ಐತಿಹಾಸಿಕ ಬಾಗಲಕೋಟೆ ಹೋಳಿಗೆ ಅದ್ಧೂರಿ ವಿದಾಯ

KannadaprabhaNewsNetwork | Published : Mar 17, 2025 12:31 AM

ಸಾರಾಂಶ

ಶಿವರಾತ್ರಿ ಅಮಾವಾಸ್ಯೆ ಮರುದಿನ ಆರಂಭವಾಗಿದ್ದ ಬಾಗಲಕೋಟೆ ಐತಿಹಾಸಿಕ ಹೋಳಿ ಉತ್ಸವ ಭಾನುವಾರ ವೈಭವದಿಂದ ಮುಕ್ತಾಯಗೊಂಡಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿವರಾತ್ರಿ ಅಮಾವಾಸ್ಯೆ ಮರುದಿನ ಆರಂಭವಾಗಿದ್ದ ಬಾಗಲಕೋಟೆ ಐತಿಹಾಸಿಕ ಹೋಳಿ ಉತ್ಸವ ಭಾನುವಾರ ವೈಭವದಿಂದ ಮುಕ್ತಾಯಗೊಂಡಿತು.

ಮೂರು ದಿನಗಳ ಕಾಲ ಸಡಗರದಿಂದ ನಡೆದ ಬಣ್ಣದಾಟ ಶಿಸ್ತುಬದ್ಧವಾಗಿ ಜರುಗಿತು. ಬಣ್ಣದೋಕುಳಿಯಲ್ಲಿ ಮುಂದೆದ್ದ ಬಾಗಲಕೋಟೆ ಜನ ಸರ್ವರಿಗೂ ಪ್ರೀತಿ ಹಂಚಿ ಸಾಮರಸ್ಯ ಮೆರೆದರು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಅಧಿಕ ಸಂಖ್ಯೆಯಲ್ಲಿ ಜನರ ಪಾಲ್ಗೊಂಡಿದ್ದು ಹೋಳಿ ಹಬ್ಬ ಕಳೆಗಟ್ಟುವಂತೆ ಮಾಡಿತ್ತು.

ಎರಡು ವಾರಗಳಿಂದ ಬಾಗಲಕೋಟೆ ನಗರ ಪ್ರತಿ ಗಲ್ಲಿಗಲ್ಲಿಗಳಲ್ಲಿ ಹಲಗೆ ಸದ್ದು, ಶಹನಾಯಿ ನಿನಾದ ಮೊಳಗಿತು. ಮೂರು ದಿನಗಳ ಬಣ್ಣದಾಟದಲ್ಲಿ ಬಾಗಲಕೋಟೆ ನಗರ ಸಂಪೂರ್ಣ ಬಣ್ಣಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಬಣ್ಣಗಳ ಚಿತ್ತಾರ ಮೂಡಿತ್ತು. ನಿತ್ಯ ರಾತ್ರಿ ನಡೆಯುತ್ತಿದ್ದ ಸೋಗಿನ ಬಂಡಿಗಳ ಮೆರವಣಿಗೆ ಬಾಗಲಕೋಟೆ ಹೋಳಿ ವೈಭವ ಸಾಕ್ಷಿಕರಿಸಿತು. ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಜೀವಂತವಾಗಿರಿಸಲು ಬಾಗಲಕೋಟೆ ಹೋಳಿ ಆಚರಣೆ ಸಮಿತಿ, ನಮ್ಮೂರು ಹಬ್ಬ ತಂಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ರೇನ್ ಡ್ಯಾನ್ಸ್ ಆಧುನಿಕ ಸ್ಪರ್ಶ ನೀಡಿ ಯುವ ಸಮುಹ ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಕಾಮದಹನ ಬಳಿಕ ಅದ್ಧೂರಿಯಾಗಿ ಚಾಲನೆ ದೊರೆತಿದ್ದ ಬಣ್ಣದೋಕುಳಿಗೆ ನಗರದ ಪ್ರತಿ ಮನೆ ಮನೆ, ರಸ್ತೆ ಇಕ್ಕೆಲ ಮತ್ತು ಗಲ್ಲಿಗಲ್ಲಿಗಳಲ್ಲಿ ಬಣ್ಣದ ರಂಗು ಕಾಣಿಸಿಕೊಂಡಿತ್ತು. ನಸುಕಿನ ಜಾವ ಹಲಿಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು. ಯುವಕ-ಯುವತಿಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ಕೂಡಿಕೊಂಡು ರಂಗಿನ ಲೋಕದಲ್ಲಿ ಮಿಂದೆದ್ದರು. ಈ ಬಾರಿ ದಿನ ಜರುಗಿದ ಬಣ್ಣದಾಟದಲ್ಲಿ ಜನರು ಬಂಡಿ-ಟ್ರ್ಯಾಕ್ಟರ್‌ನಲ್ಲಿ ನಿಂತು ಎದುರಾಳಿಗಳನ್ನು ಬಣ್ಣದ ನೀರಿನ ಮಜ್ಜನ ಮಾಡಿಸಿದರು. ಬಗೆ ಬಗೆಯ ಬಣ್ಣ ಹಚ್ಚುವುದರ ಜೊತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಬಾರಿಸಿದ್ದು ರಂಜಿಸಿತು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

ನಗರದ ಬೀದಿ ಬೀದಿಯಲ್ಲಿ ಎಲ್ಲಿ ನೋಡಿದರಲ್ಲಿ ಬ್ಯಾರಲ್‌ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ರಸ್ತೆ ಮೇಲೆ ಹಾಯ್ದು ಹೋಗುತ್ತಿದ್ದ ಬೈಕ್ ಸವಾರರು ಮುಂದೆ ಬಂದವರಿಗೆ ಬಣ್ಣ ಎರಚುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಬಣ್ಣ ಹಾಕಬೇಡಿ ಎಂದು ಬೇಡಿಕೊಂಡರು ಕೇಳಲಿಲ್ಲ. ಬಿಡದೇ ಬಣ್ಣದ ನೀರಿನ ಮಜ್ಜನ ಮಾಡಿಸಿ, ಸಂಭ್ರಮಿಸುತ್ತಿದ್ದರು. ಪ್ರತಿ ನಿತ್ಯ ನಗರದ ಎಲ್ಲಾ ಬೀದಿ ಬೀದಿಗಳಲ್ಲಿ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಬಾಗಲಕೋಟೆ ನಗರ ಅಕ್ಷರಶಃ ಮೂರು ದಿನ ಬಂದ್ ಆಗಿತ್ತು. ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿತ್ತು. ಘೋಷಣೆ, ಜೈಕಾರಗಳು ಮುಗಿಲು ಮುಟ್ಟಿದ್ದವು. ಸರ್ಕಾರಿ ನೌಕರರು, ಮಾಧ್ಯಮ ಮಿತ್ರರು ಸೇರಿದಂತೆ ಜಾತಿ ಮತ ಪಂಥ ಭೇದ ಭಾವ ಮರೆತು ಹೋಳಿ ಹಬ್ಬ ಆಚರಿಸಿದರು. ದೇಶದಲ್ಲಿಯೇ ಗಮನ ಸೆಳೆದಿರುವ ಕೋಟೆ ನಗರದ ಬಣ್ಣದೋಕುಳಿಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.ಐತಿಹಾಸಿಕ ಬಾಗಲಕೋಟೆ ಹೋಳಿ ಉತ್ಸವವ ಸಂಭ್ರಮದಿಂದ ಮುಕ್ತಾಯಗೊಂಡಿದೆ. ಎಲ್ಲರು ಸಹಕಾರ ನೀಡಿದ್ದಾರೆ. ಇಲ್ಲಿನ ಹೋಳಿ ನಿಜಕ್ಕೂ ಅರ್ಥಪೂರ್ಣವಾಗಿದೆ.

-ಅಮರನಾಥ ರೆಡ್ಡಿ ಎಸ್ಪಿಬಾಗಲಕೋಟೆ ಹೋಳಿ ಉತ್ಸವ ಈ ಸಾರಿ ಜನರ ಉತ್ಸಾಹ ಹೆಚ್ಚಾಗಿರುವುದು ಕಂಡು ಬಂದಿತು. ಪ್ರತಿಯೊಂದು ಪೇಟೆಯಲ್ಲಿ ಬಣ್ಣದಾಟ ಸಂತಸದಲ್ಲಿ ತೇಲುವಂತೆ ಮಾಡಿತು. ಬಣ್ಣದ ಬಂಡಿಗಳು ಹಾಗೂ ಸೋಗಿನ ಮೆರವಣಿಗೆ ಆಕರ್ಷಣೀಯವಾಗಿತ್ತು. ಪ್ರತಿ ವರ್ಷವು ಇದೇ ರೀತಿ ಜನರು ಹೋಳಿ ಆಚರಿಸಬೇಕು.

-ಕಳಕಪ್ಪ ಬಾದೋಡಗಿ ಹೋಳಿ ಆಚರಣೆ ಸಮಿತಿ ಅಧ್ಯಕ್ಷ

Share this article