
ಕನ್ನಡಪ್ರಭ ವಾರ್ತೆ ತುಮಕೂರು
ದೈವ ದರ್ಶನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿ, ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರೇಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಎಳ್ಳು, ಬೆಲ್ಲ ಹಂಚಿ ಆಶೀರ್ವಾದ ಮಾಡಿದರು.
ಅಟವೀ ಕ್ಷೇತ್ರದ ಶಿವಲಿಂಗ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಬೆಳಗ್ಗೆ 6.30ರಿಂದ ಓಂಕಾರೇಶ್ವರ ಮಹಾ ಶಿವಯೋಗಿಗಳು, ಜಡೆ ಶಾಂತ ಬಸವ ಮಹಾ ಶಿವಯೋಗಿಗಳು, ಅಟವೀ ಮಹಾ ಶಿವಯೋಗಿಗಳು, ಅಟವೀ ಸಿದ್ಧಲಿಂಗ ಮಹಾಸ್ವಾಮಿಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ನಂತರ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸುಮಂಗಲೆಯರ ಕಳಸ- ಕನ್ನಡ ಆರತಿಯೊಂದಿಗೆ ಓಂಕಾರ ಶಿವಯೋಗಿಗಳವರ ಹಾಗೂ ಅಟವೀ ಮಹಾಶಿವಯೋಗಿಗಳ ಉತ್ಸವವು ವೈಭವದಿಂದ ನಡೆಯಿತು.ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಉತ್ಸವ ಅಟವೀ ಮಠ ತಲುಪಿತು. ಆನಂತರ ಸ್ವಾಮೀಜಿಗಳು ಷಟ್ಸ್ಥಳ ಧ್ವಜಾರೋಹಣ ಹಾಗೂ ನಂದಿ ಧ್ವಜ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಶ್ರೀಗುರು ಅಟವೀಶ್ವರರ ಪಲ್ಲಕ್ಕಿ ಮಹೋತ್ಸವ ನಡೆಯಿತು.
ಈ ವೇಳೆ ಮಾತನಾಡಿದ ಅಟವೀ ಶಿವಲಿಂಗ ಸ್ವಾಮೀಜಿ, ಸುಕ್ಷೇತ್ರದಲ್ಲಿ ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದ ಜಾತ್ರಾ ಮಹೋತ್ಸವ ಯಾವಾಗಿನಿಂದ ಆರಂಭವಾಯಿತೋ ಗೊತ್ತಿಲ್ಲ, ಆದರೆ ಹಲವಾರು ವರ್ಷಗಳಿಂದ ಅದೇ ಸಂಪ್ರದಾಯದೊಂದಿಗೆ ಮಠದ ಪರಂಪರೆಯಂತೆ ಮುಂದುವರಿದುಕೊಂಡು ಬಂದಿದೆ. ತಾವು ಈ ಕ್ಷೇತ್ರದ ಪಟ್ಟಾಧಿಕಾರ ಸ್ವೀಕಾರ ಮಾಡಿದ ನಂತರ 2000 ದಿಂದ ಸಮಿತಿ ರಚಿಸಿ, ಸಮಿತಿ, ಭಕ್ತರ ಸಹಕಾರದೊಂದಿಗೆ ಜಾತ್ರೋತ್ಸವ ಆಚರಿಸಿಕೊಂಡು ಬರಲಾಗುತ್ತದೆ ಎಂದರು.ಶ್ರೀ ಮಠಕ್ಕೆ ಬಂದು ಮಹಾಯೋಗಿಗಳ ಗದ್ದುಗೆ ದರ್ಶನ ಮಾಡಿದರೆ ಭಕ್ತರ ಕೋರಿಕೆ ಈಡೇರುತ್ತದೆ. ಯಾವುದೇ ಸಮಸ್ಯೆ, ಕಾಯಿಲೆ ನಿವಾರಣೆ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪ ಮಾಡಿಕೊಂಡರೆ ಹರಕೆ ಫಲಿಸುತ್ತದೆ ಎಂಬ ಭಕ್ತರ ನಂಬಿಕೆ ಅಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಅದೇ ರೀತಿ ಪ್ರತಿವರ್ಷ ಸಾವಿರಾರು ಭಕ್ತರು ಭಕ್ತಿ, ಸಂಭ್ರಮದಿಂದ ಜಾತ್ರೋತ್ಸವದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು.
ಅಟವಿ ಸುಕ್ಷೇತ್ರದ ಕಾರ್ಯಾಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, ಅಟವೀ ಕ್ಷೇತ್ರದ ಮಕರ ಸಂಕ್ರಾಂತಿ ಜಾತ್ರೋತ್ಸವ ಇತಿಹಾಸ ಪ್ರಸಿದ್ಧವಾಗಿದೆ. ಸಾವಿರಾರು ಭಕ್ತಿರು ಆಗಮಿಸಿ, ಮಹಾಯೋಗಿಗಳ ಗದ್ದುಗೆ ದರ್ಶನ ಮಾಡಿ, ಜಾತ್ರಾ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ. ಆಗಮಿಸಿದ ಎಲ್ಲಾ ಭಕ್ತರಿಗೂ ಸ್ವಾಮೀಜಿಗಳೇ ಖುದ್ದು ಎಳ್ಳು ಬೆಲ್ಲ ಹಂಚಿ ಆಶೀರ್ವಾದ ಮಾಡುತ್ತಾರೆ. ಬಂದಿರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಸಮಿತಿಯ ಖಜಾಂಚಿ ಜಗದೀಶ್ಚಂದ್ರ, ಅಟವೀ ಜ್ಞಾನ ಪ್ರಸಾರ ಕೇಂದ್ರದ ಸಂಚಾಲಕ ಕೆ.ವಿ.ಬೆಟ್ಟಯ್ಯ, ಮುಖಂಡರಾದ ಮಹದೇವಪ್ಪ, ವಿಶ್ವನಾಥ್ ಅಪ್ಪಾಜಪ್ಪ, ಬೆಟ್ಟಲಿಂಗಯ್ಯ ಸೇರಿ ಸುತ್ತಮುತ್ತಲ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.