ಗಣಿತವನ್ನು ಸರಳವಾಗಿ ಕಲಿಸುವ ಪ್ರಯೋಗಾಲಯ

KannadaprabhaNewsNetwork |  
Published : Sep 05, 2026, 01:15 AM IST
1.ಡಯಟ್ ಉಪನ್ಯಾಸಕ ಕೆ.ಪಿ.ಬಾಬು | Kannada Prabha

ಸಾರಾಂಶ

ರಾಮನಗರ: ಗಣಿತ ಎಂದರೆ ಸಾಕು ಮಕ್ಕಳ ಮುಖದಲ್ಲಿ ಆತಂಕ ಮೂಡುತ್ತದೆ. ಬಹುತೇಕ ಮಕ್ಕಳಿಗೆ ಗಣಿತ ಎಂದರೆ ಕಷ್ಟದ ವಿಷಯವೇ ಸರಿ. ಆದರೆ, ಇದಕ್ಕೆ ಪರಿಹಾರವಾಗಿ ಉಪನ್ಯಾಸಕ ಕೆ.ಪಿ.ಬಾಬು ಅವರು ರಚಿಸಿರುವ ಗಣಿತ ಪ್ರಯೋಗಾಲಯ ''ಗಣಿತ ಕಬ್ಬಿಣದ ಕಡಲೆಯಲ್ಲ ಅದು ಸುಲಿದ ಬಾಳೆಹಣ್ಣಿನಂತೆ ಎಂಬ ಸತ್ಯಾಂಶ ಅರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ

ರಾಮನಗರ: ಗಣಿತ ಎಂದರೆ ಸಾಕು ಮಕ್ಕಳ ಮುಖದಲ್ಲಿ ಆತಂಕ ಮೂಡುತ್ತದೆ. ಬಹುತೇಕ ಮಕ್ಕಳಿಗೆ ಗಣಿತ ಎಂದರೆ ಕಷ್ಟದ ವಿಷಯವೇ ಸರಿ. ಆದರೆ, ಇದಕ್ಕೆ ಪರಿಹಾರವಾಗಿ ಉಪನ್ಯಾಸಕ ಕೆ.ಪಿ.ಬಾಬು ಅವರು ರಚಿಸಿರುವ ಗಣಿತ ಪ್ರಯೋಗಾಲಯ ''''ಗಣಿತ ಕಬ್ಬಿಣದ ಕಡಲೆಯಲ್ಲ ಅದು ಸುಲಿದ ಬಾಳೆಹಣ್ಣಿನಂತೆ ಎಂಬ ಸತ್ಯಾಂಶ ಅರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಅಷ್ಟಕ್ಕೂ ಈ ಗಣಿತ ಪ್ರಯೋಗಾಲಯವನ್ನು ಕೆ.ಪಿ.ಬಾಬು ರಾಮನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕೊಠಡಿಯಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗಣಿತ ಇಷ್ಟೊಂದು ಸುಲಭವೇ ಎಂದು ಆಚ್ಚರಿಗೊಳ್ಳುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಕೆ.ಪಿ.ಬಾಬು, ಚಿಕ್ಕಬ್ಯಾಡರಹಳ್ಳಿ, ಬೇಲೂರು ಸರ್ಕಾರಿ ಪ್ರೌಢಶಾಲೆ ಹಾಗೂ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಮಕ್ಕಳ ಕಲಿಕಾ ಮಟ್ಟ ವೃದ್ಧಿಸಲು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕರಾದವರು. 2022ರಿಂದ ಡಯಟ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಬು ರಚಿಸಿರುವ ಪ್ರಯೋಗಾಲಯದಲ್ಲಿ ಕಲಿಕೋಪಕರಣಗಳು ವಿದ್ಯಾರ್ಥಿಗಳಿಗೆ ಕುತೂಹಲ, ತಾರ್ಕಿಕ ಚಿಂತನೆ ಬೆಳೆಸುವುದರ ಜೊತೆಗೆ ಮನರಂಜನೆಯನ್ನೂ ನೀಡುತ್ತವೆ. ಕಲಿಕೋಪಕರಣಗಳ ಬಳಕೆ, ಅಗತ್ಯತೆ ಮತ್ತು ತಯಾರಿಕಾ ವಿಧಾನವನ್ನು ಬಹಳ ಅರ್ಥಪೂರ್ಣವಾಗಿ ಮನದಟ್ಟಾಗುವಂತೆ ಬಾಬು ವಿವರಿಸುತ್ತಾರೆ. ಈ ಪ್ರಯೋಗಾಲಯ ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರಿಗೂ ಹೊಸ ಹೊಸ ವಿಷಯಗಳನ್ನು ಕಲಿಯಲು ಪ್ರೇರೇಪಿಸುತ್ತದೆ.

ಪ್ರಯೋಗಾಲಯದಲ್ಲಿರುವ ಭಾರತೀಯ ಮತ್ತು ವಿದೇಶಿ ಗಣಿತಜ್ಞರ ಭಾವಚಿತ್ರಗಳು, Low Cost, No Cost ಮೆಟಿರಿಯಲ್ ಗಳನ್ನು ಬಳಸಿ ರಚಿಸಿರುವ ವಿವಿಧ ಕಲಿಕೋಪಕರಣಗಳನ್ನು ತೋರಿಸಿ, ಬರುವಂತಹ ಕಲಿಕಾರ್ಥಿಗಳಿಗೆ ಮನಮುಟ್ಟುವಂತೆ, ಅರ್ಥಪೂರ್ಣವಾಗಿ ವಿಷಯಗಳನ್ನು ತಿಳಿಸುತ್ತಾ ಮತ್ತಷ್ಟು ಕಲಿಯಲು- ಕಲಿಸಲು ಪ್ರೇರಣೆ ನೀಡುತ್ತಾರೆ.

ಶಿಕ್ಷಕರ ತರಬೇತಿ ಕಾರ್ಯಾಗಾರಗಳಲ್ಲಿ ಹಾಗೂ ಶಾಲೆಗಳಿಗೂ ಭೇಟಿ ನೀಡಿ ಮಕ್ಕಳಲ್ಲಿ ಕಲಿಕೆ ಆಸಕ್ತಿ ಹೆಚ್ಚಿಸುವ, ಪ್ರೇರಣೆಯಾಗುವ ರೀತಿ ಹಾಸ್ಯ ಮಿಶ್ರಿತವಾಗಿ ಪಾಠ ಮಾಡುವುದರ ಜೊತೆಗೆ ಮಕ್ಕಳಿಗೆ ನೆನಪಿನ ತಂತ್ರ, ಪರೀಕ್ಷೆ ತಯಾರಿ ಹೇಗೆ, ಓದುವ ಬಗೆ, ವೇಳಾಪಟ್ಟಿಯನ್ನು ತಿಳಿಸುವುದರಿಂದ ಮಕ್ಕಳ ಕಲಿಕಾ ಮಟ್ಟ ವೃದ್ಧಿಗೊಳ್ಳುವಂತೆ ಮಾಡುತ್ತಿದ್ದಾರೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿಯಲ್ಲಿ ಗಣಿತವನ್ನು ಪ್ರಯೋಗಾತ್ಮಕವಾಗಿ ಕಲಿಸಿಕೊಡಲಾಗುತ್ತಿದೆ. ಕೇವಲ ಕ್ಲಾಸ್‌ರೂಮಿನ ಬೋರ್ಡ್ ಹಾಗೂ ಪುಸ್ತಕಗಳಲ್ಲಿ ರೇಖೆ ಹಾಗೂ ಗಣಿತದ ಚಿಹ್ನೆಗಳ ಮೂಲಕ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಅವುಗಳ ಆಕೃತಿಗಳನ್ನು ಸ್ಪರ್ಶಿಸುತ್ತ ಹಾಗೂ ಅವುಗಳನ್ನು ಅವಿಷ್ಕರಿಸಿದವರು ಮತ್ತು ಅದರ ಉದ್ದೇಶಗಳನ್ನು ಸಹ ತಿಳಿಯಬಹುದಾಗಿದೆ. ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ ಮಾತ್ರವಲ್ಲದೆ ರೇಖಾಗಣಿತವನ್ನು ಸಹ ಆಟಿಕೆ ಮೂಲಕ ಆಸ್ವಾದಿಸುತ್ತ ಕಲಿಯಲು ಈ ಪ್ರಯೋಗಾಲಯ ವೇದಿಕೆಯಾಗಿದೆ.

ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಸೂತ್ರಗಳ ಚಾರ್ಟ್‌, ಗಣಿತ ಆಕೃತಿ, ಗ್ರಾಫ್ ಬೋರ್ಡ್, ಕೋನಗಳ ವಿಧಗಳು, ತ್ರಿಕೋನಮಿತಿ ಮಾದರಿಗಳಿವೆ. ಸರಳ ಲೆಕ್ಕಗಳ ಮಾದರಿ ಗಮನ ಸೆಳೆಯುತ್ತವೆ. ಇಲ್ಲಿ ಅಳವಡಿಸಿರುವ ಮಾದರಿಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ಲೆಕ್ಕಗಳನ್ನು ಸರಳವಾಗಿ ಬಿಡಿಸಬಹುದಾಗಿದೆ.

ಮಗ್ಗಿಗಳನ್ನು ಬರೆಯಲು ಅನುಕೂಲವಾಗುವಂತೆ ಫಲಕ ಹಾಗೂ ಕೋಡಿಂಗ್ ಮತ್ತು ಡಿಕೋಡಿಂಗ್ ಮೂಲಕ ಇತಿಹಾಸದ ದಿನಾಂಕಗಳನ್ನು ತಕ್ಷಣ ಕಂಡುಕೊಳ್ಳುವ ಮಾದರಿ ರಚಿಸಿದ್ದಾರೆ. ಸರಳ ನಿಯಮದಿಂದ ವರ್ಗ ಕಂಡು ಹಿಡಿಯುವ ಮಾದರಿ ಜೊತೆಗೆ ವಿವಿಧ ಬಗೆಯ ಫಲಕಗಳನ್ನು ಜೋಡಿಸಲಾಗಿದೆ.

ದಿನನಿತ್ಯದ ವಸ್ತುಗಳಲ್ಲೂ ಹೇಗೆ ಗಣಿತದ ಪರಿಕಲ್ಪನೆ ನೋಡಬಹುದು ಎಂಬುದರ ಬಗ್ಗೆಯೂ ಬಾಬು ತಿಳಿಸಿಕೊಡುತ್ತಾರೆ. ಅಂದರೆ, ವಿದ್ಯಾರ್ಥಿಗಳು ತರಗತಿಗಳಿಗೆ ಬಂದಾಗ ಕೊಠಡಿ ಬಾಗಿಲು ಯಾವ ಆಕಾರದಲ್ಲಿದೆ? ಗೋಡೆ ಮೇಲಿರುವ ಗಡಿಯಾರ ಯಾವ ಆಕಾರದಲ್ಲಿದೆ? ಜಾಮಿಟ್ರಿ ಬಾಕ್ಸ್ , ಸೀಮೆಸುಣ್ಣದ ಡಬ್ಬಿಗಳು ಯಾವ ಆಕಾರದಲ್ಲಿದೆ? ಹೀಗೆ ಮಕ್ಕಳ ತಲೆಯಲ್ಲಿ ಹೊಳೆಯುವ ಹಲವು ಪ್ರಶ್ನೆಗಳಿಗೆ ಈ ಪ್ರಯೋಗಾಲಯ ಉತ್ತರ ನೀಡಲಿದೆ ಎನ್ನುತ್ತಾರೆ ಕೆ.ಪಿ.ಬಾಬು.ಕೋಟ್ ..............

ಗಣಿತವೇ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲ ಭಾಷೆ. ಗಣಿತ ಕೇವಲ ಲೆಕ್ಕ ಹಾಕುವ ವಿಷಯವಲ್ಲ, ಅದು ಲಾಜಿಕ್ ತರ್ಕಶಕ್ತಿ, ವಿವೇಚನಾ ಶಕ್ತಿ, ನಿರ್ಣಯ ಶಕ್ತಿ, ಆಲ್ ರೌಂಡ್ ಡೆವಲಪ್ ಮೆಂಟ್ ಗೆ ಪೂರಕ. ಗಣಿತವನ್ನು ಮನರಂಜನೆ ತಂತ್ರ, ಆಟ, ಗುಂಪು ಚರ್ಚೆ ವಿಧಾನ, ರಸಪ್ರಶ್ನೆ, ಗಣಿತದ ಒಗಟುಗಳ ಮೂಲಕ ಮನಮುಟ್ಟುವಂತೆ ತಿಳಿಸಬೇಕು.

- ಕೆ.ಪಿ.ಬಾಬು, ಉಪನ್ಯಾಸಕರು, ಡಯಟ್

4ಕೆಆರ್ ಎಂಎನ್ 1,2,3.ಜೆಪಿಜಿ

1.ಡಯಟ್ ಉಪನ್ಯಾಸಕ ಕೆ.ಪಿ.ಬಾಬು

2.ಕೆ.ಪಿ.ಬಾಬುರವರು ಮಕ್ಕಳಿಗೆ ಪಾಠ ಮಾಡುತ್ತಿರುವುದು.

3.ಕೆ.ಪಿ.ಬಾಬು ರಚಿಸಿರುವ ಗಣಿತ ಪ್ರಯೋಗಾಲಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕಪಡೆ ಯೋಜನೆ ಉದ್ದೇಶ ಮಹಿಳಾ ಸಬಲೀಕರಣ, ಸುರಕ್ಷತೆ: ಲಕ್ಷ್ಮೀ
ಸಿಂಡಿಕೇಟ್ ಸದಸ್ಯತ್ವದಿಂದ ಕನ್ನಾಳೆ ವಜಾಗೊಳಿಸಿ