ಕನ್ನಡಪ್ರಭ ವಾರ್ತೆ ಮಂಡ್ಯ
ಸಂತೆಕಲಸಗೆರೆ ಗ್ರಾಮದ ಶ್ರೀಭೂಮಿಸಿದ್ದೆಶ್ವರಸ್ವಾಮಿಯ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಶ್ರೀಭೂಮಿಸಿದ್ದೆಶ್ವರಸ್ವಾಮಿ ಮನೆದೇವರ ಭಕ್ತರು ಪುರಾತನ ಕಾಲದಿಂದಲೂ ಕುರಿ, ಕೋಳಿಗಳನ್ನು ಬಲಿಕೊಟ್ಟು ಅಟ್ಟುಣ್ಣುವ ಜಾತ್ರೆ ಮಾಡುವುದು ವಾಡಿಕೆ. ಇದು ತಲೆಮಾರುಗಳಿಂದ ನಡೆದು ಬಂದಿದೆ.
ಹಿಂದಿನ ತಲೆಮಾರಿನ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಅರಣ್ಯ ಪ್ರದೇಶದಲ್ಲಿ ಅವರಿಗೆ ಇಷ್ಟ ಬಂದ ಕಡೆ ಅಡುಗೆ ತಯಾರು ಮಾಡುತ್ತಾರೆ. ಮಧ್ಯಾಹ್ನ ೨ ನಂತರ ಊಟಕ್ಕೆ ಬರುವ ನೆಂಟರಿಸ್ಟರಿಗೆ ಎಲೆಗಲ ಮೇಲೆ ಊಟ ಬಡಿಸುವರು. ಊಟ ಮಾಡಿದ ಬಳಿಕ ಎಲೆಗಳನ್ನು ಎತ್ತದೆ ಹಾಗೆಯೇ ಬಿಟ್ಟು ಸಂಜೆ ಸುಮಾರು ಏಳು ಗಂಟೆ ವೇಳೆಗೆ ಅಲ್ಲಿಂದ ಜಾಗ ಮಾಡುವುದು ಸಂಪ್ರದಾಯ. ರಾತ್ರಿಯಾದ ಮೇಲೆ ಯಾರೊಬ್ಬರೂ ಆ ಜಾಗದಲ್ಲಿರುವಂತಿಲ್ಲ. ಇಂದಿಗೂ ಅದನ್ನೇ ಅನುಸರಿಸಿಕೊಂಡು ಬರಲಾಗುತ್ತಿದೆ. ಮಾರನೇ ದಿನ ಬೆಳಗ್ಗೆ ಬಂದು ನೋಡಿದರೆ ಊಟ ಮಾಡಿದ ಎಲೆಗಳು ಅಲ್ಲಿ ಇರುವುದಿಲ್ಲ. ಅವು ಗಾಳಿಗೆ ತೂರಿ ಹೋಗಿರುತ್ತವೋ ಅಥವಾ ನಿಜವಾಗಿಯೂ ಮಾಯಾವಾಗಿರುತ್ತವೋ ತಿಳಿಯದಾಗಿದೆ.ಯುಗಾದಿ ಹಬ್ಬದ ಮಾರನೇ ದಿನ ಗ್ರಾಮದ ನಡಕೇರಪ್ಪನ ಗುಡಿಯಲ್ಲಿ ಹರಕೆ ಕಟ್ಟಿಕೊಂಡು ಬಂದ ಭಕ್ತರಿಗೆ ಬಾಯಿಬೀಗ ಚುಚ್ಚುತ್ತಾರೆ. ತಮಟೆ, ಕಹಳೆ, ಛತ್ರಿ ಸಮೇತವಾಗಿ ಪತ್ತಿನ ಸೇವೆ ಮಾಡಿ ಭಕ್ತ ಸಮೂಹವು ಸಾಲಾಗಿ ಹೆಬ್ಬಾಗಿಲು ದಾಟಿ ಶ್ರೀ ಭೂಮಿಸಿದ್ದೇಶ್ವರ ದೇವಾಲಯ ತಲುಪುತ್ತಾರೆ. ಮರು ದಿನ ದೇವಾಲಯದ ಅಂಗಳದಲ್ಲಿ ಏಳೂರಿನ ಜನರು ಸೇರಿ ನಡೆಸುವ ಜಾತ್ರೆಯೇ ‘ಶ್ರೀ ಭೂಮಿಸಿದ್ದೇಶ್ವರ ಜಾತ್ರೆ’ ಅಥವಾ ‘ಅಟ್ಟುಣ್ಣುವ ಜಾತ್ರೆ’ ಎಂದು ಜನಜನಿತವಾಗಿದೆ.
ತಲೆಎತ್ತಿದ ಶಿಲಾಮಯ ದೇಗುಲ:
ಈ ಪದ್ದತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇದೀಗ ಶ್ರೀಭೂಮಿಸಿದ್ದೇಶ್ವರ ದೇವಸ್ಥಾನ ಸಮಿತಿಯು ಸುಮಾರು ೬-೮ ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾದ ದೇವಾಲಯ ನಿರ್ಮಾಣಗೊಳಿಸುತ್ತಿದ್ದು, ಗೋಪುರ, ಗರ್ಭಗುಡಿ, ವಿಶಾಲ ಪ್ರಾಂಗಣ, ಕಲ್ಲಿನ ಕಂಬಗಳು ಶಿಲ್ಪಕಲೆಯನ್ನು ಬಿಂಬಿಸುವಂತೆ ಆಂಧ್ರಪ್ರದೇಶದ ಪ್ರಭಾಕರ್ ಕುಪ್ಪಂ ಎಂಬುವರು ನಿರ್ಮಿಸುತ್ತಿದ್ದಾರೆ. ಸಮಿತಿಯು ೨೪ ಸದಸ್ಯರನ್ನು ಹೊಂದಿದ್ದು, ಸಂತೆಕಸಲಗೆರೆ, ಕೊತ್ತತ್ತಿ, ಮಂಗಲ, ಕಾರಸವಾಡಿ, ಮೊತ್ತಹಳ್ಳಿ, ಯತ್ತಗದಹಳ್ಳಿ, ಎ.ಹುಲ್ಲುಕೆರೆ, ಹನಿಯಂಬಾಡಿ, ಬೇವಿನಹಳ್ಳಿ, ದೇವಿಪುರ ಸೇರಿದಂತೆ ಒಟ್ಟು ಹತ್ತು ಗ್ರಾಮಗಳನ್ನು ಒಳಗೊಂಡಿದೆ.೨೬ ಎಕರೆ ೨೦ ಕುಂಟೆ ವಿಸ್ತಾರ ಜಾಗ ಹೊಂದಿರುವ ಈ ದೇವಾಲಯಕ್ಕೆ ಹೊರ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ. ಹಾಗಾಗಿ ಇಲ್ಲಿ ಅರಕೆರೆ ಹೋಬಳಿ ಬನ್ನಹಳ್ಳಿಯ ಜವರೇಗೌಡರು ದೇವಸ್ಥಾನದ ಸುತ್ತಲೂ ಆಲದ ಮರಗಳನ್ನು ನೆಟ್ಟು ೧೫ ವರ್ಷಗಳ ಕಾಲ ಪೋಷಿಸಿದ್ದರಿಂದ ಇಲ್ಲಿ ನರಳಿಗೆ ಬರವಿಲ್ಲ.
ಅಭಿವೃದ್ಧಿ ಕಾರ್ಯಕೈಗೊಂಡ ಸಮಿತಿಗೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯ ೨೦ ಲಕ್ಷ ರು. ಮಧು ಜಿ.ಮಾದೇಗೌಡರು ೧೦ ಲಕ್ಷ ರು. ಹಣವನ್ನು ತಮ್ಮ ಶಾಸಕತ್ವದ ಅನುದಾನವನ್ನು ಒದಗಿಸಿದ್ದು, ಅದರಂತೆ ಅನೇಕ ಜನಪ್ರತಿನಿಧಿಗಳು, ಭಕ್ತಾದಿ ಮುಖಂಡರು ಸೇರಿದಂತೆ ಜನಸಾಮಾನ್ಯರೂ ಯಥಾಶಕ್ತಿ ಧನಸಹಾಯ ಮಾಡಿದ್ದರಿಂದ ಸಮಿತಿಯು ೨೦೦೩ರಲ್ಲಿ ಸಮುದಾಯ ಭವನ, ೨೦೧೨ರಲ್ಲಿ ಹೊಸ ಸಮುದಾಯ ಭವನ ಮತ್ತು ಮಿನಿ ಸಮುದಾಯ ಭವನಗಳೂ ನಿರ್ಮಾಣಗೊಳಿಸಿದೆ. ಪರಿಣಾಮ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ವಿವಾಹ, ನಾಮಕರಣ, ಬೀಗರ ಔತಣ, ದೇವರ ಕಾರ್ಯ ಮುಂತಾದವನ್ನು ಮಾಡಲು ಅನುಕೂಲ ಕಲ್ಪಿಸಲಾಗಿದೆ.