ತುಮಕೂರಿನಲ್ಲಿ ವೈಭವದ ಗಣಪತಿ ವಿಸರ್ಜನಾ ಮಹೋತ್ಸವ

KannadaprabhaNewsNetwork |  
Published : Sep 13, 2025, 02:04 AM IST
ವಿಸ | Kannada Prabha

ಸಾರಾಂಶ

ಮೆರವಣಿಗೆಗೆ ಮುನ್ನ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಭದ್ರಮ್ಮ ವೃತ್ತದ ಬಳಿಯ ಸೋಮೇಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಪರಿಷತ್, ಬಜರಂಗದಳದ 8ನೇ ವರ್ಷದ ಗಣಪತಿ ವಿಸರ್ಜನಾ ಮಹೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು.

ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಬೃಹತ್‌ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯ, ಕಲಾ ಮೇಳಗಳೊಂದಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ವಿಸರ್ಜನೆ ಮಾಡುವ ಕೆಎನ್‌ಎಸ್‌ ಕಲ್ಯಾಣಿವರೆಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಹೆಬ್ಬೂರು ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ಅಟವಿ ಸುಕ್ಷೇತ್ರದ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣ ಸಿದ್ಧೇಶ್ವರ ಮಠದ ಬಿಂದುಶೇಖರ ಒಡೆಯರ್ ಸ್ವಾಮೀಜಿ ಹಾಗೂ ಹಲವು ಗಣ್ಯರು ಗಣಪತಿಗೆ ಪೂಜೆ ಸಲ್ಲಿಸಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉಪಾಧ್ಯಕ್ಷರಾದ ಮಹೇಂದ್ರ ವೈಷ್ಣವ್, ಡಾ.ಎಸ್.ಪರಮೇಶ್, ಸ್ವಚ್ಛ ಮಂಜುನಾಥ್, ಎಚ್.ಜಿ.ಚಂದ್ರಶೇಖರ್, ಕೆ.ಜೆ.ರುದ್ರಪ್ಪ, ಸುರೇಶ್‌ರಾವ್, ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಮಿತಿ ಸಹಕಾರ್ಯದರ್ಶಿ ನರಸಿಂಹಮೂರ್ತಿ, ಜೀವನ್, ಮೃದುಲ್ ವೈಷ್ಣವ್, ವಿಶ್ವ ಹಿಂದೂ ಪರಿಷದ್‌ ಜಿಲ್ಲಾಧ್ಯಕ್ಷ ಪ್ರದೀಪ್ ಸೇರಿ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆ, ಸಮಾಜಗಳ ಪ್ರಮುಖರು, ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ಮೆರವಣಿಗೆಗೆ ಮುನ್ನ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿದರು.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಯೊಂದಿಗೆ ಭಾರತ ಮಾತೆ, ಶ್ರೀರಾಮ, ಆಂಜನೇಯ, ಶಿವ, ವರಾಹ ಸ್ವಾಮಿ, ಆಪರೇಷನ್ ಸಿಂದೂರದಲ್ಲಿ ಬಳಕೆಯಾದ ಬ್ರಹ್ಮೋಸ್‌ ಕ್ಷಿಪಣಿಯ ಸ್ತಬ್ಧ ಚಿತ್ರಗಳು, ಬಾಲಗಂಗಾಧರ ತಿಲಕ್, ಶಿವಾಜಿ ಮೊದಲಾದವರ ಭಾವಚಿತ್ರಗಳ ಪ್ರದರ್ಶನದೊಂದಿಗೆ ಕೂಡಿದ್ದ ಗಣಪತಿ ವಿಸರ್ಜನಾ ಉತ್ಸವ ಆಕರ್ಷಣೀಯವಾಗಿತ್ತು. ಜೊತೆಗೆ ಮಂಗಳ ವಾದ್ಯಗಳು, ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ನಾಸಿಕ್ ಡೋಲು ಮತ್ತಿತರ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿತ್ತು. ಭದ್ರಮ್ಮ ವೃತ್ತ, ಬಿ.ಎಚ್.ರಸ್ತೆ, ಬಿಜಿಎಸ್ ವೃತ್ತ, ಲಕ್ಕಪ್ಪ ವೃತ್ತದ ಮೂಲಕ ಜೆ.ಸಿ.ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಸ್ವತಂತ್ರ್ಯ ವೃತ್ತ, ಅಶೋಕ ರಸ್ತೆ ಮುಖಾಂತರ ಗಾಯತ್ರಿ ಚಿತ್ರಮಂದಿರ, ಎಂ.ಜಿ.ರಸ್ತೆ, ರಾಮಪ್ಪ ವೃತ್ತ, ಕೋಟೆ ಆಂಜನೇಯಸ್ವಾಮಿ ವೃತ್ತದ ಮಾರ್ಗವಾಗಿ ಮೆರವಣಿಗೆ ಸಾಗಿತು. ಮಾರ್ಗದುದ್ದಕ್ಕೂ ಸಾವಿರಾರು ಜನ ಸೇರಿ ವೈಭವದ ಉತ್ಸವವನ್ನು ಸಂಭ್ರಮಿಸಿದರು.

ಸಂಜೆ ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ, ಪಟಾಕಿಗಳ ವಿನೋದಾವಳಿ ವಿಶೇಷ ಆಕರ್ಷಣೆಯಾಗಿತ್ತು. ನಂತರ ಗಾರ್ಡನ್‌ ರಸ್ತೆಯ ಕೆಎನ್‌ಎಸ್‌ ಕಲ್ಯಾಣಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ