ಮಾಜಾಳಿಯಲ್ಲಿ ವಿಜೃಂಭಣೆಯ ‘ಮಾರ್ಕೆಪೂನವ್’ ಜಾತ್ರೆ

KannadaprabhaNewsNetwork |  
Published : Feb 03, 2026, 02:30 AM IST
 | Kannada Prabha

ಸಾರಾಂಶ

ಕರ್ನಾಟಕ–ಗೋವಾ ಗಡಿಭಾಗದ ಮಾಜಾಳಿಯಲ್ಲಿ ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರಾದ ದಾಡ್ ಮತ್ತು ಮಾರಿಕಾ ದೇವಿಯ ಐತಿಹಾಸಿಕ ‘ಮಾರ್ಕೆಪೂನವ್’ ಜಾತ್ರಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರವಾರ

ಕರ್ನಾಟಕ–ಗೋವಾ ಗಡಿಭಾಗದ ಮಾಜಾಳಿಯಲ್ಲಿ ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರಾದ ದಾಡ್ ಮತ್ತು ಮಾರಿಕಾ ದೇವಿಯ ಐತಿಹಾಸಿಕ ‘ಮಾರ್ಕೆಪೂನವ್’ ಜಾತ್ರಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಮಾಘ ಮಾಸದ ಶುದ್ಧ ಪೂರ್ಣಿಮೆಯಂದು ನಡೆಯುವ ಈ ಜಾತ್ರೆಯನ್ನು, ಕೊಂಕಣಿ ಭಾಷೆಯಲ್ಲಿ ಹುಣ್ಣಿಮೆಗೆ ‘ಪೂನವ್’ ಎಂದು ಕರೆಯುವ ಹಿನ್ನೆಲೆ ‘ಮಾರ್ಕೆಪೂನವ್’ ಎಂದು ಹೆಸರು ಪಡೆದಿದೆ.

ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಗಂಡು ಮಕ್ಕಳಿಗೆ ‘ಶೇಲ್’ ಸೇವೆ ನೆರವೇರಿಸಲಾಯಿತು. ಪ್ರೌಢಾವಸ್ಥೆಗೆ ಮುನ್ನ ಅರ್ಚಕರು ಗಂಡು ಮಕ್ಕಳ ಹೊಕ್ಕುಳ ಭಾಗಕ್ಕೆ ಸೂಜಿಯಿಂದ ದಾರವನ್ನು ಪೋಣಿಸಿ ಗಂಟು ಹಾಕುವ ಈ ಆಚರಣೆ, ಮುಂದಿನ ಜೀವನದಲ್ಲಿ ಸಂಭವಿಸಬಹುದಾದ ಅಪಘಾತ ಹಾಗೂ ಅವಘಡಗಳಿಂದ ರಕ್ಷಣೆಗಾಗಿ ದೇವರಿಗೆ ಸಾಂಕೇತಿಕವಾಗಿ ರಕ್ತ ಅರ್ಪಿಸುವ ನಂಬಿಕೆ ಒಳಗೊಂಡಿದೆ. ಈ ವೇಳೆ ಮಕ್ಕಳನ್ನು ಮಧುಮಗನಂತೆ ಶೃಂಗಾರಗೊಳಿಸಲಾಗಿದ್ದು, ಸಂಪ್ರದಾಯದಂತೆ ಸೂಜಿ ಚುಚ್ಚುವಾಗ ‘ಅಯ್ಯಯ್ಯೋ’ ಎಂದು ಕೂಗುತ್ತಾ ಮಕ್ಕಳು ಹರಕೆ ತೀರಿಸಿದರು.

ಇನ್ನು ಹೆಣ್ಣು ಮಕ್ಕಳು ಹಾಗೂ ಗ್ರಾಮಕ್ಕೆ ಹೊಸದಾಗಿ ಬಂದ ಸೊಸೆಯಂದಿರು ಕುಲದೇವಿಗೆ ‘ದೀವಜ್’ ಅಂದರೆ ದೀಪ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು. ಹಿಂದಿನ ದಿನದಿಂದ ಉಪವಾಸವಿದ್ದು, ದಾಡ್ ದೇವಸ್ಥಾನದಿಂದ ದೀಪ ಹೊತ್ತುಕೊಂಡು ಮಾರಿಕಾ ದೇವಿ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಹರಕೆ ಒಪ್ಪಿಸುವುದು ಇಲ್ಲಿನ ಪಾರಂಪರಿಕ ಪದ್ಧತಿ. ಋತುಮತಿಯಾಗುವ ಮುನ್ನವೇ ಈ ಸೇವೆ ಸಲ್ಲಿಸಬೇಕೆಂಬ ನಿಯಮವಿದ್ದು, ತಪ್ಪಿದಲ್ಲಿ ಪ್ರಾಯಶ್ಚಿತವಾಗಿ ತಾಯಿ ಅಥವಾ ಸಂಬಂಧಿತ ಮಹಿಳೆ ಒಂಬತ್ತು ಬತ್ತಿಯ ದೀವಜ್ ಸಲ್ಲಿಸುವ ಸಂಪ್ರದಾಯವೂ ಇದೆ.

ಕಾಶಿಪುರುಷ ಕುಟುಂಬದವರು ಜಾತ್ರೆಯ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾಜಾಳಿ ಭಾಗದ ಗ್ರಾಮಸ್ಥರು ಮಾತ್ರವಲ್ಲದೇ ಗೋವಾ, ಬೆಂಗಳೂರು ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮದುವೆ, ಸಂತಾನಪ್ರಾಪ್ತಿ ಹಾಗೂ ಅನಾರೋಗ್ಯ ನಿವಾರಣೆಗಾಗಿ ಭಕ್ತರು ಇಲ್ಲಿ ವಿಶೇಷ ಹರಕೆ ಹೊತ್ತುಕೊಳ್ಳುತ್ತಾರೆ.

ಇನ್ನು ಜೈಕಾರಗಳೊಂದಿಗೆ ಬಂಡಿಗಳನ್ನು ಎಳೆಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿ, ಭಕ್ತರು ತಮ್ಮ ಉಪವಾಸವನ್ನು ಅಂತ್ಯಗೊಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ