ಡಿವಿಜಿ ಕುರಿತು ಉಪನ್ಯಾಸ । ಕಗ್ಗ ಸ್ಪರ್ಧೆ ವಿಜೇತರಿಗೆ ಬಹುಮಾನ
ಡಿವಿಜಿಯವರ ಮಂಕುತಿಮ್ಮನ ಕಗ್ಗ ಬದುಕಿನ ಸತ್ಯವನ್ನು ತಿಳಿಸುವ ಮಾರ್ಗದರ್ಶಿ ಗ್ರಂಥವಾಗಿದೆ ಎಂದು ಸಾಹಿತಿ ಪುರುಷೋತ್ತಮ ಕೋಲಾರ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರಸ್ವತಿ ಮೇಜರ್ ನಾಗರಾಜ್ ನೀಡಿದ ಡಿವಿಜಿಯವರ ಬದುಕು ಬರಹ ದತ್ತಿ ಉಪನ್ಯಾಸದಲ್ಲಿ ಡಿವಿಜಿ ಸಾಹಿತ್ಯದಲ್ಲಿ ಪರಿಸರ ಮತ್ತು ವಿಜ್ಞಾನ ವಿಷಯ ಕುರಿತು ಮಾತನಾಡಿದ ಅವರು, ಕಗ್ಗವು ಪ್ರಶ್ನಿಸುವ ಮತ್ತು ಆಲೋಚನಾ ಕ್ರಮವನ್ನು ವಿಸ್ತರಿಸುವ ಕೆಲಸ ಮಾಡುತ್ತದೆ ಎಂದರು.ದತ್ತಿದಾನಿ ಮೇಜರ್ ನಾಗರಾಜ್ ಮಾತನಾಡಿ, ಡಿವಿಜಿಯವರ ಕಗ್ಗ ಎಲ್ಲರೂ ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ದತ್ತಿಯನ್ನು ನೀಡಲಾಗಿದೆ. ಈ ವರ್ಷ ಮಕ್ಕಳಿಗೆ ಡಿವಿಜಿಯವರ ಕಗ್ಗ ವಾಚನ ಮತ್ತು ಅರ್ಥ ವಿವರಣೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಮುಂದಿನ ವರ್ಷ ಮಕ್ಕಳಿಗೆ ಮತ್ತು ಪೋಷಕರಿಗೆ ಕಗ್ಗ ವಾಚನ ಮತ್ತು ಅರ್ಥ ವಿವರಣೆ ಸ್ಪರ್ಧೆ ಏರ್ಪಡಿಸುವ ಉದ್ದೇಶವಿದೆ ಎಂದು ಹೇಳಿದರು.
ಡಿವಿಜಿ ಕಗ್ಗ ವಾಚನಾ ಮತ್ತು ಅರ್ಥ ವಿವರಣೆ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿರಾಯು ಪ್ರಗತಿ ಶಾಲೆ ಪ್ರಥಮ, ಆರಾಧ್ಯ ಹೆಗಡೆ ಪ್ರಗತಿ ಶಾಲೆ ದ್ವಿತೀಯ, ಅಮೃತಾ ಎಚ್.ಆರ್. ಪ್ಲೇಟೋ ಪಯೋನಿಯರ್ ಶಾಲೆ ಆವಿನಹಳ್ಳಿ ತೃತೀಯ, ತೇಜಸ್ವಿನಿ ಸೇವಾಸಾಗರ ಶಾಲೆ ಚತುರ್ಥ, ಸಿರಿ ಜ್ಞಾನಸಾಗರ ಶಾಲೆ ಪಂಚಮ ಬಹುಮಾನ ಗಳಿಸಿದರು.
ಪ್ರೌಢಶಾಲಾ ವಿಭಾಗ ವಿಭಾಗದಲ್ಲಿ ಸಹನಾ ಬಿ. ನಿರ್ಮಲ ಬಾಲಿಕಾ ಪ್ರೌಢಶಾಲೆ ಪ್ರಥಮ, ಬಿಂದು ಬಿ. ಸರ್ಕಾರಿ ಪ್ರೌಢಶಾಲೆ ಆವಿನಹಳ್ಳಿ ದ್ವಿತೀಯ, ಅನ್ವಿತಾ ಪ್ರಗತಿ ಪ್ರೌಢಶಾಲೆ ತೃತೀಯ, ತನ್ಮಯಿ ದಾಸ್ ಪ್ರಗತಿ ಪ್ರೌಢಶಾಲೆ ಚತುರ್ಥ ಬಹುಮಾನ ಪಡೆದುಕೊಂಡರು.