ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮದಿಂದ ರಥೋತ್ಸವ, ಓಕುಳಿ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನಾ ಕ್ಷೇತ್ರ ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಗುರುವಾರ ರಥೋತ್ಸವ ಸಂಭ್ರಮ ಸಡಗರದಿಂದ ಓಕುಳಿಯೊಂದಿಗೆ ನಡೆಯಿತು.
ನಸುಕಿನ ಜಾವ ಶ್ರೀ ದೇವರಿಗೆ ಪ್ರಾತಃಕಾಲದ ಪೂಜೆ ಹಾಗೂ ಧನು ಪೂಜೆಯೊಂದಿಗೆ ನವಕ ಪ್ರಧಾನ ಕಲಶಾಭಿಷೇಕ ಪಂಚಾಮೃತ ಮಹಾ ಅಭಿಷೇಕ ಸಹಸ್ರನಾಮರ್ಚನೆ ಅಷ್ಟೋತ್ತರ ರಚನೆ ಹಾಗೂ ವಿಶೇಷವಾದ ಹರಿವಾಣ ನೈವೇದ್ಯ ಸಮರ್ಪಣೆಗೊಂಡು ಸರ್ವಾಭರಣ ಶ್ರೀ ಅನಂತಪದ್ಮನಾಭ ದೇವರಿಗೆ ಆರಾಟ ಉತ್ಸವದ ಮಧ್ಯಾಹ್ನದ ಮಹಾಪೂಜೆ ನಡೆಯಿತು. ಸುಮಾರು 16 ಭಕ್ತರಿಂದ ಶ್ರೀದೇವರಿಗೆ ತುಲಾಭಾರ ಸೇವೆ ಅರ್ಪಣೆಗೊಂಡಿತು. ಮಧ್ಯಾಹ್ನ ಶ್ರೀ ದೇವರ ವೈಭವದ ಬಲಿ ಹೊರಡು ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ದೇವರಿಗೆ ಉಡುಕೆ ಸುತ್ತು, ಚೆಂಡೆ ಸುತ್ತು ವೈಭವದಿಂದ ಅರ್ಪಣೆಗೊಂಡಿತು. ಆ ಬಳಿಕ ಶ್ರೀ ದೇವರು ರಥದ ಬಳಿ ಆಗಮಿಸಿ ವೈಭವದ ರಥಾರೋಹಣ ಕಾರ್ಯಕ್ರಮ ಆರಂಭಗೊಂಡಿತು.ಬಳಿಕ ರಾಜಾಂಗಣದಲ್ಲಿ ಭಕ್ತ ಜನರು ಗೋವಿಂದ ನಾಮಸ್ಮರಣೆಯೊಂದಿಗೆ ಶ್ರೀ ದೇವರ ರಥೋತ್ಸವವನ್ನು ಸಂಭ್ರಮದಿಂದ ಎಳೆದರು. ಆನಂತರ ಶ್ರೀ ದೇವರು ವಸಂತ ಮಂಟಪಕ್ಕೆ ಚಿತ್ತೈಸಿ ವಸಂತ ಮಂಟಪದಲ್ಲಿ ಮಹಾಪೂಜೆ ನಡೆದು ಶ್ರೀದೇವರಿಗೆ ಸಂಭ್ರಮದ ಓಕುಳಿ ಉತ್ಸವ ನಡೆಯಿತು.
ಈ ಸಂದರ್ಭ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ನರಸಿಂಹ ತಂತ್ರಿ, ಕೆ.ಮನೋಹರ ಭಟ್ , ಕೆ.ಬಾಲಕೃಷ್ಣ ಕಾರಂತ, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ್ ಹಾಗೂ ಮುಕ್ತೇಸರರಾದ ಭಾಸ್ಕರ ಕೆ, ಪ್ರಮುಖರಾದ ಕೆ ಕೃಷ್ಣರಾಜ ತಂತ್ರಿ, ಉದಯಕುಮಾರ್ ಕುಡುಪು, ಸುಜನ್ ದಾಸ್ ಕುಡುಪು ಅರವಿಂದ ತಂತ್ರಿ, ಪ್ರಕಾಶ್ ಭಟ್ ಕುಡುಪು, ರಾಘವೇಂದ್ರ ಕುಡುಪು, ವಾಸುದೇವ ರಾವ್, ಕುಡುಪು ವಿಜಯಕುಮಾರ್ ಕುಡುಪು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.