8 ವೈಯಕ್ತಿಕ, 8 ಸಮುದಾಯ ಅರಣ್ಯ ಹಕ್ಕು ಅರ್ಜಿಗೆ ಒಪ್ಪಿಗೆ

KannadaprabhaNewsNetwork | Published : May 21, 2025 12:16 AM

ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡ 8 ವೈಯಕ್ತಿಕ ಹಾಗೂ 8 ಸಮುದಾಯ ಹಕ್ಕುಗಳ ಅರ್ಜಿಗಳಿಗೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅರಣ್ಯ ಹಕ್ಕುಸಮಿತಿ ಸಭೆಯಲ್ಲಿ ಅನುಮೋದನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಹಕ್ಕುಗಳ ಅರ್ಜಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ದೊರೆಯಿತು.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಈ ಕುರಿತು ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಪರಿಶಿಷ್ಟ ಪಂಗಡದ 8 ವೈಯಕ್ತಿಕ ಹಾಗೂ 8 ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ಉಪ ವಿಭಾಗ ಮಟ್ಟದಲ್ಲಿ ಅನುಮೋದನೆ ದೊರೆತಿದ್ದು, ಜಿಲ್ಲಾಮಟ್ಟದಲ್ಲಿ ಅನುಮೋದಿಸಬೇಕಿದೆ ಎಂದು ಕೋರಿದರು.ಪೊನ್ನಂಪೇಟೆ ತಾಲೂಕಿನ ಪರಿಶಿಷ್ಟ ಪಂಗಡದ ಕಾಡುಕುರುಬ ಸಮಾಜದ ತಿತಿಮತಿಯ ದೊಡ್ಡರೇಷ್ಮೆ ಹಡ್ಲುವಿನ ಸ್ವಾಮಿ ಬಿ.ಕೆ. ಬಿನ್ ಕಾಳ ಹಾಗೆಯೇ ನಾಲ್ಕೇರಿ ಗ್ರಾ.ಪಂ.ನ ಗೋಳಿಗದ್ದೆಯ ಪರಿಶಿಷ್ಟ ಪಂಗಡದ ಜೇನುಕುರುಬ ಜೆ.ಬೋಜಿ, ಜೆ.ಆರ್.ಸಣ್ಣಪ್ಪ ಬಿನ್ ಪೌತಿ ರಂಗ, ಕುಶಾಲನಗರ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ರಾಮು ವೈ.ಡಿ. ಬಿನ್ ಪೌತಿ ದೊರೆಸ್ವಾಮಿ, ಪರಿಶಿಷ್ಟ ಪಂಗಡದ ಯರವ, ನಂಜರಾಯಪಟ್ಟಣದ ರಾಧ ಬಿ.ಎಂ. ಕೋಂ. ಪೌತಿ ಕೃಷ್ಣಪ್ಪ, ಪರಿಶಿಷ್ಟ ಪಂಗಡದ ಜೇನು ಕುರುಬ, ನಂಜರಾಯ ಪಟ್ಟಣದ ಚೆಲ್ಲಪ್ಪ ಬಿ.ಕೆ., ಪೌತಿ ಕಾಳ ಪರಿಶಿಷ್ಟ ಪಂಗಡದ ಜೇನುಕುರುಬ, ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಳುವಾರ ಹಾಡಿಯ ಚಂದ್ರಕಲಾ ಕೋಂ. ಶಂಕರ ಪರಿಶಿಷ್ಟ ಪಂಗಡ, ಚಿಕ್ಕಳುವಾರ ಹಾಡಿಯ ಬಸಪ್ಪ ಬಿನ್ ಕಾಳಸಪ್ಪ ಪರಿಶಿಷ್ಟ ಪಂಗಡ, ಚಿಕ್ಕಳುವಾರದ ಮರಿಯಪ್ಪ ಬಿನ್ ಹುಚ್ಚಪ್ಪ ಪರಿಶಿಷ್ಟ ಪಂಗಡ, ಇವರ ವೈಯಕ್ತಿಕ ಅರ್ಜಿಗಳಿಗೆ ಜಿಲ್ಲಾಮಟ್ಟದ ಸಮಿತಿಯಲ್ಲಿ ಅನುಮೋದನೆ ದೊರೆಯಿತು.ಸಮುದಾಯ ಹಕ್ಕುಗಳಿಗೆ ಸಂಬಂಧಿಸಿದಂತೆ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡರೇಷ್ಮೆ ಜೆ.ಬಿ.ರಾಮು ಹಾಗೂ 96 ಜನ ಪರಿಶಿಷ್ಟ ಪಂಗಡದವರಿಗೆ, ಚೇಣಿಹಡ್ಲು ಹಾಡಿಯ ಸುಬ್ಬ ಪಿ.ಎಸ್. ಬಿನ್ ಪೌತಿ ನಂಜ ಹಾಗೂ 66 ಜನ ಪರಿಶಿಷ್ಟ ಪಂಗಡದವರಿಗೆ, ಬೊಂಬುಕಾಡು ರಾಮು ಪಿ.ಕೆ. ಬಿನ್ ಕರಿಯ ಹಾಗೂ 41 ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆಹಳ್ಳ, ಆನೆ ಕ್ಯಾಂಪು, ಜೆ.ಬಿ.ಕುಮಾರ ಹಾಗೂ 22 ಜನ ಪರಿಶಿಷ್ಟ ಪಂಗಡದವರಿಗೆ, ಆಯಿರಸುಳಿ ರಾಮು ಪಿ.ಎಸ್. ಹಾಗೂ 46 ಜನ ಪರಿಶಿಷ್ಟ ಪಂಗಡದವರಿಗೆ, ಜಂಗಲ್‌ಹಾಡಿ ಪಿ.ಸಿ.ಮಾದ ಮತ್ತು 32 ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆ ಹಳ್ಳ ಫಾರ್ಮ್ ಪಿ.ಎಂ.ಸುಬ್ಬಣ್ಣ ಹಾಗೂ 63 ಜನ ಪರಿಶಿಷ್ಟ ಪಂಗಡದವರಿಗೆ, ಕಾರೆಕಂಡಿ ಹಾಡಿಯಲ್ಲಿ ಪಾಪಣ್ಣ ಪಿ.ಎಸ್. ಹಾಗೂ 51 ಜನ ಪರಿಶಿಷ್ಟ ಪಂಗಡದವರಿಗೆ, ಸಮುದಾಯ ಹಕ್ಕು ಕಾಯ್ದೆಯಡಿ ಕಿರು ಅರಣ್ಯ ಸಂಗ್ರಹಕ್ಕಾಗಿ ಅನುಮೋದನೆ ದೊರೆತಿದೆ. 2012ರಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ 45 ಸಮುದಾಯ ಸಂಪನ್ಮೂಲ ಅರ್ಜಿಗಳನ್ನು ಒಂದಕ್ಕಿಂತ ಹೆಚ್ಚು ಸಾಕ್ಷಿ ಕೋರಿ ಅನುಮೋದಿಸಲಾಗಿದ್ದು, ಈ ಪೈಕಿ ಮರು ಸರ್ವೆ ನಡೆಸಿ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನ 8 ಮತ್ತು ವಿರಾಜಪೇಟೆ ತಾಲೂಕಿನ 8 ಒಟ್ಟು 16 ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ‘ಕಿರು ಅರಣ್ಯ ಸಂಗ್ರಹಕ್ಕಾಗಿ ಹಕ್ಕು ಪತ್ರ’ ವಿತರಿಸಲಾಗಿದೆ. 29 ಅರ್ಜಿಗಳು ಹಕ್ಕುಪತ್ರ ವಿತರಿಸಲು ಬಾಕಿ ಇದ್ದು, 8 ಅರ್ಜಿಗಳು ಮರು ಸರ್ವೆ ನಡೆಸಿ ಹಕ್ಕುಪತ್ರ ಸಹಿಗೆ ಸಲ್ಲಿಸಬೇಕಿದೆ. ಉಳಿದಂತೆ 21 ಅರ್ಜಿಗಳು ಬಾಕಿ ಇವೆ. ಮರು ಪರಿಶೀಲನೆಗಾಗಿ ಬಾಕಿ ಇರುವ ಅರ್ಜಿಗಳು ನಾಲ್ಕೇರಿ ಗ್ರಾ.ಪಂ.ವ್ಯಾಪ್ತಿಯ ನಾಗರಹೊಳೆ ವ್ಯಾಪ್ತಿಯ ತುಂಡುಮುಂಡಗೆ ಕೊಲ್ಲಿ, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ತಟ್ಟೆಕೆರೆ, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ದೇವರಕಾಡು, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅವರೆಗುಂದ ಈ ಹಾಡಿಗಳಲ್ಲಿ ಮರು ಪರಿಶೀಲನೆಗೆ ಬಾಕಿ ಇದ್ದು, ಕಾನೂನು ರೀತಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಕೊಡಗು ಜಿಲ್ಲೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿವರ ಇಂತಿದೆ. ಜಿಲ್ಲೆಯಲ್ಲಿ ಇದುವರೆಗೆ ಪರಿಶಿಷ್ಟ ಪಂಗಡದವರು 2847 ಅರ್ಜಿಗಳನ್ನು ಸಲ್ಲಿಸಿದ್ದು, ಇತರೆ 1373 ಜನರು ಅರ್ಜಿ ಸಲ್ಲಿಸಿದ್ದಾರೆ. ಹಾಗೂ 57 ಮಂದಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಒಟ್ಟು 4277 ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಪರಿಶಿಷ್ಟ ಪಂಗಡದ 1840 ಅರ್ಜಿಗಳಿಗೆ ಅನುಮೋದನೆಯಾಗಿದೆ. ಇತರೆ ಸಮಾಜದಲ್ಲಿ 527 ಅರ್ಜಿಗಳು ಅನುಮೋದನೆಯಾಗಿದೆ. ಹಾಗೆಯೇ ಸಿಎಫ್‌ಆರ್ ನಡಿ 45 ಅರ್ಜಿಗಳು ಅನುಮೋದನೆಯಾಗಿದ್ದು, ಒಟ್ಟು 2412 ಅರ್ಜಿಗಳು ಅನುಮೋದನೆಯಾಗಿದೆ. ಉಳಿದಂತೆ 1865 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ನಾಗರಹೊಳೆ ಹುಲಿ ಯೋಜನಾ ವಿಭಾಗದ ನಿರ್ದೇಶಕರಾದ ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅನನ್ಯ ಕುಮಾರ್, ಲಕ್ಷ್ಮಿಕಾಂತ್, ಭೂದಾಖಲೆಗಳ ಉಪ ನಿರ್ದೇಶಕರಾದ ನಾರಾಯಣ ಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.