ಅಂಗವಿಕಲತೆ ಮೆಟ್ಟಿ ನಿಂತ ಶಿವಮೊಗ್ಗದ ಕನ್ನಡ ಪ್ರೇಮಿ

KannadaprabhaNewsNetwork |  
Published : Nov 17, 2025, 01:02 AM IST
kannada

ಸಾರಾಂಶ

 ಕನ್ನಡ ಮಾತನಾಡಿದರೆ ಅವಮಾನ ಎಂಬಂತಹ ಮನಸ್ಥಿತಿಯ ವ್ಯಕ್ತಿಗಳು ನಮ್ಮಲ್ಲೇ ಇರುವಾಗ ಕನ್ನಡದ ಕಿಚ್ಚನ್ನು ಮನದಲ್ಲಿಟ್ಟುಕೊಂಡು ತಾನು ಅಂಗವಿಕಲನಾಗಿದ್ದರೂ ಕನ್ನಡ ಭಾಷೆ ಮತ್ತು ಅಕ್ಷರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಯುವಕ ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂಥದ್ದು.

ಗಣೇಶ್‌ ತಮ್ಮಡಿಹಳ್ಳಿ

 ಶಿವಮೊಗ್ಗ  : ಕರ್ನಾಟಕದಲ್ಲಿದ್ದು, ಕನ್ನಡಿಗನಾಗಿದ್ದರೂ ಕನ್ನಡ ಮಾತನಾಡಿದರೆ ಅವಮಾನ ಎಂಬಂತಹ ಮನಸ್ಥಿತಿಯ ವ್ಯಕ್ತಿಗಳು ನಮ್ಮಲ್ಲೇ ಇರುವಾಗ ಕನ್ನಡದ ಕಿಚ್ಚನ್ನು ಮನದಲ್ಲಿಟ್ಟುಕೊಂಡು ತಾನು ಅಂಗವಿಕಲನಾಗಿದ್ದರೂ ಕನ್ನಡ ಭಾಷೆ ಮತ್ತು ಅಕ್ಷರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಯುವಕ ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂಥದ್ದು.

ಈ ಯುವಕನ ಹೆಸರು ಸಿ.ಆರ್.ಶಿವಕುಮಾರ್. ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಇವರು ಸಮಾಜ ಸೇವಕ. ಇವರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ. ಹಾಗಾಗಿ, ಅಂಗವಿಕಲರಿಗೆ ಸೌಲಭ್ಯ ಒದಗಿಸುವುದೂ ಸೇರಿದಂತೆ ತಮ್ಮ ವಿವಿಧ ಸಮಾಜ ಸೇವೆ ನಡುವೆ, ಜಿಲ್ಲೆಯ ನೂರಾರು ಹಳ್ಳಿಗಳನ್ನು ಸುತ್ತಿ ಅಲ್ಲಿ ಕನ್ನಡದ ಕಂಪನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ.

ತ್ರಿಚಕ್ರ ವಾಹನದಲ್ಲೇ ತಿರುಗಾಟ:

ತಾವು ಅಂಗವಿಕಲರಾಗಿದ್ದರೂ ತಮ್ಮ ವೈಫಲ್ಯಗಳನ್ನು ಮರೆಮಾಚಿ ಕನ್ನಡ ಉಳಿವಿಗೆ ಹೋರಾಡುತ್ತಿರುವ ಇವರ ಕಾಯಕಕ್ಕೆ ಜಿಲ್ಲೆಯ ಜನ ಭೇಷ್‌ ಎನ್ನುತ್ತಿದ್ದಾರೆ. ತಮ್ಮ ಜಿಲ್ಲೆಯಲ್ಲಿ ಕನ್ನಡ ಉಳಿಯಬೇಕು, ಬೆಳೆಯಬೇಕು, ಜೊತೆಗೆ ಪ್ರತಿಯೊಂದು ಮನೆಯಲ್ಲೂ ಕನ್ನಡದ ಬಾವುಟ ಹಾರಾಡಬೇಕು ಎಂಬ ಉತ್ಕಟ ಇಚ್ಛೆಯೊಂದಿಗೆ ತಮ್ಮ ತ್ರಿಚಕ್ರ ವಾಹನದಲ್ಲಿ ತಿರುಗಾಡುತ್ತಾ ನೂರಾರು ಹಳ್ಳಿ, ನಗರಗಳಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಾ ಬಂದಿದ್ದಾರೆ. ಕನ್ನಡ ಭಾಷೆ, ನುಡಿ, ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದಾರೆ. ಕನ್ನಡ ಭಾಷೆ ಬಗ್ಗೆ ಅನೇಕ ಕವನಗಳನ್ನೂ ರಚಿಸಿದ್ದಾರೆ.ಡಿಪ್ಲೋಮಾ ಪದವೀಧರ:

ಡಿಪ್ಲೋಮಾ ಇನ್ ಕಂಪ್ಯೂಟರ್ ಪದವಿ ಪಡೆದಿರುವ ಶಿವಕುಮಾರ್‌, ತಮ್ಮಂತೆ ಉಳಿದ ಅಂಗವಿಕಲರು ಎದುರಿಸುವ ಕಷ್ಟಕೋಟಲೆಗಳನ್ನು ಅರಿತು, ಅವರ ಕಲ್ಯಾಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ತ್ರಿಚಕ್ರವಾಹನದಲ್ಲಿಯೇ ಜಿಲ್ಲೆಯನ್ನು ಸುತ್ತುತ್ತ ಅಂಗವಿಕಲರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಅಪ್ರತಿಮ ಸಾಧಕ. ಖಾಸಗಿ ಸಂಸ್ಥೆಯ ಜೊತೆಗೂಡಿ ಶಿವಮೊಗ್ಗ ಜಿಲ್ಲೆಯಲ್ಲದೆ ಅನೇಕ ಜಿಲ್ಲೆಗಳಲ್ಲಿ ಒಟ್ಟು 8,000 ಕ್ಕಿಂತ ಹೆಚ್ಚು ವಿಶೇಷಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಯುಡಿಐಡಿ ಕಾರ್ಡ್ ಹಾಗೂ ಪ್ರತಿ ತಿಂಗಳಿಗೆ ಬರುವಂತ ಮಾಶಾಸನವನ್ನು ಮಾಡಿಸಿಕೊಟ್ಟಿದ್ದಾರೆ. ಈ ಸಮಾಜ ಸೇವೆಯ ವೇಳೆ, ಕನ್ನಡದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಲು, ಕನ್ನಡ ಭಾಷೆಯ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅವರನ್ನು ಪ್ರೇರೇಪಿಸುತ್ತಿದ್ದಾರೆ.

ಇಲ್ಲಿವರೆಗೆ 138 ಹಳ್ಳಿಗಳನ್ನು ಸುತ್ತಿದ್ದಾರೆ. ಹೋದಲ್ಲೆಲ್ಲ ಜನರಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಿ, ಸ್ವಾತಂತ್ರ್ಯ ದಿನದಂದು ಎಲ್ಲರ ಮನೆ ಮೇಲೆ ರಾಷ್ಟ್ರಧ್ವಜ ಹಾರಾಡುವಂತೆ ಕನ್ನಡ ರಾಜ್ಯೋತ್ಸವದಂದು ಪ್ರತಿಯೊಂದು ಮನೆಯಲ್ಲಿ ಕನ್ನಡ ಬಾವುಟ ಹಾರಿಸಿ ಎಂದು ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇವರ ಕನ್ನಡ ಸೇವೆಯನ್ನು ಪರಿಗಣಿಸಿ, ಕರುನಾಡ ಕಣ್ಮಣಿ ಪ್ರಶಸ್ತಿ, ಕರುನಾಡ ಯುವರತ್ನ ಪ್ರಶಸ್ತಿ, ಹೆಮ್ಮೆಯ ಸಾಧಕ ಪ್ರಶಸ್ತಿ, ಪ್ರಜಾಸೇವೆ ರತ್ನ ಪ್ರಶಸ್ತಿ, ಕೊರೋನ ವಾರಿಯರ್ ಪ್ರಶಸ್ತಿ , ಸೇವಾಸುರಭ ಪ್ರಶಸ್ತಿ, ವಿಶ್ವಕನ್ನಡ ಪುನೀತ್ ಸ್ಪೂರ್ತಿ ಪ್ರಶಸ್ತಿ, ಸೇವರತ್ನ ಪ್ರಶಸ್ತಿಗಳು ಬಂದಿವೆ. ಅಷ್ಟೇ ಅಲ್ಲದೆ, ಇವರ ಸಾಧನೆಯನ್ನು ಮೆಚ್ಚಿ 450ಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ.ಕೋಟ್‌:

ಕನ್ನಡಾಂಬೆಯೇ ಮುಖ್ಯ

ನನಗೆ ತಾಯಿ ಮುಖ್ಯನಾ?, ಕನ್ನಡಾಂಬೆ ಮುಖ್ಯನಾ? ಅಂದರೆ ನಂಗೆ ಕನ್ನಡಾಂಬೆ ಮುಖ್ಯ. ಕಾರಣ ನಮಗೆ ಜನ್ಮ ನೀಡಿದ ನಮ್ಮ ತಾಯಿಗೂ ಕೂಡ ಜನ್ಮ ನೀಡಿದ ತಾಯಿ ಈ ಕನ್ನಡ ಭುವನೇಶ್ವರಿ ತಾಯಿಯೇ ಎಂಬುದನ್ನು ನಾವು ಮರೆಯಬಾರದು. ಇದೆ ರೀತಿ ಕನ್ನಡ ತಾಯಿಯ ಸೇವೆಯನ್ನು ನಂಗೆ ಎಷ್ಟು ಶಕ್ತಿ ಇದೆಯೋ ಅಲ್ಲಿಯವರೆಗೆ ಅದನ್ನು ತುಂಬು ಮನಸ್ಸಿಂದ ಇಷ್ಟಪಟ್ಟು ಮಾಡುತ್ತೇನೆ.- ಸಿ.ಆರ್‌.ಶಿವಕುಮಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ