ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘ ಶತಮಾನೋತ್ಸವ ಮತ್ತು ಶ್ರೀ ಶ್ರೀ ಶ್ರೀ ಯಾದವಾನಂದ ಸ್ವಾಮೀಜಿಗಳ 16ನೇ ಪಟ್ಟಾಭಿಷೇಕ ಮತ್ತು ಬೃಹತ್ ಸಮಾವೇಶ ಏ.20 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿಯಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರಿನಿವಾಸ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಗೊಲ್ಲ, ಹಣಬರ, ಯಾದವ ಮತ್ತು ಗೋಪಾಲ ಹೀಗೆ 28 ಉಪಜಾತಿಗಳಿಂದ ಕೂಡಿದ 25 ರಿಂದ 30 ಲಕ್ಷ ಜನಸಂಖ್ಯೆ ಇದೆ. ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಲು ಚಿಕ್ಕೋಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ನಡೆಯುವುದರಿಂದ ಜಿಲ್ಲೆಯ ಎಲ್ಲ ಶಾಸಕರು, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಗಮೀಸಲಿದ್ದಾರೆ ಎಂದು ವಿವರಿಸಿದರು.ಮಾಜಿ ಸಚಿವ ದಿ.ಎ.ಕೃಷ್ಣಪ್ಪ ಸಂಘಟನೆಗೆ ಬೆಂಗಳೂರಿನಲ್ಲಿ ಜಾಗ ಸಿಕ್ಕಿತ್ತು. ಈಗ ನಾನು ಸಂಘದ ಅಧ್ಯಕ್ಷನಾದ ಬಳಿಕ ರಾಜ್ಯದಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಲಾಗಿದೆ. ರಾಜಕೀಯವಾಗಿ ವಿಶೇಷ ಪ್ರಾತಿನಿಧ್ಯ ಸಿಗಲು ಸಮಾವೇಶ ಮಾಡಲಾಗುತ್ತದೆ. ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸಮಾವೇಶದಲ್ಲಿ ಮುಖ್ಯಮಂತ್ರಿಗೆ ಒತ್ತಾಯಿಸಲಾಗುತ್ತದೆ ಎಂದರು.
ಈ ವೇಳೆ ಚಿತ್ರದುರ್ಗದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಮುಖಂಡರಾದ ಲಕ್ಷ್ಮೀನಾರಾಯಣ, ವಿಠ್ಠಲ ಯಾದವ, ಶಶಿಕುಮಾರ ನರಸಿಂಹಗೌಡ, ಬಿ.ಎಂ.ಕೃಷ್ಣಪ್ಪ, ವಿಠ್ಠಲ ಖೋತ, ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಪುರಸಭೆ ಸದಸ್ಯ ಸಂತೋಷ ಜೂಗಳೆ, ಶಂಕರ ಟವಳೆ, ಸಂತೋಷ ಟವಳೆ, ಸಿದ್ರಾಮ ಮುಂಡೆ, ರಾಜು ಸಂಕೇಶ್ವರಿ, ರಾಮಾ ವಂಟಗೂಡೆ, ಶಿವಲಿಂಗ ಪೂಜಾರಿ, ಜಯಗೌಡ ಪಾಟೀಲ, ಸಚೀನ ಕೋತ, ಸುಂದರ ಮುಂಡೆ ಇದ್ದರು.