ಗದಗ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಇಡಿ ನಡೆಸಿದ ದಾಳಿಗೆ ಹೊರಗಿರುವ ವ್ಯಕ್ತಿಗಳು ಕಾರಣರಲ್ಲ, ಬದಲಾಗಿ ಕಾಂಗ್ರೆಸ್ಸಿನಲ್ಲಿಯೇ ಇರುವ ಒಂದು ಗುಂಪು ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದರು.
2013ರಲ್ಲಿ ಪರಮೇಶ್ವರರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರೇ, ಇದನ್ನು ಜನ ಮರೆತಿಲ್ಲ. ಈಗ ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು. ಈಗಾಗಲೇ ಕೆಲವು ದೂರುಗಳು ಬಂದಿರುವ ಆಧಾರದಲ್ಲಿಯೇ ತನಿಖೆ ನಡೆಯುತ್ತಿದೆ. ಯಾರು ದೂರು ನೀಡಿದ್ದಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಎಂದ ಅವರು, ಪರಮೇಶ್ವರ ಅವರಿಗೆ ತೊಂದರೆ ನೀಡುವ ಉದ್ದೇಶ ಇಲ್ಲ. ಆದರೆ ಕಾನೂನು ಉಲ್ಲಂಘನೆ ಮಾಡಿಕೊಂಡಿದ್ದರೆ ಕ್ರಮ ಕೈಗೊಳ್ಳುವುದು ಸಹಜ ಎಂದರು.
ಪರಮೇಶ್ವರ ಅವರು ಗೃಹಮಂತ್ರಿಯಾದರೂ ಅಥವಾ ಕಾಂಗ್ರೆಸ್ ನಾಯಕರಾದರೂ, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ತನಿಖೆಯು ನ್ಯಾಯೋಚಿತವಾಗಿ ನಡೆಯುತ್ತದೆ ಎಂದರು.