ಕುಣಿಗಲ್ : ಸದ್ಯದಲ್ಲೇ ಕುಣಿಗಲ್ ನಲ್ಲಿ 100 ಹಾಸಿಗೆಯುಳ್ಳ ತಾಯಿ ಮಕ್ಕಳ ಆಸ್ಪತ್ರೆ ಲೋಕಾರ್ಪಣೆಯಾಗಲಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಬಗೆಹರಿದಿದ್ದು, ಎಲ್ಲರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆಸ್ಪತ್ರೆಯಲ್ಲಿ ತಾಯಿ- ಮಗು ಪ್ರಸವ ಸಂದರ್ಭದಲ್ಲಿ ಮೃತಪಟ್ಟ ಯಾವುದೇ ಉದಾಹರಣೆಗಳು ಇಲ್ಲ ಎಂಬುದು ಸಂತಸದ ವಿಚಾರ ಎಂದರು.
ಆಸ್ಪತ್ರೆಯಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳು ದೊರಕುವಂತೆ ಕ್ರಮವಹಿಸಲಾಗುತ್ತದೆ, ನಾನು ಪ್ರತಿದಿನ ಆಸ್ಪತ್ರೆಗೆ ಬರುವ ರೋಗಿಗಳ ಮಾಹಿತಿ ಪಡೆದು ಅವರಿಗೆ ಔಷಧಿ, ಚಿಕಿತ್ಸೆ ಹಾಗೂ ಆರ್ಥಿಕ ವ್ಯವಸ್ಥೆ ದೊರಕಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ, ಅದಕ್ಕಾಗಿ ವಿಶೇಷ ತಂಡ ರಚಿಸಿಕೊಂಡಿದ್ದೇನೆ ಎಂದರು.ಗ್ರಾಮೀಣ ಭಾಗದ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ಇದೆ, ಅದಕ್ಕಾಗಿ ಸರ್ಕಾರದಿಂದ ವೈದ್ಯರನ್ನು ಕರೆಸಿದ್ದು, ಈಗ ಆ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಸಂಚಾರಿ ಆಸ್ಪತ್ರೆಯನ್ನು ಪ್ರಾರಂಭಿಸಿ ಪ್ರತಿ ಹಳ್ಳಿಯಲ್ಲೂ ಕೂಡ ಚಿಕಿತ್ಸೆ ನೀಡುವಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿ, ಗ್ರಾಮ ಪಂಚಾಯಿತಿಯಲ್ಲಿ ನರೇಗಾ ವಿಚಾರದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಸಂತರಿಗೆ ಸೂಚಿಸಿದರು.
ಸಕ್ಕರೆ ಕಾಯಿಲೆಗೆ ತಾಲೂಕಿನಲ್ಲಿ 38 ಸಾವಿರ ಜನ ಚಿಕಿತ್ಸೆ ಪಡೆಯುತ್ತಿದ್ದು, ಕಾಯಿಲೆ ನಿಯಂತ್ರಿಸಲು ಉಚಿತ ತಪಾಸಣೆಗಳನ್ನು ಹೆಚ್ಚು ಮಾಡುವ ಯೋಜನೆಯನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.