ಸೆ.೨೫ರಂದು ಮಂಡ್ಯಜಿಲ್ಲೆಗೆ ಬಸವ ರಥ ಆಗಮನ

KannadaprabhaNewsNetwork |  
Published : Sep 22, 2025, 01:00 AM IST
೨೧ಕೆಎಂಎನ್‌ಡಿ-೬ಮಂಡ್ಯದ ವೀರಶೈವ ವಿದ್ಯಾರ್ಥಿನಿಯದಲ್ಲಿ ಏರ್ಪಡಿಸಿದ್ದ ಬಸವಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ವೈಚಾರಿಕತೆ, ವೈಜ್ಞಾನಿಕತೆಯ ಉತ್ತುಂಗದಲ್ಲಿ ಮೆರೆಯುತ್ತಿರುವ ಮಾನವರಿಗೆ ಆದರ್ಶಗಳ ಅರಿವು ಬೇಕಿದೆ. ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು, ವ್ಯಕ್ತಿತ್ವ ವಿಕಸನದಂತಹ ಮಹತ್ವದ ವಿಚಾರಗಳನ್ನು ಅಭಿಯಾನದಲ್ಲಿ ಪ್ರಚಾರಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಚರಿಸುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ರಥ ಸೆ.೨೫ರಂದು ಮಂಡ್ಯನಗರಕ್ಕೆ ಆಗಮಿಸುತ್ತಿದ್ದು ಸಮಾರಂಭ ಯಶಸ್ವಿಗೊಳಿಸುವಂತೆ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಮನವಿ ಮಾಡಿದರು.

ನಗರದ ವೀರಶೈವ ವಿದ್ಯಾರ್ಥಿನಿಯದಲ್ಲಿ ಕರೆಯಲಾಗಿದ್ದ ಬಸವಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಮುಂದಿನ ಪೀಳಿಗೆಗೆ ಶರಣಸಂಸ್ಕೃತಿಯ ಪರಿಚಯ ಮಾಡಿಸುವ ಮಹತ್ತರ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದರು.

ವೈಚಾರಿಕತೆ, ವೈಜ್ಞಾನಿಕತೆಯ ಉತ್ತುಂಗದಲ್ಲಿ ಮೆರೆಯುತ್ತಿರುವ ಮಾನವರಿಗೆ ಆದರ್ಶಗಳ ಅರಿವು ಬೇಕಿದೆ. ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು, ವ್ಯಕ್ತಿತ್ವ ವಿಕಸನದಂತಹ ಮಹತ್ವದ ವಿಚಾರಗಳನ್ನು ಅಭಿಯಾನದಲ್ಲಿ ಪ್ರಚಾರಪಡಿಸಲಾಗುವುದು ಎಂದರು.

ಅಭಿಯಾನ ಯಶಸ್ವಿಗೊಳಿಸಲು ಮಂಡ್ಯ ಜಿಲ್ಲೆಯ ಬಸವಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾಗಿ ಅಖಿಲಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಮಹದೇವಪ್ಪ, ಜೆಎಲ್‌ಎಂ ಮಂಡ್ಯ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ಪಾಂಡವಪುರ ಕಸಾಪ ಅಧ್ಯಕ್ಷ ಪ್ರಕಾಶ್, ಪ್ರಾಂಶುಪಾಲ ಮಹದೇವಪ್ಪ, ಬಸವಕೇಂದ್ರದ ಅಧ್ಯಕ್ಷ ಕಿರುಗಾವಲು ನಾಗರಾಜ್, ಮೆಣಸಗೆರೆ ಶಿವಲಿಂಗಯ್ಯ, ಯೋಗಶಿಕ್ಷಕ ಶಿವರುದ್ರಪ್ಪ, ಜೆಎಲ್‌ಎಂ ಉಪಾಧ್ಯಕ್ಷ ಅಮೃತಿ ಶಂಕರ್, ಬೇವುಕಲ್ಲು ಗಂಗಾಧರ್, ಮಲ್ಲಿಕಾರ್ಜುನಯ್ಯ ಇತರರಿದ್ದರು.ಕಲಾಮಂದಿರದಲ್ಲಿ ಸಮಾರಂಭ

ಸೆ.೨೫ರಂದು ಮಂಡ್ಯ ನಗರಕ್ಕೆ ಆಗಮಿಸಲಿರುವ ಬಸವಸಂಸ್ಕೃತಿ ಅಭಿಯಾನದ ರಥ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬೆಳಿಗ್ಗೆ ೧೧ಗಂಟೆಗೆ ಕಲಾಮಂದಿರಕ್ಕೆ ಆಗಮಿಸಲಿದೆ. ಬಾಲ್ಕಿಮಠದ ಡಾ.ಬಸವಲಿಂಗ ಪಟ್ಟದದೇವರು, ಗದಗದ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಗಳ ಪೀಠಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದ, ಅಪರೂಪದ ಜಂಗಮದೆಡೆಗೆ ನಾಟಕ ನಡೆಯಲಿದ್ದು ಆಗಮಿಸುವ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!