ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಸಾಸಲು ಗ್ರಾಮದಲ್ಲಿ ಶಿವರಾತ್ರಿಯಂದು ಶ್ರೀ ಕ್ಷೇತ್ರ ಸಾಸಲು ಗ್ರಾಮಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಮಹಾ ಶಿವರಾತ್ರಿ ಉತ್ಸವ, ರುದ್ರಾಕ್ಷಿ ದೀಕ್ಷಾ ಕಾರ್ಯಕ್ರಮ ಹಾಗೂ ಜಾಗರಣೆ, ಶಾಲಾ ಮಕ್ಕಳ ಶ್ರೀ ಶಿವಕುಮಾರಸ್ವಾಮಿ ಚರಿತೆ ನಾಟಕ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂಗಳ ಪವಿತ್ರ ಹಬ್ಬದಲ್ಲಿ ಶಿವರಾತ್ರಿಯೂ ಒಂದಾಗಿದೆ. ಮಹಾಶರಣ ಭೈರವ ಮಹಾರಾಜರು ತಪೋಗೈದು ಇದೇ ಕ್ಷೇತ್ರದಿಂದ ಅವರು ಕೈಲಾಸಕ್ಕೆ ಪಯಣಿಸಿದ ದೈವಿಕ ಭೂಮಿ ಇದಾಗಿದೆ. ದಾಸೋಹಿ ಶರಣ ಭೈರವರಾಜರ ಪರಂಪರೆಯಾದ ಅನ್ನದಾಸೋಹವನ್ನು ಗ್ರಾಮಸ್ಥರು ಮುಂದುವರೆಸಿಕೊಂಡು ಹೋಗುತ್ತಿರುವುದು ಕ್ಷೇತ್ರದ ಮಹಾಸತ್ಕಾರ್ಯವಾಗಿದೆ. ಕ್ಷೇತ್ರದ ಕುರಿತು ಪಿಎಚ್ಡಿ ಅಧ್ಯಯನ ಮಾಡುವ ಆಶಯ ತಮ್ಮದಾಗಿದೆ ಎಂದರು.ಶಿವರಾತ್ರಿ ಶಿವ ಪಾರ್ವತಿ ವಿವಾಹದ ಶುಭದಿನವಾಗಿದೆ. ಬ್ರಹ್ಮ, ವಿಷ್ಣು ನಡುವೆ ಶ್ರೇಷ್ಠತೆ ಪ್ರಶ್ನೆ ಉದ್ಭವಿಸಿದಾಗ ಲಿಂಗರೂಪಿಯಾಗಿ ಶಿವ ಕಂಗೊಳಿಸಿದ ದಿನ ಕೂಡ ಆಗಿದೆ. ಸಮುದ್ರ ಮಂಥನದ ವೇಳೆ ವಿಷಾಪಾನ ಮಾಡಿದ ಶಿವನ ಕಂಠ ಹಿಡಿದು ಪಾರ್ವತಿ ಜಾಗರಣೆಗೈದ ರಾತ್ರಿ ಈ ಶಿವರಾತ್ರಿಯಾಗಿದೆ ಎಂದು ಶ್ರೀಗಳು ನುಡಿದರು.
ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ ಮಾತನಾಡಿ, ಶರಣರ ಬೀಡಾದ ಗ್ರಾಮದಲ್ಲಿ ರುದ್ರಾಕ್ಷಿ ದೀಕ್ಷಾ ಕಾರ್ಯಕ್ರಮ, ಮಕ್ಕಳಿಂದ ಸಿದ್ದಗಂಗಾಶ್ರೀ ಅವರ ನಾಟಕ ಏರ್ಪಡಿಸಿರುವುದು ಮಕ್ಕಳಲ್ಲಿ ಸಂಸ್ಕಾರ ಬೀಜಾಂಕುರ ಆಗುವಂತಿದೆ. ಇಂತಹ ಉತ್ಸವ ಕಾರ್ಯಕ್ರಮ ಹಂಪಿ ಉತ್ಸವದಂತೆ ನಡೆಯಲಿ. ತನ್ನ ಸಹಕಾರ ಸದಾ ಇದೆ ಎಂದು ಹುರಿದುಂಬಿಸಿದರು.ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶಿವಭಕ್ತರ ಮನಸೂರೆಗೊಳಿಸಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಯುವ ಘಟಕ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು, ತಾ. ಅಧ್ಯಕ್ಷ ಸುಜೇಂದ್ರಕುಮಾರ್, ಉದ್ಯಮಿ ಮೊಟ್ಟೆ ಮಂಜು, ಕರವೇ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ , ಸಾಸಲು ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.