ರಕ್ತದ ಒಂದು ಹನಿ ಇನ್ನೊಂದು ಜೀವಕ್ಕೆ ಸಂಜೀವಿನಿ

KannadaprabhaNewsNetwork | Published : Sep 23, 2024 1:25 AM

ಸಾರಾಂಶ

ವಿಜಯಪುರ ನಗರದ ಹುತಾತ್ಮ ಸರ್ಕಲ್‌ನಲ್ಲಿರುವ (ಮೀನಾಕ್ಷಿ ವೃತ್ತ) ನರ ಮನೋರೋಗ, ದುಶ್ಚಟ, ಲೈಂಗಿಕ ಸಮಸ್ಯೆಗಳ ನಿವಾರಣಾ ಕೇಂದ್ರ ಮನೋಲಯ ಆಸ್ಪತ್ರೆಯ ಸೊಸೈಟಿ ಹಾಗೂ ಬಿಎಲ್‌ಡಿಇ ಆಸ್ಪತ್ರೆ ಸಹಯೋಗದಲ್ಲಿ ಮನೋತ್ಸವ-7 ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಜನರಲ್‌ ಸರ್ಜನ್‌ ಡಾ.ವಿಶಾಲ ತಂಗಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಕ್ತದ ಒಂದು ಹನಿ ಇನ್ನೊಂದು ಜೀವಕ್ಕೆ ಸಂಜೀವಿನಿ. ರಕ್ತದಾನ ಅವಶ್ಯಕ ವ್ಯಕ್ತಿಗೆ ಹಾಗೂ ದಾನಿಯ ಆರೋಗ್ಯಕ್ಕೂ ಉತ್ತಮವಾಗಿದೆ ಎಂದು ಖ್ಯಾತ ಜನರಲ್‌ ಸರ್ಜನ್‌ ಡಾ.ವಿಶಾಲ ತಂಗಾ ಹೇಳಿದರು.

ನಗರದ ಹುತಾತ್ಮ ಸರ್ಕಲ್‌ನಲ್ಲಿರುವ (ಮೀನಾಕ್ಷಿ ವೃತ್ತ) ನರ ಮನೋರೋಗ, ದುಶ್ಚಟ, ಲೈಂಗಿಕ ಸಮಸ್ಯೆಗಳ ನಿವಾರಣಾ ಕೇಂದ್ರ ಮನೋಲಯ ಆಸ್ಪತ್ರೆಯ ಸೊಸೈಟಿ ಹಾಗೂ ಬಿಎಲ್‌ಡಿಇ ಆಸ್ಪತ್ರೆ ಸಹಯೋಗದಲ್ಲಿ ಮನೋತ್ಸವ-7 ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಪ್ರತಿ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇದರ ಬಗ್ಗೆ ಮಾಹಿತಿ ನೀಡಿ ಹೆಚ್ಚೆಚ್ಚು ಜನರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸಿದ್ದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯರನಾಳ ವಿರಕ್ತಮಠದ ಗುರುಸಂಗನ ಬಸವ ಮಹಾಸ್ವಾಮೀಜಿ ಮಾತನಾಡಿ, ದೈಹಿಕ ಸಾಮರ್ಥ್ಯದಂತೆ ಮಾನಸಿಕ ಸಮತೋಲನವೂ ಜೀವನಕ್ಕೆ ಅತ್ಯಗತ್ಯ. ನಿತ್ಯ ಜೀವನದಲ್ಲಿ ಮನಸ್ಥಿತಿಯನ್ನು ನಿಯಂತ್ರಣಗೊಳಿಸಿಕೊಂಡರೇ ನೆಮ್ಮದಿಯ ಜೀವನ ನಡೆಸಬಹುದು ಎಂದು ನುಡಿದರು.ಪ್ರಕಾಶ ಪಾಟೀಲ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಬಹುತೇಕ ಜನರು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಕಾರಣ ಕೆಲಸ ಒತ್ತಡ, ಸಂಬಂಧಗಳಲ್ಲಿ ಬಿನ್ನಾಭಿಪ್ರಾಯ ಹಾಗೂ ಅತೀ ಯೋಚನೆಗಳು ಮತ್ತು ಭಾವೋದ್ವೇಗ ಸಮಸ್ಯೆಗಳು ಕಾಣುತ್ತವೆ. ಇದೆಲ್ಲವನ್ನೂ ನಿಯಂತ್ರಿಸಲು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರಬೇಕು ಎಂದರು.ಡಾ.ಮನೋವಿಜಯ ಕಳಸಗೊಂಡ ಮಾತನಾಡಿ, ದೈಹಿಕ ಕಾಯಿಲೆಗಳಂತೆ ಮಾನಸಿಕ ಕಾಯಿಲೆಗಳು ಎಲ್ಲರಲ್ಲೂ ಸಾಮಾನ್ಯ. ಅದನ್ನು ಹೇಳಿಕೊಳ್ಳಲು, ಚಿಕಿತ್ಸೆ ಪಡೆಯಲು ಜನರು ಹಿಂದೆಟು ಹಾಕಬಾರದು. ಬದಲಾಗಿ ಮಾನಸಿಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಗಳು, ಔಷಧ, ಥೆರಪಿಗಳಿದ್ದು, ಸಾಧ್ಯವಾದಷ್ಟು ಜನರಿಗೆ ಮಾಹಿತಿ ನೀಡಿದರೇ ಮಾನಸಿಕ ಸ್ವಾಸ್ಥ್ಯ ಸಮಾಜ ರೂಪಿಸಲು ಸಾಧ್ಯ ಎಂದು ವಿವರಿಸಿದರು.

ಶಿಬಿರದಲ್ಲಿ 50ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಮನೋಲಯ ಆಸ್ಪತ್ರೆಯು ನಡೆದು ಬಂದ ಹಾದಿಯ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಡಾ.ವಿಶಾಲ ತಂಗಾ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಮನೋಲಯ ಸೊಸೈಟಿ ಕಾರ್ಯದರ್ಶಿ ಬಿ.ಎಸ್.ಕಳಸಗೊಂಡ, ಯರನಾಳ ರೇವಣಸಿದ್ದೇಶ್ವರ ದೇವಾಲಯದ ಧರ್ಮದರ್ಶಿ ಶಂಕರಗೌಡ ಪಾಟೀಲ, ಮನೋಲಯ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ನಮ್ಮ ಆಚಾರ್ಯರು ಗೃಹಸ್ಥರಿಗೆ 4 ವಿವಿಧ ದಾನಗಳ ಬಗ್ಗೆ ಪುರಾತನ ಕಾಲದಲ್ಲಿಯೇ ಹೇಳಿದ್ದಾರೆ. ಆಹಾರ, ಔಷಧ, ಶಾಸ್ತ್ರ, ಅಭಯಗಳೆಂಬ 4 ಶ್ರೇಷ್ಠ ದಾನಗಳಿವೆ. ಈ ಎಲ್ಲ ದಾನಗಳೂ ಸರ್ವಶ್ರೇಷ್ಠವಾಗಿದ್ದು, ಔಷಧ ದಾನದಲ್ಲಿಯೇ ರಕ್ತದಾನ ಬರುತ್ತಿದೆ. ಹೀಗಾಗಿ ರಕ್ತದಾನ ಇದೊಂದು ಪುಣ್ಯದಾನಗಳಲ್ಲಿ ಒಂದಾಗಿದ್ದು, ಎಲ್ಲರೂ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸುವಂತ ಪುಣ್ಯದ ಕೆಲಸ ಮಾಡಬೇಕು.

-ಡಾ.ವಿಶಾಲ ತಂಗಾ,

ಖ್ಯಾತ ಜನರಲ್‌ ಸರ್ಜನ್‌.

22BIJ05

Share this article