ನಮ್ಮ ಕನಸು ನಮ್ಮ ತುಮಕೂರು ಅಭಿವೃದ್ಧಿಗೆ ಪ್ರಯತ್ನ

KannadaprabhaNewsNetwork | Published : May 8, 2025 12:30 AM
Follow Us

ಸಾರಾಂಶ

“ನಮ್ಮ ಕನಸು, ನಮ್ಮ ತುಮಕೂರು” ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನಡೆಯುತ್ತಿರುವ ಒಂದು ಪ್ರಾಮಾಣಿಕ ಪ್ರಯತ್ನ. ಇದರಲ್ಲಿ ಜಿಲ್ಲೆಯ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು“ನಮ್ಮ ಕನಸು, ನಮ್ಮ ತುಮಕೂರು” ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನಡೆಯುತ್ತಿರುವ ಒಂದು ಪ್ರಾಮಾಣಿಕ ಪ್ರಯತ್ನ. ಇದರಲ್ಲಿ ಜಿಲ್ಲೆಯ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.ನಗರದ ತುಮಕೂರು ವಿವಿ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿಯ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ ಹಾಗೂ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಕೈಗೊಂಡಿದ್ದ ನಮ್ಮ ಕನಸು, ನಮ್ಮ ತುಮಕೂರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳ್ನಾಡಿದರು.ಬೆಂಗಳೂರಿಗೆ ಅತಿ ಕಡಿಮೆ ದೂರದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ಒಳ್ಳೆಯ ರಸ್ತೆಗಳಿಲ್ಲ. ಸಾವಿರಾರು ಎಕರೆಯಲ್ಲಿ ಕೈಗಾರಿಕೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗವಿಲ್ಲ. ರಾಜಕೀಯವಾಗಿ, ಅರ್ಥಿಕವಾಗಿ, ಔದ್ಯೋಗಿಕವಾಗಿಯೂ ಹಿಂದೆ ಉಳಿದಿದೆ. ಹಾಗಾಗಿ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಎಲ್ಲಾ ತಾಲೂಕು, ಹೋಬಳಿ ಹಂತದಲ್ಲಿಯೂ ಅಲ್ಲಿನ ಯುವಜನತೆ, ಮುಖಂಡರುಗಳು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ಇಂದು ವಿವಿಧ ವಲಯಗಳ ಜನರು, ತುಮಕೂರು ಜಿಲ್ಲೆಯ ಅಭಿವೃದ್ದಿ ತಮ್ಮ ದೂರದೃಷ್ಟಿ ಚಿಂತನೆಗಳೇನು ಎಂಬುದನ್ನು ಹಂಚಿಕೊಳ್ಳುವ ಸಲುವಾಗಿ ದುಂಡು ಮೇಜಿನ ಸಭೆ ಕರೆಯಲಾಗಿದೆ ಎಂದರು.ರೈತರು, ಕಾರ್ಮಿಕರು, ಕ್ರೀಡಾಪಟುಗಳು,ಮಾಜಿ ಸೈನಿಕರು, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಜನರು ಸಹ ಪಾಲ್ಗೊಂಡಿದ್ದಾರೆ. ಅವರೆಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವ ಯೋಜನೆಗಳ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.ತುಮಕೂರು ಜಿಲ್ಲೆಯ ಶೈಕ್ಷಣಿವಾಗಿ ಸಾಕಷ್ಟು ಮುಂದುವರೆದಿದ್ದರೂ 10 ತಾಲೂಕುಗಳಿರುವ ಈ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಿನ ಅಗತ್ಯವಿದೆ. ನಾಲ್ಕು ತಾಲೂಕುಗಳ ಸಂಗಮ ಬಿಂದುವಾದ ಕೆ.ಬಿ.ಕ್ರಾಸ್‌ನಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾದರೆ ಹೆಚ್ಚಿನ ಅನುಕೂಲ ಜಿಲ್ಲೆಯ ಜನರಿಗೆ ಆಗಲಿದೆ.ಯುವ ಸಬಲೀಕರಣ ಇಲಾಖೆಯ ಉದ್ದೇಶಿಸಿ ಬಹು ಕೌಶಲ್ಯ ತರಬೇತಿ ಕೇಂದ್ರದ ಕಾರ್ಯಾರಂಭ ಇನ್ನಿತರ ವಿಚಾರಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಮುರುಳೀಧರ ಹಾಲಪ್ಪ ನುಡಿದರುಮಾಜಿ ಸೈನಿಕ ರಾಜೇಂದ್ರ ಮಾತನಾಡಿ, ಜಿಲ್ಲೆಯ ಅಭಿವೃದ್ದಿಯ ಜೊತೆಗೆ ರಕ್ಷಣೆಯೂ ಅಗತ್ಯವಾಗಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲಿ ಸೈನ್ಯ ಸೇರಲು ಬಯಸುವ ಯುವಜನರಿಗೆ ತರಬೇತಿ ನೀಡಲು ಕೇಂದ್ರವೊಂದನ್ನು ಆರಂಭಿಸಬೇಕೆಂದು ಸಲಹೆ ನೀಡಿದರು.

ಸಮಾಜ ಸೇವಕರಾದ ಡಾ.ನಾಗೇಂದ್ರ ಮಾತನಾಡಿ, ಬೇರೆ ಜಿಲ್ಲಾ ಕೇಂದ್ರಗಳಿಗೆ ಹೊಲಿಕೆ ಮಾಡಿದರೆ ತುಮಕೂರು ನಗರದ ಬೆಳೆವಣಿಗೆ ವ್ಯವಸ್ಥಿತವಾಗಿಲ್ಲ. ಕಿರಿದಾದ ರಸ್ತೆ, ಪಾರ್ಕಿಂಗ್‌ಗೆ ಸೂಕ್ತ ಸ್ಥಳಗಳಿಲ್ಲ.ನಗರದ ವ್ಯವಸ್ಥಿತ ಬೆಳವಣಿಗೆ ಸಿಟಿ ಪ್ಲಾನಿಂಗ್ ಅಗತ್ಯ ಇದರ ಜೊತೆಗೆ,ಬೆಂಗಳೂರಿಗೆ ಹತ್ತಿರ ಇರುವ ತುಮಕೂರು ಜಿಲ್ಲೆಗೆ ಸಾಫ್ಟವೇರ ಕಂಪನಿಗಳನ್ನು ತಂದರೆ ನಗರದ ಅಭಿವೃದ್ದಿಗೆ ಪೂರಕವಾಗಲಿದೆ,ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕೆಂದರು.ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ತುಮಕೂರು ಜಿಲ್ಲೆ ಕಲಾವಿದರ ತವರೂರು, ಬಹುದಿನಗಳಿಂದ ತುಮಕೂರು ಜಿಲ್ಲೆಗೆ ಒಂದು ರಂಗಾಯಣ ಬೇಕೆಂಬುದು ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಮಾತುಕತೆ ನಡೆಸಬೇಕೆಂದರು.ಸಮಾಜ ಸೇವಕ ನಟರಾಜಶೆಟ್ಟಿ ಮಾತನಾಡಿ, ತುಮಕೂರು ನಗರ ಬೆಳೆಯುತ್ತಿದೆ.ಆದರೆ ಸ್ಮಶಾನದ ಕೊರತೆ ಇದೆ. ಈಗಿರುವ ಸ್ಮಶಾನ ಕಿರಿದಾಗಿದೆ. ಎರಡು ವಿದ್ಯುತ್ ಚಿತಾಗಾರಗಳಿವೆ. ಶವ ಸಂಸ್ಕಾರದ ಸಂದರ್ಭದಲ್ಲಿ ಏಳುವ ಹೊಗೆ ನಾಗರಿಕರ ಮನೆಗಳಿಗೆ ನುಗ್ಗಲಿದೆ. ಹಾಗಾಗಿ ಬೆಳೆಯುತ್ತಿರುವ ನಗರಕ್ಕೆ ಅನುಗುಣವಾಗಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಹೊಸ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಸೆಟ್‌ಬ್ಯಾಕ್ ಬಿಟ್ಟು ಮನೆ ಕಟ್ಟುವಂತೆ ಪಾಲಿಕೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು. ಕಲಾವಿದರಾದ ಶೀಲಾ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕಲಾವಿದರದ ಸಂಖ್ಯೆ ಹೆಚ್ಚಿದೆ. ಕಲೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕಲಾವಿದರೆ ಮಾಸಿಕ 5 ಸಾವಿರ ಮಾಶಾಸನ ನೀಡುವುದು. ಕಲಾವಿದರ ಮಕ್ಕಳಿಗೆ ಉಚಿತ ಶಿಕ್ಷಣ ಇನ್ನಿತರ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.ಹೊಟೇಲ್ ಉದ್ಯಮಿ ಉಮೇಶ್ ಮಾತನಾಡಿ, ತುಮಕೂರು ಜಿಲ್ಲೆ ದಾಸೋಹಕ್ಕೆ ಹೆಸರು ವಾಸಿ,ಯುವಜನರು ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಹೊಟೇಲ್ ಉದ್ಯಮ ಪ್ರಾರಂಭಿಸಲು ಮುಂದಾದರೆ ಅಗತ್ಯ ತರಬೇತಿ ನೀಡಲು ಸಿದ್ದ ಎಂದರು.ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರೇವಣ್ಣ ಸಿದ್ದಯ್ಯ ಮಾತನಾಡಿ, ಜಿಲ್ಲೆಯಲ್ಲಿ ತರಕಾರಿ, ಹಣ್ಣಗಳನ್ನು ಬೆಳೆಯುವುದು ಹೆಚ್ಚಾಗಿದೆ. ಹಾಗಾಗಿ ಶೀಥಲೀಕರಣ ಘಟಕದ ಅಗತ್ಯವಿದೆ.ಅಲ್ಲದೆ ತುಮಕೂರು ನಗರ ರಾಜ್ಯದ 18 ಜಿಲ್ಲೆಗಳಲ್ಲಿ ರಹದಾರಿ ಕಲ್ಪಿಸುವುದರಿಂದ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡುವಂತೆ ಸಲಹೆ ನೀಡಿದರು.ಎತ್ತಿನಹೊಳೆ, ಹೇಮಾವತಿ ನೀರಿನ ಸದ್ಬಳಕೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ,ಪ್ರವಾಸೋದ್ಯಮ ಅಭಿವೃದ್ದಿ, ಕ್ರೀಡಾಪಟುಗಳಿಗೆ ಫಿಜಿಯೋಥರಪಿ ಸೆಂಟರ್, ಮಧುಗಿರಿಗೆ ಮಹಿಳಾ ಪದವಿ ಕಾಲೇಜು, ಮೈದನಹಳ್ಳಿಯ ಕೃಷ್ಣಮೃಗ ಸಂರಕ್ಷಣೆ,ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ತಿಪಟೂರು ಜಿಲ್ಲಾ ಕೇಂದ್ರ ಸೇರಿದಂತೆ ಹಲವು ವಿಷಯಗಳ ಕುರಿತು ಸಲಹೆ ಸೂಚನೆಗಳು ಸಾರ್ವಜನಿಕರಿಂದ ಬಂದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ರಿಜಿಸ್ಟಾರ್ ನಾಹಿದ್ ಜಮ್ ಜಮ್ ವಹಿಸಿದ್ದರು.ತುಮಕೂರು ವಿವಿ ಸಮಾಜ ಕಾರ್ಯ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಪರುಶುರಾಮ್,ಮುದ್ದೇನಹಳ್ಳಿ ಸತ್ಯ ಸಾಯಿ ಸೇವಾ ಟ್ರಸ್ಟ್ನ ಕಲ್ಪನಾ, ಯೋಗ ಗುರುಗಳಾದ ಆನಂತಗುರೂಜಿ, ಅರಿವಿನ ಮನೆಯ ಶಶಿಧರ್, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಮಾಜಿ ಶಾಸಕ ಗಂಗಹನುಮಯ್ಯ ಸೇರಿದಂತೆ ಹಲವರು ಪಾಲ್ಗೊಂಡು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.