ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮೈದಾನದಲ್ಲಿ ಗವಿಮಠ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಪುರುಷರು ಮತ್ತು ಮಹಿಳೆಯರ ಆಹ್ವಾನಿತ ತಂಡಗಳಿಂದ ಪುರಾತನ ಕಾಲದಿಂದಲೂ ನಡೆದು ಬಂದ ಭಾರಿ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗಳು ನಡೆದವು.ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಮ್ಮನವರು, ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಲು ಕ್ರೀಡೆಗಳು ಪ್ರೇರೇಪಣೆ ನೀಡುತ್ತವೆ. ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹದ ಕೊರತೆ ಇದೆ ಎಂದರು.ನಾನು ಛಲ ಬಿಡದೇ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕ ಪಡೆದ ನಂತರವೇ ನನಗೆ ಅಂಚೆ ಇಲಾಖೆಯಲ್ಲಿ ಕ್ರೀಡಾ ವಿಭಾಗದಿಂದ ಉದ್ಯೋಗ ಪಡೆಯಲು ಸಾಧ್ಯವಾಯಿತು. ಜಾತ್ರಾ ಕಾರ್ಯಕ್ರಮದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಅವಕಾಶ ನೀಡಿದ್ದು ತುಂಬ ಸಂತೋಷದ ವಿಷಯ ಎಂದು ಹೇಳಿದರು.ಪುರುಷರ ವಿಭಾಗದಲ್ಲಿ ವಿಜೇತರು: ಕೊಪ್ಪಳ ನಾಗರಾಜ್ ದೊಡ್ಡಮನಿ, ಲಕ್ಕುಂಡಿಯ ಸುನೀಲ್, ಲಕ್ಕುಂಡಿಯ ಮಂಜು, ದಾವಣಗೆರೆಯ ಪ್ರಜ್ವಲ್, ದಾವಣಗೆರೆಯ ದಾದಾಪೀರ್, ಲಕ್ಕುಂಡಿಯ ಪರಶುರಾಮ್, ಪುಣೆಯ ರೂಪೇಶ್ ಪವಾರ್, ದಾವಣಗೆರೆಯ ಸಂತೋಷ್, ದಾವಣಗೆರೆಯ ಮುಬಾರಕ್, ಮರಮನಹಳ್ಳಿಯ ಅಬಿ, ದಾವಣಗೆರೆಯ ಆಕಾಶ್, ಹರಪನಹಳ್ಳಿಯ ಕೆಂಚಪ್ಪ, ಮರಿಯಮ್ಮನ ಹಳ್ಳಿಯ ಹನುಮಂತ, ಅಥಣಿಯ ಮಹೇಶಕುಮಾರ್ ಲಂಗೋಟಿ.ಮಹಿಳಾ ವಿಭಾಗದಲ್ಲಿ ವಿಜೇತರು: ಮುಧೋಳದ ವಿದ್ಯಾಶ್ರೀ, ಕೊಲ್ಲಾಪುರದ ಸುನಿತಾ ಮಗದುಂ, ಪುಣೆಯ ವೈಷ್ಣವಿ ವಿಜೇತರಾದರು.