ಕನ್ನಡಪ್ರಭ ವಾರ್ತೆ ಇಳಕಲ್ಲ
ಕೋಡಿಹಾಳ, ಹರಿಣಾಪೂರ, ಕಂಬಳಿಹಾಳ, ನಂದವಾಡಗಿ, ಆದಾಪೂರ, ತುಂಬ ಇಂಗಳಗಿ, ಗೊರಬಾಳ ಗ್ರಾಮಸ್ಥರು ರಥಯಾತ್ರೆಗೆ ಹಾರ ಹಾಕಿ ಕನ್ನಡ ಘೋಷಣೆಗಳ ಮುಖಾಂತರ ಕನ್ನಡಾಂಬೆಯ ರಥಯಾತ್ರೆ ಸ್ವಾಗತಿಸಿದರು. ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ರಥಯಾತ್ರೆಗೆ ತಹಸೀಲ್ದಾರ್, ತಾಪಂ ಇಒ, ನಗರಸಭೆ ಅಧಿಕಾರಿಗಳು ಮತ್ತು ಕನ್ನಡ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಸ್ನೇಹರಂಗ ಸದಸ್ಯರು ಹಾಗೂ ವಿವಿಧ ಇಲಾಖೆ ಕಾರ್ಯಕರ್ತರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಕುಂಭ ಹೊತ್ತ ಮಹಿಳೆಯರು ಸೇರಿ ಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ತಹಸೀಲ್ದಾರ್ ಸತೀಶ ಕೂಡಲಗಿ, ತಾಪಂ ಕಾರ್ಯನಿವಾರ್ಹಕ ಅಧಿಕಾರಿ ಮುರಳೀಧರರಾವ್ ದೇಶಪಾಂಡೆ, ಪೌರಾಯುಕ್ತ ಶ್ರೀನಿವಾಸ ಜಾಧವ, ಉಪತಹಸೀಲ್ದಾರ್ ಈಶ್ವರ ಗಡ್ಡಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು, ಅಭಿಮಾನಿಗಳು ಉಪಸ್ಥಿತರಿದ್ದರು.