ಕನ್ನಡಪ್ರಭ ವಾರ್ತೆ ಕೊಲ್ಹಾರ

ದೇಹದೊಳಗಿನ ಕಲ್ಮಶಗಳನ್ನು ತೆಗೆದು ಶರೀರವನ್ನು ಸಶಕ್ತ ಹಾಗೂ ಸದೃಢ ಮಾಡಿ ರೋಗದಿಂದ ದೂರ ಮಾಡುವುದೇ ಯೋಗ ಎಂದು ವಿಜಯಪುರ ಶಾಂತ ಯೋಗಾಶ್ರಮದ ಯೋಗ ತಜ್ಞರಾದ ಶಾಂತಕುಮಾರ ಗುರೂಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಹಮ್ಮಿಕೊಂಡ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು, ಯೋಗ ಕಲಿಯಲು ಆಸಕ್ತಿಯಿರಬೇಕು. ಯೋಗ ದಿನದಂದು ಮಾತ್ರ ಮಾಡಿದರೆ ಸಾಲದು. ಪತಂಜಲಿ ಮಹರ್ಷಿಗಳು ಹೇಳಿದಂತೆ ಸಾಧನೆ ಮಾಡಲು ದೇಹವನ್ನು ಶಸಕ್ತಗೊಳಿಸಬೇಕು, ದೇಹ ಸ್ವಚ್ಛಂದವಾಗಿರಿಸಬೇಕು, ನಿರೋಗಿಯಾಗಿರಬೇಕು ಈ ಮೂರು ಅಂಶಗಳನ್ನು ಪಾಲಿಸಿದರೆ ಸಾಧನೆಗೆ ಪೂರಕವಾಗಿರುತ್ತದೆ ಎಂದರು.

ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣ ಬಹಳಷ್ಟು ಅವಶ್ಯವಿದೆ. ಆದರೆ ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಲಿಸುತ್ತಿಲ್ಲ ಇದರಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಹೀಗಾಗಿ, ಸರ್ಕಾರ ಮಕ್ಕಳಲ್ಲಿ ನೈತಿಕ ಶಿಕ್ಷಣ ಕಲಿಸಬೇಕು. ಮಕ್ಕಳೂ ಸಹ ಫಾಸ್ಟ್‌ ಫುಡ್ ತಿಂದು ಹಾಳಾಗುವ ಬದಲು ರೈತರು ಬೆಳೆದ ತರಕಾರಿ, ಧಾನ್ಯಗಳು, ಹಣ್ಣು ಹಂಪಲ ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಟಿ.ಟಿ. ಹಗೇದಾಳ ಮಾತನಾಡಿ, ಶರೀರ ಮತ್ತು ಮನಸ್ಸನ್ನು ಒಂದೆಡೆ ಸೇರಿಸುವುದೇ ಯೋಗ. ಈ ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಶಾಂತಕುಮಾರ ಗುರೂಜಿಯವರ ಮಾರ್ಗದರ್ಶನದಲ್ಲಿ ನೈತಿಕ ಶಿಕ್ಷಣ ಜಾರಿಗೊಳಿಸಲಾಗುವುದು. ಮುಂಬರುವ ದಿನಗಳಲ್ಲಿ ನಮ್ಮ ಸಂಸ್ಥೆಯಡಿಯಲ್ಲಿ ಶಾಂತಕುಮಾರ ಗೂರೂಜಿಯವರ ನೇತೃತ್ವದಲ್ಲಿ ಪಟ್ಟಣದ ಜನರಿಗೆ 15 ದಿನದ ಯೋಗ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗುವುದು. ಇವತ್ತಿನ ಕಲುಷಿತ ವಾತಾವರಣದಲ್ಲಿ ಯೋಗ ಒಂದು ದಿವ್ಯ ಔಷಧ. ಇದಕ್ಕೆ ಯಾವುದೇ ಹಣ ತರಬೇಕಾಗಿಲ್ಲ. ನಮ್ಮ ದೇಹ, ಮನಸ್ಸು ಅತ್ಯಂತ ಸದೃಢವಾಗಿ ಕಾರ್ಯನಿರ್ವಹಿಸಲು ಯೋಗ ಬಹಳ ಅವಶ್ಯವಿದೆ. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಈ ವೇಳೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಶಾಂತಕುಮಾರ ಗುರೂಜಿಯವರು ಒಂದು ಗಂಟೆ ಯೋಗಾಭ್ಯಾಸ ಮಾಡಿಸಿದರು. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಂದ ಯೋಗ ನೃತ್ಯ ಜರುಗಿತು.

ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯು. ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕರಾದ ಶಂಕ್ರಪ್ಪ ಕುಂಬಾರ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಶಿವಾನಂದ ಶೀಲವಂತ, ಟಿ.ಟಿ. ಹಗೇದಾಳ ಭಾಗವಹಿಸಿದ್ದರು. ಪ್ರಾಚಾರ್ಯ ಡಾ.ಎ.ಡಿ. ಚವ್ಹಾಣ, ಮುಖ್ಯ ಗುರುಗಳಾದ ರಾಜಶೇಖರ ಉಮರಾಣಿ, ಯಲ್ಲಪ್ಪ ಶಿರೋಳ, ವೈಷ್ಣವಿ ಕುಲಕರ್ಣಿ ಉಪಸ್ಥಿತರಿದ್ದರು.

ಉಪನ್ಯಾಸಕ ಮಂಜುನಾಥ ಮಟ್ಯಾಳ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ರಮೇಶ ತೋಟದ ಹಾಗೂ ದೈಹಿಕ ಶಿಕ್ಷಕಿ ಧನಶ್ರೀ ಬಾರಸ್ಕಳ ಯೋಗ ಸಂಯೋಜನೆ ಹಾಗೂ ನಿರ್ವಹಣೆ ಮಾಡಿದರು.