ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ವ್ಯಾಟ್ಸಾಪ್ನಲ್ಲಿ ವೀಡಿಯೋ ಕರೆಮಾಡಿ, ವರ್ಚ್ಯುವಲ್ ಅರೆಸ್ಟ್ ಎಂದು ಗದರಿಸಿ ಹಣ ಲಪಟಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ನಿಮ್ಮ ಮೇಲೆ 17 ಪ್ರಕರಣಗಳು ದಾಖಲಾಗಿದೆ. ಯು ಆರ್ ಅಂಡರ್ ವರ್ಚ್ಯುವಲ್ ಅರೆಸ್ಟ್ ಎಂದು ಪೋನ್ನಲ್ಲಿ ಗದರಿಸಿದ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಬರೋಬ್ಬರಿ 89 ಲಕ್ಷ ರು.ಗಳನ್ನು ಲಪಟಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿಯ ಸಂತೋಷ ಕುಮಾರ್ (45) ಎಂಬವರಿಗೆ ಸೆ.11ರಂದು ಅಪರಿಚಿತರು ಕರೆಮಾಡಿ, ನಾವು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾದ ಅಧಿಕಾರಿ ಎಂದು ಪರಿಚಯಿಸಿಕೊಂಡರು ಮತ್ತು ನಿಮ್ಮ ಮೊಬೈಲ್ ನಂಬರ್ನಿಂದ ಕಾನೂನುಬಾಹಿರ ಜಾಹೀರಾತು ಕಳಿಸಿದ (ಇಲ್ಲಿಗಲ್ ಅಡ್ವಟೈಸ್ಮೆಂಟ್) ಹಾಗೂ ದೌರ್ಜನ್ಯ (ಹೆರಾಸಿಂಗ್) ಮಾಡಿದ ಬಗ್ಗೆ 17 ದೂರುಗಳು ಬಂದಿದ್ದು, 17 ಎಫ್.ಐ.ಆರ್. ಆಗಿವೆ. ಆದ್ದರಿಂದ ಇನ್ನು 2 ಗಂಟೆಯೊಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲ ಕಾಂಟಾಕ್ಟ್ ನಂಬರ್ ಡಿಸ್ಕನೆಕ್ಟ್ ಮಾಡುತ್ತೇವೆ. ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಆಗಿದೆ ಎಂದು ಬೆದರಿಸಿದ್ದಾರೆ.ನಂತರ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ವ್ಯಾಟ್ಸಾಪ್ನಲ್ಲಿ ವೀಡಿಯೋ ಕರೆಮಾಡಿ, ಇನ್ಸ್ಪೆಕ್ಟರ್ ಸೈಬರ್ ಅಂಧೇರಿ ಈಸ್ಟ್ ಮುಂಬೈ ಎಂದು ಹೇಳಿ ಕೇಸು ದಾಖಲಾದ ಬಗ್ಗೆ ಹಾಗೂ ಸಂತೋಷ್ ಅವರ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ, ನರೇಶ್ ಗೋಯೆಲ್ ಎಂಬಾತನಿಂದ ಮನಿ ಲಾಂಡ್ರಿಂಗ್ ಆಗಿದೆ ಎಂದು ಹೇಳಿದರು ಮತ್ತು ಆದಾಯದ ಮೂಲ ಪರಿಶೀಲಿಸಲು ಸಂತೋಷ್ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಾಗ್ಪುರದ ಎಸ್.ಬಿ.ಐ. ಬ್ಯಾಂಕ್ ಖಾತೆಗೆ ವರ್ಗಾಯಿಸಲು ತಿಳಿಸಿ, ಹಣದ ಬಗ್ಗೆ ಪರಿಶೀಲನೆ ಆಗುವವರೆಗೆ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ಬೆದರಿಸಿದರು.ಈ ಎಲ್ಲ ಘಟನೆಗಳಿಂದ ಹೆದರಿದ ಸಂತೋಷ್ ಸೆ.12ರಂದು 89 ಲಕ್ಷ ರು. ಹಣವನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದರು. ಆಮೇಲೆ ಆರೋಪಿಗಳಿಂದ ಯಾವುದೇ ಕರೆ ಸಂದೇಶ ಬಾರದಿದ್ದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಅವರು ಉಡುಪಿ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.