ರಸ್ತೆ ಸುರಕ್ಷತಾ ಸಮಿತಿ ಸಭೆ । ಅಜಾಗರೂಕತೆಯ ಚಾಲನೆ ವಿರುದ್ಧ ಕಠಿಣ ಕ್ರಮದ ಮಾಹಿತಿ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಅತೀ ವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ 82 ಜನರ ಚಾಲನ ಪರವಾನಗಿಯನ್ನು 6 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲಾಕ್ಸ್ಪಾಟ್ಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯ, ವೈಜ್ಞಾನಿಕ ಕ್ರಮಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು, ಅವಶ್ಯವಿದ್ದಲ್ಲಿ ಹಂಪ್ಗಳ ಅಳವಡಿಕೆ, ಸೂಚನಾ ಫಲಕ ಮತ್ತಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರ ವ್ಯಾಪ್ತಿಯಲ್ಲಿ ಬಸ್ಗಳನ್ನು ಅತೀ ವೇಗವಾಗಿ ಓಡಿಸುವ, ಎಲ್ಲೆಂದರಲ್ಲಿ ನಿಲ್ಲಿಸುವ, ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದರು.
ವಾಣಿಜ್ಯ ಕಟ್ಟಡಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂಬ ನಿಯಮವಿದ್ದರೂ, ಉಡುಪಿಯಲ್ಲಿ ಅದನ್ನು ಗಾಳಿಗೆ ತೂರಿ ಪಾರ್ಕಿಂಗ್ ಮೀಸಲು ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಹೆಚ್ಚುತ್ತಿದೆ. ಇದರಿಂದಾಗಿ ಜನರು ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಈಗಾಗಲೇ ನೋಟಿಸ್ ನೀಡಿದ್ದರೂ ಕಟ್ಟಡ ಮಾಲಕರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಅಂತಿಮ ನೋಟೀಸ್ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.ಉಡುಪಿ ನಗರದ 5 ಜಂಕ್ಷನ್ಗಳಲ್ಲಿ ಸಿಗ್ನಲ್ಲೈಟ್ ಅಳವಡಿಸಲು ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೂ ಅಳವಡಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಲ್ಸಂಕ ಹಾಗೂ ಅಂಬಲ್ಪಾಡಿ ಜಂಕ್ಷನ್ಗಳಲ್ಲಿ ಕೂಡಲೇ ಸಿಗ್ನಲ್ಲೈಟ್ ಅಳವಡಿಸುವಂತೆ ಆದೇಶಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎಎಸ್ಪಿ ಪರಮೇಶ್ವರ್ ಹೆಗಡೆ, ಡಿಎಫ್ಒ ಗಣಪತಿ, ರಾಹೆ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್., ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಗುತ್ತಿಗೆದಾರರು ಹಾಗೂ ಮತ್ತಿತರರು ಇದ್ದರು......................................
ಆಟೋ ನಿಲ್ದಾಣ ಸದಸ್ಯತ್ವಕ್ಕೆ 1 ಲಕ್ಷ ರು. ವಸೂಲಿ !ಉಡುಪಿಯಲ್ಲಿ ಆಟೋ ನಿಲ್ದಾಣಗಳಲ್ಲಿ ಆಟೋ ನಿಲ್ಲಿಸಲು, ಸದಸ್ಯತ್ವ ಎಂದು ಹೇಳಿ 40 ಸಾವಿರದಿಂದ 1 ಲಕ್ಷ ರು.ಗಳವರೆಗೆ ಹಣ ವಸೂಲಿ ಮಾಡಿದ ಬಗ್ಗೆ ದೂರುಗಳು ಬಂದಿವೆ. ಆಟೋ ನಿಲ್ದಾಣದ ಸ್ಥಳ ನಗರಸಭೆಯ ಸೊತ್ತಾಗಿದೆ. ಈ ನಿಲ್ದಾಣಗಳಿಗೆ ಯಾರೂ ಸದಸ್ಯತ್ವ ನೀಡುವ, ಹಣ ವಸೂಲಿ ಮಾಡುವ ಹಾಗಿಲ್ಲ. ಈ ಬಗ್ಗೆ ನಗರಸಭಾ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.