ಅಜೀಜಅಹ್ಮದ ಬಳಗಾನೂರ
ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿರುವ ದೇಶದ ಪ್ರಥಮ "ಗ್ರೀನ್ ಮೊಬಿಲಿಟಿ ಕಾರಿಡಾರ್ " (ಹಸಿರು ಸಂಚಾರಿ ಪಥ) ಉದ್ಘಾಟನೆಗೊಂಡ ನಾಲ್ಕೇ ವರ್ಷಗಳಲ್ಲಿ ಸಂಪೂರ್ಣ ಹಾಳಾಗಿದೆ.
ಕೋಂಟ್ಯತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಪಥವೀಗ ಗಿಡ-ಗಂಟಿಗಳ ಸಾಮ್ರಾಜ್ಯವಾಗಿದ್ದು, ವಾಯುವಿಹಾರಿಗಳು ಅತ್ತ ಕಾಲಿಡುತ್ತಿಲ್ಲ.ಇಲ್ಲಿನ ಉಣಕಲ್ಲ ಕೆರೆಯಿಂದ ಗಬ್ಬೂರು ಕ್ರಾಸ್ ವರೆಗೂ 11 ಕಿಮೀ ರಾಜಕಾಲುವೆ ಹರಿಯುತ್ತದೆ. ಮಳೆಗಾಲದಲ್ಲಿ 18 ಕಡೆ ಪ್ರವಾಹ ಉಂಟಾಗಿ ರಾಜಕಾಲುವೆ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಇದನ್ನು ತಡೆಯಲು ರಾಜಕಾಲುವೆ ಅಭಿವೃದ್ಧಿಗೊಳಿಸಿ ಸುಂದರ ವಾಯುವಿಹಾರಿಗಳ ತಾಣ ಮಾಡುವ ಉದ್ದೇಶದಿಂದ ₹130 ಕೋಟಿ ವೆಚ್ಚದಲ್ಲಿ ದೇಶದಲ್ಲೇ ಮೊದಲ ಬಾರಿಗೆ "ಹಸಿರು ಸಂಚಾರಿ ಪಥ " ನಿರ್ಮಿಸಲು ಉದ್ದೇಶಿಸಿ ಸ್ಮಾರ್ಟ್ಸಿಟಿ ಯೋಜನೆಯಡಿ 2020ರಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಯಿತು.
ರಾಜಕಾಲುವೆ ಅಭಿವೃದ್ಧಿ ಪಡಿಸುವುದರೊಂದಿಗೆ ನಾಲಾ ಪಕ್ಕದಲ್ಲಿಯೇ 2.5 ಮೀಟರ್ ಅಗಲದ ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗಿದೆ. ಜತೆಗೆ ವಾಯುವಿಹಾರಿಗಳ ಅನುಕೂಲಕ್ಕಾಗಿ ನೂರಾರು ಆಸನ, ಸಾವಿರಾರು ಎಲ್ಇಡಿ ವಿದ್ಯುತ್ ಬಲ್ಬ್ ಅಳವಡಿಸಲಾಗಿದೆ. ನಾಲ್ಕೈದು ಕಡೆ ಕಿರು ಉದ್ಯಾನ ನಿರ್ಮಿಸಲಾಗಿದೆ.
ಉಣಕಲ್ಲನಿಂದ ಲಿಂಗರಾಜ ನಗರದಲ್ಲಿ ಮೊದಲ ಹಂತದಲ್ಲಿ ನಿರ್ಮಿಸಿರುವ ಗ್ರೀನ್ ಮೊಬಿಲಿಟಿ ಕಾರಿಡಾರ್ ಸಂಪೂರ್ಣ ಹಾಳಾಗಿದೆ. ಉಣಕಲ್ಲಿನ ಆರಂಭದಲ್ಲಿ 50 ಮೀಟರ್ನಷ್ಟು ಮಾತ್ರ ನಡಿಗೆ ಪಥ ಶುಚಿಯಾಗಿದೆ. ಮುಂದೆ ಹೋದಂತೆ ಅದ್ವಾನ ಕಣ್ಣಿಗೆ ಕಾಣುತ್ತದೆ. ನಡಿಗೆ ಪಥದಲ್ಲಿ ಎಲ್ಲೆಂದರಲ್ಲಿ ಗಿಡ-ಗಂಟಿ ಬೆಳೆದು, ರಸ್ತೆಯುದ್ದಕ್ಕೂ ಬಾಗಿ ವಾಯುವಿಹಾರಿಗಳು ಸಂಚರಿಸಲು ಆಗದಂತಾಗಿದೆ.
ಶ್ರೀನಾಥ ಕಲ್ಲೂರ, ವಾಯುವಿಹಾರಿ