ಬೆಟ್ಟದ ತಪ್ಪಲಿನಲ್ಲಿ ಭಕ್ತರ ದಂಡು । ಬರದಲ್ಲೂ ಜನಸಾಗರ ಹರಿದು ಬಂತು
ಈ ಭಾಗದ ಜನರ ಚಿಕ್ಕ ತಿರುಪತಿ ಎಂದೇ ಹೆಸರಾದ ತಾಲೂಕಿನ ಹುಲುಗಿನ ಮುರಡಿ ವೆಂಕಟರಮಣಸ್ವಾಮಿ ಸಂಕ್ರಾಂತಿ ರಥೋತ್ಸವ ಜನ ಸಾಗರದ ನಡುವೆ ಸೋಮವಾರ ಅದ್ಧೂರಿಯಿಂದ ಜರುಗಿತು.
ತಾಲೂಕಿನ ತೆರಕಣಾಂಬಿ ಬಳಿಯ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನ ೧.೧೫ ರ ಸಮಯದಲ್ಲಿ ಗರುಢಯೊಂದು ರಥ (ತೇರು) ಹಾಗೂ ಗೋಪುರದ ಮೇಲೆ ಹಾರಾಟ ನಡೆಸಿದ ತಕ್ಷಣ ತಹಸೀಲ್ದಾರ್ ಟಿ.ರಮೇಶ್ ಬಾಬು ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ಭಕ್ತರು ಸೇರಿದಂತೆ ತಮಿಳುನಾಡು ಹಾಗು ಕೇರಳದ ಸಾವಿರಾರು ಮಂದಿ ಭಕ್ತರು ರಥವನ್ನು ಗೋವಿಂದ….ಗೋವಿಂದ ಎಂಬ ನಾಮ ಸ್ಮರಣೆಯೊಂದಿಗೆ ರಥವನ್ನು ಮಕ್ಕಳು, ಮಹಿಳೆಯರೆನ್ನದೆ ಬೆಟ್ಟಕ್ಕೆ ಆಗಮಿಸಿ ದೇವಸ್ಥಾನದ ಒಂದು ಸುತ್ತು ಎಳೆದರು. ಎಲ್ಲೆಂದರಲ್ಲೂ ಮಕ್ಕಳು, ಮಹಿಳೆಯರೆನ್ನದೆ ದೇವಸ್ಥಾನದ ಬಳಿ ನಿಂತು ರಥ ತೆರಳುವುದನ್ನು ಕಂಡ ಭಕ್ತರು ಪುಳಕಿತರಾದರು. ಧನುರ್ಮಾಸ ಮುಗಿದ ಕಾರಣ ನೂರಾರು ಮಂದಿ ನವ ಜೋಡಿಗಳು ಬಂದು ತೇರಿಗೆ ಹಣ್ಣು-ಜವನ ಎಸೆದರು.ಬೆಟ್ಟದ ತಪ್ಪಲು ಸೇರಿದಂತೆ ಬೆಟ್ಟದ ಮೇಲೆ ಹರಕೆ ಹೊತ್ತ ಭಕ್ತರು ಉಪಹಾರ ಹಾಗು ಪಾನಕ, ಮಜ್ಜಿಗೆಯನ್ನು ಬಂದ ಭಕ್ತ ಸಮೂಹಕ್ಕೆ ವಿತರಿಸಿದರು. ಉಪಹಾರಕ್ಕಾಗಿ ಭಕ್ತರು ತಳ್ಳಾಟ ನೂಕಾಟಗಳು ನಡೆದ ದೃಶ್ಯ ಕಂಡು ಬಂತು.ನಡೆದು ಬೆಟ್ಟ ಏರಿದರು:
ಬೆಟ್ಟಕ್ಕೆ ಹೋಗುವ ಮಾರ್ಗ ಸಿಗುವ ತೆರಕಣಾಂಬಿ ಗ್ರಾಮದಲ್ಲಿ ಯುವಕರ ಗುಂಪು ಅಲ್ಲಲ್ಲಿ ಪಾನಕ, ಮಜ್ಜಿಗೆಯನ್ನು ದಾರಿಯಲ್ಲಿ ಹೋಗುತ್ತಿದ್ದ ಭಕ್ತರಿಗೆ ಹಂಚುತ್ತಿದ್ದರು. ತೆರಕಣಾಂಬಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವನರಾಜು ವಿ.ಸಿ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರು.