ದೇಗುಲದ ಪ್ರಧಾನ ಬಾವುಟವನ್ನು ಶಾಸಕ ಕೆ.ಎಸ್. ಆನಂದ್ ರೂ5.5ಲಕ್ಷಕ್ಕೆ ಪಡೆದು ಪ್ರಥಮ ಪೂಜೆ ಸಲ್ಲಿಕೆ
ಗಿರಿಶಿಖರಗಳ ತಪ್ಪಲಿನಲ್ಲಿ ನೆಲೆಸಿರುವ 800 ವರ್ಷಗಳ ಇತಿಹಾಸದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಶ್ರೀ ಲಕ್ಷ್ಮಿರಂಗ ನಾಥ ಸ್ವಾಮಿ ಮಹಾ ಬ್ರಹ್ಮರಥೋತ್ಸವ ಭಾನುವಾರ ಮಧ್ಯಾಹ್ನ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಶುಕ್ರವಾರ ಹಾಗೂ ಶನಿವಾರ ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಭಾನುವಾರ ದೇವಾಲಯದ ಮೂಲ ಮೂರ್ತಿ ಹೂವು ಮತ್ತು ಆಭರಣಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಶ್ರೀದೇವಿ ಭೂದೇವಿ ಸಮೇತ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ರತ್ನಾಭರಣ, ಗಂಧ ಪುಷ್ಪಗಳೊಂದಿಗೆ ರಥಾರೋಹಣಕ್ಕೆ ಮಂಟಪಕ್ಕೆ ಕರೆ ತರಲಾಯಿತು. ರಥೋತ್ಸವದ ಪ್ರಯುಕ್ತ ಶ್ರೀ ರಂಗನಾಥ ಸ್ವಾಮಿ ಧ್ವಜಾರೋಹಣ ಗರುಡೋತ್ಸವ, ದಿವ್ಯಕಲ್ಯಾಣೋತ್ಸವ, ಕೃಷ್ಣ ಗಂಧೋತ್ಸವ ವಿಶೇಷ ಅಲಂಕಾರ, ರಜತಾಭಿಷೇಕ, ಮಹಾಭಿಷೇಕ, ದಿವ್ಯಾಲಂಕಾರ, ಅರ್ಚನೆ, ಅಷ್ಠೋತ್ತರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ರಥೋತ್ಸವ ವಿದಿವತ್ತಾಗಿ ನಡೆಯಿತು. ರಥೋತ್ಸವದಲ್ಲಿ ರಥದ ಮೊದಲನೆ ಮಂಗಳಾರತಿ ಪ್ರಧಾನ ಬಾವುಟ ಹರಾಜಿನಲ್ಲಿ ಶಾಸಕ ಕೆ.ಎಸ್. ಆನಂದ್ ₹5.5ಲಕ್ಷಕ್ಕೆ ಬಿಡ್ ಮಾಡಿ ತಮ್ಮದಾಗಿಸಿಕೊಂಡು ರಥದ ಪ್ರಥಮ ಪೂಜೆಗೆ ಭಾಜನರಾದರು. ನಂತರ ಸುತ್ತಮುತ್ತಲಿನ ದೇವಾಲಯದವರ ಒಕ್ಕಲಿನ ಹೆಸರಿನಲ್ಲಿ ತೆಂಗಿನ ಕಾಯಿ ಹಂಚಿಕೆ ಮಾಡಿ ರಥದ ಚಕ್ರಗಳಿಗೆ ಒಡೆದ ತಕ್ಷಣ, ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ಪಾದಕ್ಕೆ ಗೋವಿಂದಾ... ಗೋವಿಂದಾ ಎಂಬ ಘೋಷಗಳನ್ನು ಕೂಗುತ್ತಾ ರಥ ಎಳೆಯಲಾಯಿತು. ನೆರೆದಿದ್ದ ಭಕ್ತರು ಬಾಳೆ ಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಸಮೀಪದ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶ್ರೀಕೃಷ್ಣ ಗಂಧೋತ್ಸವ ಮತ್ತು ನಾಣ್ಯಗಳಿಂದ ರಜತಾಭಿಷೇಕ ನಡೆಸಲಾಗಿದ್ದ ನಾಣ್ಯಗಳನ್ನು ಭಕ್ತರಿಗೆ ನೀಡಲಾಯಿತು. ರಥೋತ್ಸವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಭದ್ರಾವತಿ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಸಂಜೆ ನವಿಲೋತ್ಸವ, ಶೇಷವಾಹನೋತ್ಸವ ಸೋಮವಾರ ಅಶ್ವಾರೋಹಣೋತ್ಸವ, ಅವಭೌತ ಸ್ನಾನ, ವಸಂತ ಸೇವಾ ನಂತರ ಪೂಜೆ, ಹೋಮ, ನಿತ್ಯಬಲಿ ರಾತ್ರಿ ಉಯ್ಯಾಲೆ ಉತ್ಸವ, ಹನುಮಂತೋತ್ಸವ ನಡೆಯಲಿದೆ ಮಂಗಳವಾರ ಗ್ರಾಮದ ಪ್ರದಕ್ಷಿಣೆ, ಅಡ್ಡಪಲ್ಲಕ್ಕಿ ಉತ್ಸವ, ಕೆಂಚರಾಯಸ್ವಾಮಿ, ಭೂತರಾಯಸ್ವಾಮಿ ಸೇವೆಯೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ. ವಿಶೇಷವೆಂಬಂತೆ ಪ್ರತಿ ವರ್ಷ ಶ್ರೀಕೃಷ್ಣ ಗಂದೋತ್ಸವ ಮತ್ತು ನಾಣ್ಯಗಳಿಂದ ರಜತಾಭಿಷೇಕ ನಡೆಸಿ ನಾಣ್ಯಗಳನ್ನು ಶ್ರೀ ಸ್ವಾಮಿ ತೇರಿಗೆ ಏಸೆಯಲಾಗುತ್ತಿತ್ತು ಈ ಬಾರಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಭಕ್ತಾಧಿಗಳಿಗೆ ಒಂದೊಂದು ನಾಣ್ಯ ನೀಡಲಾಗುತ್ತದೆ. ಈ ನಾಣ್ಯವನ್ನು ಭಕ್ತರು ರಂಗನಾಥನ ಹೆಸರಿನಲ್ಲಿ ಪೂಜಿಸಿದರೇ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಮತ್ತು ತಮ್ಮ ಆದಾಯ, ಸಂಪತ್ತು ವೃದ್ಧಿಸುತ್ತದೆ ಇದರಿಂದ ಬಂದ ಹಣವನ್ನು ಭಕ್ತರು ಮುಂದಿನ ವರ್ಷ ದ ರಥೊತ್ಸವಕ್ಕೆ ನೀಡುವರು ಎನ್ನುತ್ತಾರೆ ದೇವಾಲಯದ ಅರ್ಚಕ ಸಂತೋಷ್. ಹಾಸನ ಸಂಸದ ಶ್ರೇಯಸ್ ಪಟೇಲ್, ದೇವಾಲಯದ ಕಮಿಟಿ ಅಧ್ಯಕ್ಷ ಅಶ್ವತ್ ನಾರಾಯಣ್, ಹೊಗರೇಹಳ್ಳಿ ಶಶಿಕುಮಾರ್, ಗುಡಿಗೌಡರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾಧಿಗಳು ಹಾಜರಿದ್ದರು. 13 ಬೀರೂರು 1 ಬೀರೂರಿನ ಸಮೀಪದ ಹೊಗರೇಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಸ್.ಆನಂದ್, ಭಾಗವಹಿಸಿದ್ದರು.