ಕೊಪ್ಪಳ: ನಗರದ ಗವಿಮಠದ ಜಾತ್ರಾ ಆವರಣದಲ್ಲಿ ಶನಿವಾರ ಪೋಲಿಸ್ ಶ್ವಾನಗಳ ಸಾಹಸ ಪ್ರದರ್ಶನ ನಡೆಯಿತು.
ಕಿನ್ನಿ ಹೆಸರಿನ ಶ್ವಾನವು ಕಳ್ಳರನ್ನು ಪತ್ತೆ ಮಾಡುವ ಕಲೆ, ಬಿಂದು ಹೆಸರಿನ ಶ್ವಾನವು ಬಾಂಬ್ ಪತ್ತೆ ಮಾಡುವ ಕಲೆ, ತುಂಗಾ ಹೆಸರಿನ ಶ್ವಾನವು ಕಳೆದ ಹೋದ ವಸ್ತು ಹುಡುಕಿ ತರುವ ಕಲೆ ಹಾಗೂ ಸಿಂಧು ಹೆಸರಿನ ಶ್ವಾನವು ಆಕರ್ಷಕ ಪರೇಡ್ನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಕಾರ್ಯ ಮಾಡಿದವು. ಶ್ರೀಮಠದ ಜಾತ್ರಾ ಮೈದಾನದಲ್ಲಿ ಮೂಡಿಬಂದ ಈ ಶ್ವಾನಗಳ ಕಸರತ್ತು ಪ್ರದರ್ಶನ ನೋಡುಗರ ಗಮನ ಸೆಳೆದವು.
ಅಪರಾಧಗಳು ನಡೆದಾಗ ಅದನ್ನು ಪತ್ತೆ ಮಾಡುವ ಕೆಲಸ ಪೊಲೀಸರದ್ದು. ಪೊಲೀಸರೊಂದಿಗೆ ಅಪರಾಧ ತಡೆಯುವ ಕಾರ್ಯ ಮಾಡೋದು ಶ್ವಾನಗಳು. ಎಂಥ ಪ್ರಕರಣಗಳೇ ಇರಲಿ ಅವುಗಳನ್ನು ಪತ್ತೆ ಮಾಡುವ ಕೆಲಸವನ್ನು ಶ್ವಾನಗಳು ಮಾಡುತ್ತವೆ. ಆದರೆ ಶ್ವಾನಗಳ ಯಾವ ರೀತಿ ಅಪರಾಧಗಳನ್ನು ಪತ್ತೆ ಮಾಡುತ್ತವೆ ಎಂಬುದು ಜನರಿಗೆ ಗೊತ್ತಿರುವುದಿಲ್ಲ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕೊಪ್ಪಳದಲ್ಲಿ ಶನಿವಾಋ ಶ್ವಾನಗಳ ಪ್ರಾತ್ಯಕ್ಷಿಕೆ ನಡೆಯಿತು.ಕೊಪ್ಪಳದ ಗವಿಮಠ ಜಾತ್ರೆಯು ಕೇವಲ ತೇರು ಎಳೆದು, ದಾಸೋಹದಲ್ಲಿ ಊಟ ಮಾಡಿ ಹೋಗುವುದು ಮಾತ್ರವಲ್ಲ. ಇಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜಾತ್ರೆಯಾಗಿದೆ. ಇದೇ ಹಿನ್ನೆಲೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಶ್ವಾನಗಳ ಅಪರಾಧ ತಡೆಯುವ ಪ್ರಾತ್ಯಕ್ಷಿಕ ಪ್ರದರ್ಶಿಸಲಾಯಿತು. ಶ್ವಾನಗಳು ಅಪರಾಧ ತಡೆಯುವಲ್ಲಿ ಅವುಗಳ ಚಾಣಾಕ್ಷತನ, ಚಾಕಚಕ್ಯತೆ ಪ್ರದರ್ಶಿಸಿದವು.
ಪೊಲೀಸರು ಅಪರಾಧ ತಡೆಯುವಾಗ ಶ್ವಾನಗಳ ಹೇಗೆಲ್ಲ ಸಹಾಯ ಮಾಡುತ್ತವೆ. ಶ್ವಾನಗಳ ಕಾರ್ಯ ಏನು ಎಂಬುದನ್ನು ಜನರಿಗೆ ತಿಳಿಸಿದರು. ಇದು ಅಪರಾಧ ಮಾಡಿದವರಿಗೂ ಎಚ್ಚರಿಕೆ ನೀಡುವಂತಿತ್ತು. ಜಾತ್ರೆಯಲ್ಲಿಯ ಶ್ವಾನಗಳ ಕಾರ್ಯ ಪ್ರದರ್ಶನ ಗಮನ ಸೆಳೆಯಿತು.