ಶ್ರೀಗಳ ಪಾದುಕೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ ಭಕ್ತರು
ತಾಲೂಕಿಗೆ ಆಗಮಿಸಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸುವರ್ಣ ಪಾದುಕೆ ಸಂಚಾರಕ್ಕೆ ಭಕ್ತರು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.
ಮಂಗಳವಾರ ಸಂಜೆ ಶ್ರೀ ಕ್ಷೇತ್ರ ದೇವಿಮನೆಗೆ ಆಗಮಿಸಿದ ಸುವರ್ಣ ಪಾದುಕೆಗೆ ದೇವಿಮನೆ ಮೊಕ್ತೇಸರ ಉಮೇಶ ಹೆಗಡೆ ದಂಪತಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಭವತಾರಿಣಿ ಸೀಮಾ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ದೇವಿಮನೆ ಅರ್ಚಕ ಬಾಲಚಂದ್ರ ಭಟ್ಟ,ದೇವಿಮನೆ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ, ವೆ ಮೂ ಗುರು ಉಪಾಧ್ಯಾಯ ಮುಂತಾದವರಿದ್ದರು.
ನಂತರ ಭವತಾರಿಣಿ ವಲಯದಿಂದ ಭಿಕ್ಷೆ ನಡೆಸಲಾಯಿತು.ಮಧ್ಯಾಹ್ನ ಕೋಣಾರದ ಕೆರೆಕೋಡ್ಲು ರಾಮಕೃಷ್ಣ ಎಸ್ ಹೆಬ್ಬಾರ ಮನೆಯಲ್ಲಿ ಸುವರ್ಣ ಪಾದುಕೆಗೆ ಪೂಜೆ ಸಲ್ಲಿಸಲಾಯಿತು. ನಂತರ ಪಾದುಕೆ ಮರವಂತೆ ವಲಯಕ್ಕೆ ತೆರಳಿತು.ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸುವರ್ಣ ಪಾದುಕೆ ಸಂಚಾರದ ಉದ್ದೇಶ,ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು. ಇದಕ್ಕೂ ಪೂರ್ವದಲ್ಲಿ ಭಟ್ಕಳ ವಲಯದಲ್ಲೂ ಎರಡು ದಿನಗಳ ಕಾಲ ಸುವರ್ಣ ಪಾದುಕೆ ಸಂಚರಿಸಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.