ಹರಪನಹಳ್ಳಿಯ 72 ಹಳ್ಳಿಗಳಲ್ಲಿ ಜೀವಜಲಕ್ಕೆ ಹಾಹಾಕಾರ

KannadaprabhaNewsNetwork |  
Published : Mar 14, 2026, 02:30 AM IST
1)- 13ಎಚ್‌ ಆರ್‌ ಪಿ 1 -ಹರಪನಹಳ್ಳಿ ತಾಲೂಕಿನ ವ್ಯಾಸನ ತಾಂಡದಲ್ಲಿ ಖಾಸಗಿ ಬೋರ್‌ ವೆಲ್‌ ಗೆ ಮೊರೆ ಹೋದ ಮಹಿಳೆಯರು 2)-13ಎಚ್‌ ಆರ್‌ ಪಿ 2 - ಸಿ.ಮಂಜನಾಯ್ಕ ಎಇಇ, ಕುಡಿಯುವ ನೀರು ಮತ್ತು ನೈರ್ಮಲ್ಯ ಸರಬರಾಜು ಇಲಾಖೆ, ಹರಪನಹಳ್ಳಿ (ಕೋಟ್‌ ಗೆ ) 3)- 13ಎಚ್‌ ಆರ್‌ ಪಿ 3 -  ಪಣಿಯಾಪುರ ಲಿಂಗರಾಜ, ರೈತ ಮುಖಂಡ, ಹರಪನಹಳ್ಳಿ (ಕೋಟ್‌ ಗೆ )  | Kannada Prabha

ಸಾರಾಂಶ

ಕೆಲವೆಡೆ ಪೈಪ್‌ಲೈನ್‌ಗಳು ದುರಸ್ತಿ ಹಂತದಲ್ಲಿರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ.

ಬಿ.ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಫೆಬ್ರವರಿ ತಿಂಗಳ ಮಧ್ಯೆ ಭಾಗದಿಂದಲೇ ಬಿಸಿಲು ಏರುತ್ತಾ ಸಾಗಿ ದಿನದಿಂದ ದಿನಕ್ಕೆ ಪ್ರಖರವಾಗತೊಡಗಿದೆ. ಈಗಲೇ ಈ ಪರಿ ಬಿಸಿಲಿದ್ದರೆ ಎಪ್ರಿಲ್, ಮೇ ತಿಂಗಳಲ್ಲಿ ಹೆಂಗಪ್ಪ ಎಂದು ಜನರು ಆತಂಕ ಪಡುತ್ತಿದ್ದಾರೆ. ಇನ್ನೊಂದೆಡೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜೀವ ಜಲಕ್ಕೆ ಹಾಹಾಕಾರ ಆರಂಭಗೊಂಡಿದೆ.

ತಾಲೂಕಿನ 72ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಾ ಸಾಗಿದೆ. ಕೆಲವೆಡೆ ಕೊಳವೆಬಾವಿಗಳು ಬತ್ತುತ್ತಿವೆ. ಇನ್ನು ಕೆಲವೆಡೆ ಪೈಪ್‌ಲೈನ್‌ಗಳು ದುರಸ್ತಿ ಹಂತದಲ್ಲಿರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ.

ಎಲ್ಲೆಲ್ಲಿ ಸಮಸ್ಯೆ?: ಬಾಗಳಿ, ಕಾಯಕದಹಳ್ಳಿ, ಹಗರಿಗುಡಿಹಳ್ಳಿ, ಪಣಿಯಾಪುರ, ಚಟ್ನಿಹಳ್ಳಿ, ಉಚ್ಚಂಗಿದುರ್ಗ, ನಂದಿಬೇವೂರು, ಮತ್ತೂರು, ನಿಟ್ಟೂರು, ಮೈದೂರು, ಶಿವಪುರ, ಚೆನ್ನಾಪುರ , ಡಗ್ಗಿಬಸ್ಸಾಪುರ, ಕಾನಹಳ್ಳಿ, ಲಕ್ಷ್ಮೀಪುರ, ಸೇವಾನಗರ, ಯಡಿಹಳ್ಳಿ, ಬಿಕ್ಕಿಕಟ್ಟಿ, ಚಿಗಟೇರಿ, ಅರಸೀಕೆರೆ ತಿಮಲಾಪುರ, ಹೊಂಬಳಗಟ್ಟಿ, ಜಿ.ದಾದಾಪುರ, ಗಡಿಗುಡಾಳು, ಯು.ಬೇವಿನಹಳ್ಳಿ ತಾಂಡ, ಹುಣಸಿಕಟ್ಟಿ, ಮತ್ತಿಹಳ್ಳಿ, ಗರ್ಭಗುಡಿ ತಾಂಡ, ಕುಂಚೂರು, ಕೆರೆಗುಡಿಹಳ್ಳಿ, ಕೂಲಹಳ್ಳಿ, ಕಡಬಗೇರಿ, ಯರಬಳ್ಳಿ, ಕ್ಯಾರಕಟ್ಟಿ, ಗುಳೇದಹಟ್ಟಿ ತಾಂಡ, ಯರಬಳ್ಳಿ ತಾಂಡ, ಬಂಡ್ರಿ ತಾಂಡ, ಗೌರಿಹಳ್ಳಿ ಸೇರಿದಂತೆ ಒಟ್ಟು 72 ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

ಇವುಗಳಲ್ಲದೆ ಪ್ರತಿದಿನ ಬೇರೆ ಬೇರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಗ್ರಾಪಂ ಹಾಗೂ ತಾಪಂಗಳಿಗೆ ದೂರುಗಳು ಬರುತ್ತಲೇ ಇವೆ. ವ್ಯಾಸನ ತಾಂಡ, ಗುರುಶಾಂತನಹಳ್ಳಿ, ಕೊರಚರಹಟ್ಟಿ, ಮಾಚಿಹಳ್ಳಿ ತಾಂಡ, ಹೊಂಬಳಗಟ್ಟಿ ಹನುಮನಹಳ್ಳಿ, ಶ್ರೀಕಂಠಪುರ, ಹುಣಸಿಕಟ್ಟಿ ಮುಂತಾದ 15 ಗ್ರಾಮಗಳಲ್ಲಿ ರೈತರ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಲ್ಲಿ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆಯಾ ಗ್ರಾಪಂ ಪಿಡಿಒಗಳು ತಿಳಿಸಿದ್ದಾರೆ.

ಸಭೆ ನಡೆಸಿದ ಶಾಸಕರು:

ಕುಡಿಯುವ ನೀರಿನ ಸಮಸ್ಯೆ ತಾಲೂಕಿನಲ್ಲಿ ಉಲ್ಬಣವಾಗುತ್ತಿರುವುದರ ಬಗ್ಗೆ ತಿಳಿದ ಶಾಸಕಿ ಎಂ.ಪಿ.ಲತಾ, ಈಚೆಗೆ ತಾಪಂನಲ್ಲಿ ಸಭೆ ನಡೆಸಿ, "ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ ನೆಪ ಹೇಳುತ್ತಿದ್ದರೆ ನಿಮಗೆ ಶಾಪ ತಟ್ಟುತ್ತದೆ " ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ತಾಲೂಕಿನಲ್ಲಿ ಜೆಜೆಎಂ ಯೋಜನೆಯು ಶೇ.80ರಷ್ಚು ಪೂರ್ಣಗೊಂಡಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿದ್ದರೂ ಇನ್ನು ಅನೇಕ ಕಡೆ ಮನೆ ಮನೆಗೆ ನಳ ಅಳವಡಿಸುವ ಜೆಜೆಎಂ ಕುಡಿಯುವ ನೀರು ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ.

₹2.33 ಕೋಟಿ ಪ್ರಸ್ತಾವನೆ:

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಮರ್ಥವಾಗಿ ಎದುರಿಸಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ₹2.33 ಕೋಟಿ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ವಿಜಯನಗರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. 13 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಹ ಪ್ರಸ್ತಾವನೆ ಕಳಿಸಲಾಗಿದೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಹುಗ್ರಾಮ ಯೋಜನೆಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಬೇಕಾಗಿದೆ.

ಬೇಸಿಗೆ ಆರಂಭದಲ್ಲಿಯೇ ಇಷ್ಟೊಂದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಿಸಿಲಿನ ಧಗೆ ಹೋಗಲಾಡಿಸಿ ದೇಹ ತಂಪಾಗಿಸಿಕೊಳ್ಳಲು ಸಮರ್ಪಕ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.

ಹರಪನಹಳ್ಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಸೀಕೆರೆ ಹೋಬಳಿಯಲ್ಲೂ ತೀವ್ರವಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ತ್ವರಿತವಾಗಿ ಜನರು ಹೋರಾಟಕ್ಕೆ ಮುಂದಾಗುವುದಕ್ಕೂ ಪೂರ್ವದಲ್ಲಿಯೇ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಹರಪನಹಳ್ಳಿ ರೈತ ಮುಖಂಡ ಪಣಿಯಾಪುರ ಲಿಂಗರಾಜ.

ಶಾಸಕರು ನೀರಿನ ಸಮಸ್ಯೆ ನಿವಾರಣೆಗೆ ಸಭೆ ನಡೆಸಿ ಸಲಹೆ-ಸೂಚನೆ ನೀಡಿದ್ದಾರೆ. ₹2.33 ಕೋಟಿ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ರೈತರ ಕೊಳವೆಬಾವಿಯಿಂದ ಬಾಡಿಗೆ ಆಧಾರದಲ್ಲಿ ನೀರು ಪೂರೈಕೆ ಮಾಡುವಂತೆ ಪಿಡಿಒಗಳಿಗೆ ಸೂಚಿಸಿದ್ದೇವೆ. ಅನುದಾನ ಬಿಡುಗಡೆಯಾದ ಕೂಡಲೇ ಕೊಳಬೆಬಾವಿ ಕೊರೆಸುವುದು, ಪೈಪ್‌ಲೈನ್‌ ದುರಸ್ತಿ ಮುಂತಾದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಕುಡಿಯುವ ನೀರು- ನೈರ್ಮಲ್ಯ ಇಲಾಖೆಯ ಎಇಇ ಮಂಜನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ
ಯಲ್ಲಾಪುರ ಟಿಎಂಎಸ್‌ ಆಡಳಿತಾಧಿಕಾರಿ ವಿರುದ್ಧ ಉಪವಾಸ ಸತ್ಯಾಗ್ರಹ