ನೌಕರರ ಪೈಕಿ ಡಿ ದರ್ಜೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ 612 ಹಾಗೂ ಸಿ ದರ್ಜೆ ಹುದ್ದೆಗಳಲ್ಲಿ 12 ದಿನಗೂಲಿ ನೌಕರರು ಖಾಲಿಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರದಾ-ಬೇಡ್ತಿ ಯೋಜನೆಗೆ ಅಡ್ಡಿ: ಕಾಗೇರಿ ವಿರುದ್ಧ ರೈತರ ಆಕ್ರೋಶ
ಶಿಕ್ಷಕರ ಬೇಕು ಬೇಡಿಕೆ ಸಂಘ ಈಡೇರಿಸಲಿ