ಕನ್ನಡಪ್ರಭ ವಾರ್ತೆ ತರೀಕೆರೆ
2014ರಲ್ಲಿ ಅನಿರೀಕ್ಷಿತವಾಗಿ ಮುಚ್ಚಲ್ಪಟ್ಟಿದ್ದ ಈ ಶಾಲೆ ಪುನರಾರಂಭಕ್ಕಾಗಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಸಾಕಷ್ಟು ಪ್ರಯತ್ನಿಸಿದ್ದರು. ಆಗ ಪ್ರಥಮ ಬಾರಿಗೆ ಶಾಸಕರಾದ ಜಿ.ಎಚ್. ಶ್ರೀನಿವಾಸ್ ಸರ್ಕಾರಿ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಶಿಕ್ಷಕರ ಮನವಿ ಹಾಗೂ ಹಿರಿಯ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ 2014ರ ಜೂನ್ 1ರಂದು ಶಾಲೆ ಪುನರಾರಂಭಿಸಲು ಅಗತ್ಯ ಕ್ರಮಕ್ಕೆ ಸೂಚಿಸಿದರು. ಈ ನಿರ್ಧಾರ ಶಾಲೆ ಪುನರುಜ್ಜೀವನಕ್ಕೆ ಆಶಾಕಿರಣವಾಯಿತು ಎಂದು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಕುಮಾರ್ ತಿಳಿಸಿದ್ದಾರೆ.
ದೃಢ ಸಂಕಲ್ಪಃ ಅಂದಿನಿಂದ ಶಾಲೆಯ ಎಲ್ಲಾ ಶಿಕ್ಷಕರು ಶ್ರಮಿಸಿ ಅಭಿವೃದ್ಧಿಗೆ ಸಂಪೂರ್ಣವಾಗಿ ತೊಡಗಿಸಿ ಕೊಂಡು ಶಾಲೆಯೊಂದಿಗೆ ಕೇವಲ ವೃತ್ತಿಪರ ಸಂಬಂಧವಷ್ಟೇ ಅಲ್ಲದೆ, ಭಾವನಾತ್ಮಕವಾಗಿ ಬೆಸೆದುಕೊಂಡು ದೃಢ ಸಂಕಲ್ಪ ಮಾಡಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ಸುಮಾರು ₹3 ಲಕ್ಷಕ್ಕೂ ಹೆಚ್ಚಿನ ಮೊತ್ತ ವಿನಿಯೋಗಿಸಿರುವುದು ಬದ್ಧತೆ ಮತ್ತು ನಿಸ್ವಾರ್ಥ ಸೇವೆಗೆ ಅತ್ಯುತ್ತಮ ಉದಾಹರಣೆಯಾಗಿ ಎಲ್ಲರ ಕಣ್ಮುಂದೆ ಇದೆ.ಶಾಲೆಗೆ ಹೊಸ ರೂಪಃ ಶಾಲಾ ಆವರಣ ಹಾಗೂ ಕೊಠಡಿಗಳ ಗೋಡೆ ವಿಭಿನ್ನ ಹಾಗೂ ವಿಶಿಷ್ಟ ವರ್ಲಿ ಕಲಾಚಿತ್ರ ಗಳಿಂದ ಅಲಂಕರಿಸಿ ಮಕ್ಕಳಿಗೆ ಆಕರ್ಷಕ, ಸೃಜನಾತ್ಮಕ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಶತಮಾನಕ್ಕೂ ಹಳೆ ಕಟ್ಟಡ ವಾದರೂ, ಇಂದು ಶಾಲೆ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ, ಸುಸಜ್ಜಿತ ಹಾಗೂ ವಿಶಾಲ ತರಗತಿ ಕೊಠಡಿಗಳು, ಅನುಕೂಲಕರ ಪೀಠೋಪಕರಣ, ಸ್ಮಾರ್ಟ್ ಕ್ಲಾಸ್ ಮತ್ತು ಡಿಜಿಟಲ್ ತರಗತಿ, ಟೀಚ್ ನೆಕ್ಸ್ಟ್ ಸಂಸ್ಥೆ ಉಪಯುಕ್ತ ಶೈಕ್ಷಣಿಕ ಸಾಫ್ಟ್ವೇರ್ ಗಳು, ಅತ್ಯುತ್ತಮ ಪ್ರಯೋಗಾಲಯ, ವಿಶಾಲವಾದ ಆಟದ ಮೈದಾನ, ವಿಶಿಷ್ಟ ಕಲಾ ಸಂಯೋಜನೆಯೊಂದಿಗೆ ಸುಂದರ ರಂಗಮಂದಿರ, ಶುದ್ಧ ಕುಡಿ ನೀರಿನ ವ್ಯವಸ್ಥೆ, ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯ, ಅಡುಗೆ ಕೋಣೆ ಹಾಗೂ ಮಕ್ಕಳು ಆರಾಮವಾಗಿ ಕುಳಿತು ಊಟ ಮಾಡಲು ವಿಶಾಲ ಭೋಜನಾಲ. ಶಾಲೆಯಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ.
ಸ್ವಯಂ ಪ್ರೇರಿತ ದಾಖಲೆಃ ಶಾಲೆ ಶಿಕ್ಷಕರ ಮೇಲಿನ ಅಪಾರ ವಿಶ್ವಾಸದಿಂದ ಪೋಷಕರು ಸ್ವಯಂಪ್ರೇರಿತರಾಗಿ ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 160 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇನ್ನಷ್ಟು ಹೆಚ್ಚಾಗುವ ವಿಶ್ವಾಸ ವಿದೆ ಎನ್ನುತ್ತಾರೆ ಆನಂದ ಕುಮಾರ್.
ಹಿರಿಯ ವಿದ್ಯಾರ್ಥಿಗಳ ಸಹಕಾರಃ ತೀವ್ರ ಸ್ಪರ್ಧೆ ನಡುವೆಯೂ ಶಿಕ್ಷಕರ ಬದ್ಧತೆ, ಕಾರ್ಯಕ್ಷಮತೆ, ಗುಣಮಟ್ಟದ ಶಿಕ್ಷಣ ಹಾಗೂ ಈ ಶಾಲೆ ಉಳಿಸಲೇಬೇಕೆಂಬ ಹಿರಿಯ ವಿದ್ಯಾರ್ಥಿಗಳ ಹಂಬಲ ಮತ್ತು ಸಹಕಾರದಿಂದ ಲಕ್ಕವಳ್ಳಿ ಶಾಲೆ ಇಂದು ಉತ್ತಮ ಶಿಕ್ಷಣ ನೀಡುವ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಶಾಲೆ ಮುಂದೆ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಶಾಲೆಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಎಚ್.ಪಿ. ಮತ್ತು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸರವಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾರ್ತಿಕ್, ಮೋಹನ್ ಮತ್ತು ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-- ಕೋಟ್--
- ಪರಶುರಾಮಪ್ಪ ಎಚ್.ಎ. ಕ್ಷೇತ್ರ ಶಿಕ್ಷಣಾಧಿಕಾರಿ 2ಕೆಟಿಆರ್.ಕೆ.,1ಃ ಲಕ್ಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
2ಕೆಟಿಆರ್.ಕೆ.3ಃ ಪರಶುರಾಮಪ್ಪ ಎಚ್.ಎ.ಕ್ಷೇತ್ರ ಶಿಕ್ಷಣಾಧಿಕಾರಿ