ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ. ಸಬಿತಾ ಬನ್ನಾಡಿ
ಸಾಧನೆಗೆ ಯಾವುದೂ ಅಡ್ಡಿಯಲ್ಲ. ಸಾಧಿಸುವ ಮನಸ್ಥಿತಿ ಇದ್ದರೆ ಮಾತ್ರ ಗುರಿ ತಲುಪಬಹುದು ಎಂದು ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ. ಸಬಿತಾ ಬನ್ನಾಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ರೋವರ್ಸ್ ಮತ್ತು ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಆಂತರ್ಯದ ಸ್ಥಿತ ಪ್ರಜ್ಞತೆ ಇದ್ದರೆ ಲೌಕಿಕವಾಗಿ ಗಟ್ಟಿತನ ಸಾಧಿಸಬಹುದು. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕವಾಗಿ ಸಾಧಿಸುವ ಗುರಿ ಜೊತೆ ಸಾಂಸ್ಕೃತಿಕ, ಸಾಮಾಜಿಕ ಜವಾಬ್ದಾರಿ ಅರಿಯಬೇಕು. ಸಮಯದ ಮಹತ್ವ ಅರಿತು ಜೀವನವನ್ನು ಸಮಾಜ ಮುಖಿಯಾಗಿ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರಾಚಾರ್ಯ ಡಾ ಕೆ.ಎ.ರಾಜಣ್ಣ ಮಾತನಾಡಿ, ವಿದ್ಯಾರ್ಥಿಗ ಶೈಕ್ಷಣಿಕ ಸಾಧನೆ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಉಪನ್ಯಾಸಕರ ಅವಿರತ ಶ್ರಮದಿಂದ ನ್ಯಾಕ್ ಎ ದರ್ಜೆ ಮಾನ್ಯತೆ ಲಭಿಸಿದೆ. ಕೆಲ ದಿನಗಳ ಹಿಂದೆ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲಾಗಿದೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿ ಕಡೂರು ಕಾಲೇಜಿಗೆ ವಿದ್ಯಾರ್ಥಿಗಳು ಗೌರವ ತಂದಿದ್ದಾರೆ ಎಂದು ಶ್ಲಾಘಿಸಿದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ದೇಶಪ್ರೇಮ ಕುರಿತ ಹಾಡುಗಳ ಮೂಲಕ ಜೂನಿಯರ್ ಅಂಬರೀಶ್ ಖ್ಯಾತಿಯ ಕಲಾವಿದ ಎಸ್.ಲಿಂಗಾರಾಧ್ಯ ವಿದ್ಯಾರ್ಥಿಗಳನ್ನು ರಂಜಿಸಿದರು. ಯುವ ರೆಡ್ ಕ್ರಾಸ್ ಸಂಯೋಜಕ ತಿಮ್ಮೇಗೌಡ, ಉಪನ್ಯಾಸಕ ಮಂಜುನಾಥ್, ಎಚ್.ಎಂ.ಕುಮಾರ್, ತಿಮ್ಮರಾಜು,ಎಚ್.ಎಂ.ಜ್ಯೋತಿ, ಸವಿತಾ, ಅಶೋಕ್ ಕುಮಾರ್ ಇದ್ದರು.
ಕಡೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.