ಕೊರಲಕೊಪ್ಪ,ಕೆ.ಕಣಬೂರು, ಸಾತ್ಕೋಳಿ ಭಾಗದಲ್ಲಿ ಭತ್ತದ ಗದ್ದೆ, ಅಡಕೆ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡುಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ನಿವೃತ್ತ ಯೋಧ ಹೊಸಕೊಪ್ಪ ಯತಿರಾಜ್ ಅವರ ಮನೆಯಿಂದ 200 ಮೀಟರ್ ದೂರದ ಕೆರೆಗೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಬಂದು ನೀರು ಕುಡಿದು ನಂತರ ಈಜಾಡುತ್ತ ಅರ್ಧ ಗಂಟೆ ಕಳೆದ 12 ಕಾಡಾನೆಗಳ ಹಿಂಡು ನಂತರ ಕೆರೆಯಿಂದ ಕಾಡಿಗೆ ಪ್ರಯಾಣ ಬೆಳೆಸಿವೆ.
ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರಗತಿಪರ ಕೃಷಿಕ ಯತಿರಾಜ್, ಕಳೆದ ವರ್ಷ ಇದೇ ಕೆರೆಗೆ 20 ಕಾಡಾನೆಗಳ ಹಿಂಡು ಬಂದು ನೀರು ಕುಡಿದು ಹೋಗಿತ್ತು. ಈ ವರ್ಷ ಆನೆ ಮರಿಗಳು ಸೇರಿದಂತೆ 12 ಕಾಡಾನೆಗಳು ಬಂದಿವೆ. ಕಳೆದ ಕೆಲವು ದಿನಗಳಿಂದ 1-2 ಆನೆ ಮಾತ್ರ ಬರುತ್ತಿತ್ತು. ಆದರೆ, ಶುಕ್ರವಾರ 12 ಆನೆಗಳ ಹಿಂಡು ಬಂದಿದೆ. ಲಕ್ಕವಳ್ಳಿ ವನ್ಯಜೀವಿ ಅರಣ್ಯದಿಂದ ಭದ್ರಾ ಹಿನ್ನೀರು ದಾಟಿ ಪಕ್ಕದ ಗ್ರಾಮ ಗಳಾದ ಗುಳದಮನೆ, ಹಾಗಲಮನೆ, ಸಾತ್ಕೋಳಿ ಕಡೆಯಿಂದ ಕಾಡಾನೆಗಳು ಬರುತ್ತಿವೆ ಎಂದರು.ಬತ್ತ, ಅಡಕೆ ಹಾನಿ: ಕಳೆದ ಕೆಲವು ದಿನಗಳಿಂದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲ ಕೊಪ್ಪ, ಕೆ.ಕಣಬೂರು, ಸಾತ್ಕೋಳಿ, ಮುಂಡಗೋಡು ಭಾಗದಲ್ಲಿ ಕಾಡಾನೆಗಳ ಹಿಂಡು ಬತ್ತದ ಗದ್ದೆ, ಅಡಕೆ ತೋಟಗಳಿಗೆ ದಾಳಿ ಇಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.