- ಕುದುರೆಗುಂಡಿ ಸರ್ಕಾರಿ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ, ಟಿ.ಡಿ.ರಾಜೇಗೌಡರಿಗೆ ಅಭಿನಂದನಾ ಸಮಾರಂಭ
ರಾಜ್ಯದಲ್ಲಿ ಈಗ 900 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭವಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರ ಕುದುರೆಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಳೇ ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಎಂ.ಸಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘ ಗ್ರಾಮಸ್ಥರು ಸೇರಿ ಕುದುರೆಗುಂಡಿಗೆ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿದ ಶಿಕ್ಷಣ ಸಚಿವರು, ಶಾಸಕರಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವಶ್ಯಕತೆ ಮನಗಂಡು ಸರ್ಕಾರ ರಾಜ್ಯದ 6 ಸಾವಿರ ಗ್ರಾಪಂಗಳಲ್ಲಿ ಪ್ರತಿ ಗ್ರಾಪಂಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಚಿಂತನೆ ನಡೆಸಿದೆ. 2018 ರಿಂದ ರಾಜ್ಯದಲ್ಲಿ 308 ಕೆಪಿಎಸ್ ಶಾಲೆಗಳಿತ್ತು. ಬಜೆಟ್ ನಲ್ಲಿ 500 ಕೆಪಿಎಸ್ ಮಂಜೂರು ಮಾಡಲಾಗಿತ್ತು. ಕಳೆದ 6-7 ತಿಂಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ 200 ಕೆಪಿಎಸ್ ಮಂಜೂರು ಮಾಡಿದ್ದೇವೆ. ಅಲ್ಲದೆ ಅಲ್ಪ ಸಂಖ್ಯಾತರಿ ಗಾಗಿ 100 ಸ್ಕೂಲ್ ಮಂಜೂರು ಮಾಡಿದ್ದೇವೆ. ಮುಂದೆ ರಾಜ್ಯದಲ್ಲಿ ಒಟ್ಟು 900 ಪಬ್ಲಿಕ್ ಸ್ಕೂಲ್ ನಡೆಯುತ್ತದೆ ಎಂದರು.
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಶೀಘ್ರದಲ್ಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ.ಮುಂದಿನ ವರ್ಷ ಶಾಲೆ ಪ್ರಾರಂಭದ ಹೊತ್ತಿಗೆ ಈ ಶಿಕ್ಷಕರು ಬರಲಿದ್ದಾರೆ. ಅನುದಾನಿತ ಶಾಲೆಗಳಿಗೆ 6 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಟಿ.ಡಿ.ರಾಜೇಗೌಡ, ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡಿದ ನುಗ್ಗಿಯ ಶುತ ಸೇನ ಗೌಡ, ಪ್ರಮೋದ್, ಸುಹಾಸ್ ರನ್ನು ಸನ್ಮಾನಿಸಲಾಯಿತು.
ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಸ್ವಾಗತಿಸಿದರು. ಸಹ ಶಿಕ್ಷಕ ಪ್ರಕಾಶ್ ಹಾಗೂ ಉಷಾ ಕಾರ್ಯಕ್ರಮ ನಿರೂಪಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀನಾ ಡಿ ಕಾಸ್ಟಾ ವಂದಿಸಿದರು.
ಜನವರಿ ಕೊನೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಶಿವಮೊಗ್ಗದಲ್ಲಿ ರಾಜ್ಯದ ಎಲ್ಲಾ ಕೆಪಿಎಸ್ ಶಾಲೆಗಳಿಗೆ ಚಾಲನೆ ನೀಡಲಿದ್ದಾರೆ. ಮತ್ತೆ 1 ತಿಂಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಕಡೆ ಕೆಪಿಎಸ್ ಪ್ರಾರಂಭವಾಗಲಿದೆ. ಕೆಪಿಎಸ್ ಶಾಲೆ ಪ್ರಾರಂಭವಾದರೆ ಉಳಿದ ಸರ್ಕಾರಿ ಶಾಲೆಗಳು ಮುಚ್ಚಲಿದೆ ಎಂಬ ಅಪಪ್ರಚಾರ ಪ್ರಾರಂಭವಾಗಿದೆ. ಒಬ್ಬ ವಿದ್ಯಾರ್ಥಿ ಇದ್ದರೂ ಒಬ್ಬ ಶಿಕ್ಷಕರನ್ನು ನೇಮಿಸಿ ಶಾಲೆ ನಡೆಸುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.