ಸಾವುಗಳ ಸವಾಲಿನಲ್ಲಿಯೂ ಮೂರು ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ರಂಜಿತ್ಕುಮಾರಸುರೇಶ ಯಳಕಪ್ಪನವರ
ಕಳೆದೆರೆಡು ವರ್ಷದಲ್ಲಿ ತನ್ನ ತಂದೆ-ತಾಯಿಗಳನ್ನು ಕಳೆದುಕೊಂಡರೂ ಸಹ ತಾಲೂಕಿನ ತೆಲುಗೋಳಿ ಬಿಎನ್ಎಂ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ತಂಬ್ರಹಳ್ಳಿ ಉತ್ತರಭಾಗದ ಎಚ್.ರಂಜಿತ್ಕುಮಾರ ಶೇ. ೯೫.೨೫ (೫೯೫) ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಎರಡು ವರ್ಷಗಳ ಹಿಂದೆಯೇ ತನ್ನ ತಂದೆ-ತಾಯಿಗಳನ್ನು ಕಳೆದುಕೊಂಡರೂ ಧೃತಿಗೆಡದೆ ವಿದ್ಯಾಭ್ಯಾಸದ ಕಡೆ ಚಿತ್ತಹರಿಸಿದ ರಂಜಿತ್, ನಿರಂತರ ಓದಿನ ಮೂಲಕ ತೆಲುಗೋಳಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ರಂಜಿತ್ನ ವಿಧ್ಯಾಭ್ಯಾಸಕ್ಕೆ, ಆಶ್ರಯಕ್ಕೆ ನೆರವಾಗಿದ್ದ ಮಾವ ಪ್ರವೀಣಕುಮಾರ ಕೂಡ ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡರು. ಇಂತಹ ನಿರಂತರ ಸಾವುಗಳ ಸವಾಲಿನ ನಡುವೆ ವಿದ್ಯಾಭ್ಯಾಸಕ್ಕೆ ಒತ್ತುನೀಡಿ ಮಾದರಿಯಾಗಿದ್ದಾನೆ.ನಮ್ಮ ತಂದೆ-ತಾಯಿ, ಇತ್ತೀಚೆಗೆ ಮಾವನ ಸಾವಿನ ನಡುವೆಯೂ ನನ್ನ ತಮ್ಮ ನಿರಂತರವಾಗಿ ಓದುವ ಮೂಲಕ ಎಸ್ಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ತನ್ನ ನೆಚ್ಚಿನ ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರವಾಗಿ ಓದುತ್ತಾ, ಜೊತೆಯಲ್ಲಿ ಮನೆಗೆಲಸ, ಹೊಲದ ಕೆಲಸ ಮಾಡುತ್ತಾ ಉತ್ತಮ ಅಂಕ ಪಡೆದು ಕುಟುಂಬದ ಕೀರ್ತಿ ಹೆಚ್ಚಿಸಿದ್ದಾನೆ. ಇಂಗ್ಲಿಷ್ ವಿಷಯದ ಅಂಕಗಳು ತೃಪ್ತಿ ತರದ ಕಾರಣ ಮರು ಮೌಲ್ಯಮಾಪನಕ್ಕೆ ಹಾಕಿದ್ದಾನೆ. ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವುದು ನಮಗೆ ಹೆಮ್ಮೆ ಅನಿಸಿದೆ. ರಂಜಿತ್ಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇದ್ದು, ಮುಂದಿನ ವಿದ್ಯಾಭ್ಯಾಸದಲ್ಲಿ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುತ್ತಾರೆ ರಂಜಿತ್ಕುಮಾರನ ಅಕ್ಕ ಸುಪ್ರಿಯ.
ಪ್ರತಿಭಾವಂತ ವಿದ್ಯಾರ್ಥಿ ರಂಜಿತ್ಕುಮಾರ ಬಡ ಕುಟುಂಬದಲ್ಲಿ ಜನಿಸಿ ಪರೀಕ್ಷಾ ಸಮಯದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ ಎನ್ನುತ್ತಾರೆ ತೆಲುಗೋಳಿ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಅಕ್ಕಿ ಬಸವರಾಜ.
ರಂಜಿತ್ ಕುಮಾರನ ಎಸ್ಸೆಸ್ಸೆಲ್ಸಿ ಸಾಧನೆ ನಿಜಕ್ಕೂ ಖುಷಿ ತಂದಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಸಾಧನೆ, ಜೀವನದ ಹಾದಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ ಎಂದು ಬಿಇಒ ಮೈಲೇಶ್ ಬೇವೂರ ತಿಳಿಸಿದ್ದಾರೆ.