ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಆಲತ್ತೂರು ಬಳಿ ನೀಲಗಿರಿ ಪ್ಲಾಂಟೇಶನ್ನ ದನದ ದಾರಿ ಬಳಿ ಕರಡಿ ಅಡ್ಡಾಡಿಕೊಂಡು ಇರುವ ಮಾಹಿತಿ ಅರಿತ ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಸ್ಥಳಕ್ಕೆ ತೆರಳಿ ಮೊದಲಿಗೆ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಕರೆಯಿಸಿ ವೈದ್ಯರ ನೆರವಿಲ್ಲದೆ ಹಾಗೂ ಕರಡಿಗೆ ಅರವಳಿಕೆ ಚುಚ್ಚು ಮದ್ದು ನೀಡದೆ ಕರಡಿಗೆ ಬಲೆಯನ್ನು ಹಾಕಿ ಹಿಡಿದು ಸಿಬ್ಬಂದಿ ಸಾಹಸ ಮೆರೆದಿದ್ದಾರೆ.ಬಲೆಯ ಮೂಲಕವೇ ಸೆರೆ ಹಿಡಿದ ಕರಡಿಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವಲಯಕ್ಕೆ ಬಿಡಲಾಗಿದೆ ಎಂದು ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.