ಜೆಡಿಎಸ್ ಹೇಳಿಕೆಗೆ ತಿರುಗೇಟು । ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ
ಕನ್ನಡಪ್ರಭ ವಾರ್ತೆ ಹಾಸನಎಲುಬು ಇಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಮಾತನಾಡುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಜನತೆ ಗಮನಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ಕೊಡುವುದು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರೋಕ್ಷವಾಗಿ ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ನಗರದ ಮಹಾವೀರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಕೆಲ ಸಮಯ ಮತಯಾಚನೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಅನುಕೂಲಕರವಾದ ವಾತಾವರಣ ಇದ್ದು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸಿದ್ದು, ಈ ಚುನಾವಣೆಯಲ್ಲಿ ಖಂಡಿತ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಅಜಾಮರವಾಗಿವೆ. ಪ್ರಜಾಪ್ರಭುತ್ವ ಎಷ್ಟು ದಿನ ಇರುತ್ತದೆಯೋ ಅಷ್ಟು ದಿನ ಈ ಗ್ಯಾರಂಟಿಗಳು ಇದ್ದೇ ಇರುತ್ತವೆ. ಮತ್ತೆ ಐದು ವರ್ಷ ಕಾಂಗ್ರೆಸ್ ಇರುತ್ತದೆ. ಹಾಗೆಯೇ ಗ್ಯಾರಂಟಿಗಳು ಕೂಡ ಮುಂದುವರೆಯುತ್ತವೆ. ಕೇಂದ್ರ ಸರ್ಕಾರದಿಂದ ೨೫ ಗ್ಯಾರಂಟಿಗಳು ಇನ್ನು ಹೆಚ್ಚು ಬರುತ್ತವೆ. ನೂರಕ್ಕೆ ನೂರು ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ಗೆ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೆ ಕಳೆದ ಚುನಾವಣೆ ಎದುರಿಸಿ ಈಗ ಅವರನ್ನೇ ಬಯ್ಯುತ್ತಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಇವತ್ತು ಏಕವಚನದಲ್ಲಿ ಸಿದ್ದರಾಮಯ್ಯ ಬಗ್ಗೆ ಬಯ್ಯುತ್ತಿದ್ದಾರೆ. ಎಲ್ಲರೂ ಸೂಕ್ಷ್ಮವಾಗಿ ವೀಕ್ಷಣೆ ಮಾಡುತ್ತಿದ್ದಾರೆ. ಮಳೆ ಬರಲಿಲ್ಲ ಎಂದು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಜೆಡಿಎಸ್ ನಾಯಕರಿಗೆ ಮೊನ್ನೆ ಯಾರು ಹೊಳೆನರಸೀಪುರಕ್ಕೆ ಕಾಲಿಟ್ಟಾಗ ಮಳೆ ಬಂದಿರುವುದು ಎಂದು ತಿಳಿದುಕೊಳ್ಳಲಿ. ಅವರು ಏನೇ ಮಾತನಾಡಿದರೂ ನಾವು ಹೆಚ್ಚು ಗಮನ ಕೊಡಬಾರದು’ ಎಂದು ಹೇಳಿದರು.ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಆನಂದ್ ಕುಮಾರ್, ನಿತೀನ್ ಪಟೇಲ್ ಇತರರು ಉಪಸ್ಥಿತರಿದ್ದರು.
ಹಾಸನದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದ ನಂತರ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮತಯಾಚನೆ ಮಾಡಿದರು.