- ಅಗ್ರಹಾರದ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ
ನಾನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯಾಧ್ಯಕ್ಷನಾಗಿ 5 ತಿಂಗಳಲ್ಲಿ ಸದಸ್ಯತ್ವ ಅಭಿಯಾನದಡಿ ಹೊಸದಾಗಿ 9 ಸಾವಿರ ಸದಸ್ಯರನ್ನು ಸೇರಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯಾಧ್ಯಕ್ಷ ಎಸ್.ರಘುನಾಥ್ ತಿಳಿಸಿದರು.
ಶನಿವಾರ ಅಗ್ರಹಾರದ ಮೆಣಸೂರು ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಮಹಾ ಸಭಾದ ಕಚೇರಿಯಲ್ಲಿ ನವೀಕರಿಸಿ ಸುಸಜ್ಜಿತಗೊಳಿಸಿದ್ದೇನೆ. ಮಹಾ ಸಭಾಕ್ಕೆ ದಾನಿಗಳ ನೆರವಿನಿಂದ ₹100 ಕೋಟಿ ಸಂಗ್ರಹಿಸಿ ಮೂಲ ನಿಧಿ ಸ್ಥಾಪಿಸಬೇಕೆಂಬ ಆಶಯದಿಂದ ದಾನಿಗಳನ್ನು ಸಂಪರ್ಕಿಸಿ ಈಗಾಗಲೇ ₹1 ಕೋಟಿ ಸಂಗ್ರಹಿಸ ಲಾಗಿದೆ. ಈ ಹಣದಿಂದ ಬರುವ ಬಡ್ಡಿಯಿಂದ ವಿಪ್ರ ಸಮಾಜದವರ ಬಡ ಕುಟುಂಬದವರ ಆರೋಗ್ಯ, ಶಿಕ್ಷಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಚಿಂತನೆ ನಡೆಸಲಾಗಿದೆ. ಬ್ಯಾಂಕಿನಲ್ಲಿ ಅಕ್ಷಯ ನಿಧಿ ಎಂಬ ಖಾತೆ ತೆರೆಯ ಲಾಗಿದ್ದು ದಾನಿಗಳು ಆನ್ ಲೈನ್ ಮೂಲಕ ಹಣ ನೀಡಬಹುದು. ಬ್ರಾಹ್ಮಣ ಮಹಾ ಸಭಾದ ಎಲ್ಲಾ ವ್ಯವಹಾರವೂ ಪಾರದರ್ಶಕವಾಗಿದೆ ಎಂದರು.ಶಿಕ್ಷಕರು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾತಿಗಣತಿಗೆ ಬಂದಾಗ ಎಲ್ಲಾ ವಿಪ್ರ ಬಾಂಧವರು ಜಾತಿ ಕಾಲಂ ನಲ್ಲಿ ಬ್ರಾಹ್ಮಣ ಎಂದು ಮಾತ್ರ ನಮೂದಿಸಬೇಕು. ಉಪ ಜಾತಿ ನಮೂದಿಸ ಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಆರ್. ರವಿಶಂಕರ್, ತಾಲೂಕು ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ವಿ. ರಾಜೇಂದ್ರಕುಮಾರ್, ಹರ್ಷ, ಸುಬ್ರಮಣ್ಯಸ್ವಾಮಿ ದೇವಸ್ಥಾನದ ಅರ್ಚಕ ಪ್ರಸನ್ನ ಐತಾಳ್, ಸುಬ್ರಮಣ್ಯಸ್ವಾಮಿ ದೇವಸ್ಥಾನದ ಟ್ರಸ್ಟಿನ ಖಜಾಂಚಿ ಎಚ್. ನಂಜುಂಡಸ್ವಾಮಿ, ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ಚಂದ್ರಮೌಳಿ, ಭಾಗ್ಯನಂಜುಂಡಸ್ವಾಮಿ, ರಾಧಾಕೃಷ್ಣ, ಶಶಿಮೋಹನ್, ಶಿವಶಂಕರ್ ಮತ್ತಿತರರು ಇದ್ದರು.