ಕನ್ನಡಪ್ರಭ ವಾರ್ತೆ ತಾಂಬಾ:
ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಹಣದಲ್ಲಿ ಗೋಗಿಹಾಳ ಗ್ರಾಮದ ಮಹಿಳೆಯೊಬ್ಬರು ಹೋಳಿಗೆ ಊಟ ತಯಾರಿಸಿ ಊರಿನ ಜನರು ಹಾಗೂ ಶಾಸಕರಿಗೆ ಬಡಿಸಿದ್ದಾರೆ. ಬಾಬು ಅಬ್ಬಾಸರಿ ಚೌದರಿ ಗ್ಯಾರಂಟಿ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿ ಪ್ರೀತಿಗೆ ಪಾತ್ರವಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಸರ್ಕಾರ ನೀಡುವ ₹ ೨ ಸಾವಿರ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಈ ಕೆಲಸ ಮಾಡಿ ಮಾದರಿಯಾಗಿದ್ದಾರೆ. ಹೋಳಿಗೆ, ತುಪ್ಪ, ಹಾಲು, ಬದನೆಕಾಯಿ ಪಲ್ಯ, ಕಡಲೆ ಕಾಳು, ಚಪಾತಿ, ಅನ್ನ, ಸಾಂಬಾರು ಸಿದ್ದುಪಡಿಸಿದ್ದ ಗ್ರಾಮದ ಮೂರು ನೂರು ಜನರು ಸೇರಿ ಜನಪ್ರತಿನಿಧಿಗಳಿಗೆ ಸಿಹಿ ಊಟ ನೀಡಲಾಗಿದೆ.ಹೋಳಿಗೆ ಊಟ ಸ್ವೀಕರಿಸಿ ಮಾತನಾಡಿದ ಸಿಂದಗಿ ಶಾಸಕ ಅಶೋಕ ಮನಗೂಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ವಿಪಕ್ಷದವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿ ಸ್ವಾವಲಂಬಿ ಕರ್ನಾಟಕ ರೂಪಿಸುವತ್ತ ಸರ್ಕಾರ ಹೊರಟಿದೆ. ಹಳಸದ ಅನ್ನವಿಲ್ಲ ಅದು ಹಳಸುವ ಮುನ್ನ ಊಟ ಮಾಡಬೇಕು, ಬಾಡದ ಹೂವಿಲ್ಲ ಅದು ಬಾಡುವ ಮುನ್ನ ಮುಡಿಯಬೇಕು, ಕೆಡಲಾರದ ಹಣ್ಣುಗಳಿಲ್ಲ ಅವು ಕೆಡುವ ಮುನ್ನ ಸೇವಿಸಬೇಕು, ಸಾಯದ ಮನುಷ್ಯನಿಲ್ಲ ಸಾಯುವ ಮುನ್ನ ಸತ್ಯದ ಕೀರ್ತಿ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಂದಗಿ ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಕಾಂತನಗೌಡ ಪಾಟೀಲ್, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಸಲೀಂ ಚೌಧರಿ, ಸಿದ್ದು ಹತ್ತಳ್ಳಿ, ಮಲ್ಲನಗೌಡ ಬಿರಾದಾರ್, ರಾಯಗೊಂಡ ನಾಟಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.